×
Ad

ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿ ವಿಳಂಬ: ಬಲಿಯಾಗುತ್ತಿದ್ದಾರೆ ವಾಹನ ಸವಾರರು

Update: 2019-05-03 22:35 IST

ಬೆಂಗಳೂರು, ಮೇ.3: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜಧಾನಿಯ ಗುಂಡಿಗಳನ್ನು ಮುಚ್ಚುವುದಕ್ಕಾಗಿಯೇ ಪ್ರತಿ ವರ್ಷ ಕೋಟ್ಯಂತರ ರೂ. ತೆರಿಗೆ ಹಣವನ್ನು ಖರ್ಚು ಮಾಡುತ್ತಿದೆ. ಆದರೆ, ಮುಚ್ಚಿದ ಕೆಲವೇ ದಿನಗಳಲ್ಲಿ ಗುಂಡಿಗಳು ಯಥಾಪ್ರಕಾರ ಬಾಯಿ ತೆರೆದು, ವಾಹನ ಸವಾರರನ್ನು ಬಲಿ ಪಡೆಯುತ್ತಿವೆ.

ನಗರದಲ್ಲಿ ಸುಮಾರು 14 ಸಾವಿರ ಕಿ.ಮೀ ಉದ್ದದ 95 ಸಾವಿರ ರಸ್ತೆಗಳಿವೆ. ಈ ರಸ್ತೆಗಳ ಅಭಿವೃದ್ಧಿ, ಡಾಂಬರೀಕರಣ, ದುರಸ್ತಿಗಾಗಿ ಸಾವಿರಾರು ಕೋಟಿ ರೂ. ವ್ಯಯಿಸಲಾಗುತ್ತಿದೆ. ವಿಪರ್ಯಾಸವೆಂದರೆ ಡಾಂಬರು ಹಾಕಿದ ಮೂರು-ನಾಲ್ಕು ತಿಂಗಳುಗಳಿಗೆ ರಸ್ತೆಗಳು ಗುಂಡಿ ನಿರ್ಮಾಣವಾಗುತ್ತಿವೆ. ಈಗಾಗಲೇ ಮುಂಗಾರು ಮಳೆ ಶುರುವಾಗಿದ್ದು, ಸಿಲಿಕಾನ್ ಸಿಟಿಯ ಹಲವು ರಸ್ತೆಗಳಲ್ಲಿ ಗುಂಡಿಗಳು ಗೋಚರಿಸುತ್ತಿವೆ. ಇದನ್ನು ಸರಿಪಡಿಸಬೇಕಾದ ಪಾಲಿಕೆಯ ಮೂಲಸೌಕರ್ಯ ವಿಭಾಗದ ಎಂಜಿನಿಯರ್‌ಗಳು ನಿದ್ರೆಗೆ ಜಾರಿದ್ದಾರೆ ಎಂದು ನಾಗರಿಕರು ಆರೋಪಿಸುತ್ತಾರೆ.

ರಸ್ತೆಗಳ ಅಭಿವೃದ್ಧಿ, ಡಾಂಬರೀಕರಣ ಮತ್ತು ಗುಂಡಿ ಮುಚ್ಚುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿರುವುದಾಗಿ ಎಂಜಿನಿಯರ್‌ಗಳು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ನಗರದ ರಸ್ತೆಗಳಲ್ಲಿ ಒಂದು ಸುತ್ತು ಹಾಕಿ ಬಂದರೆ ಅಧಿಕಾರಿಗಳ ಬಣ್ಣ ಬಯಲಾಗುತ್ತದೆ. ಈ ವರ್ಷವೂ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ನ್ಯಾಯಾಲಯವೇ ಅಧಿಕಾರಿಗಳ ಕಿವಿ ಹಿಂಡಬೇಕಾದ ಪರಿಸ್ಥಿತಿ ಬಂದರೂ ಬರಬಹುದು. ಕಳೆದ ವರ್ಷ ಹೈಕೋರ್ಟ್ ಚಾಟಿ ಬೀಸಿ ಗುಂಡಿಗಳನ್ನು ಮುಚ್ಚಲು ಗಡುವು ನೀಡಿತ್ತು.

ಹೈಕೋರ್ಟ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಗುಂಡಿಗಳಿಗೆ ಟಾರು ಚೆಲ್ಲಿ ಹೋಗಿದ್ದರು. ಇದೀಗ ಆ ಗುಂಡಿಗಳೆಲ್ಲವೂ ವಾಹನ ಸವಾರರ ಜೀವ ತೆಗೆಯಲು ಹೊಂಚು ಹಾಕಿ ಕುಳಿತಿವೆ. ತೇಪೆ ಹಾಕುವುದೇ ನಿಮ್ಮ ಕೆಲಸವಲ್ಲ. ಗುಂಡಿಗಳೇ ಬೀಳದಂತೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು ಎಂದು ಹೈಕೋರ್ಟ್ ಕುಟುಕಿತ್ತು. ಆದರೂ, ಪಾಲಿಕೆ ಎಂಜಿನಿಯರ್‌ಗಳು ಎಚ್ಚೆತ್ತುಕೊಳ್ಳುತ್ತಿಲ್ಲ.

ಯಾವುದೇ ರಸ್ತೆಗೆ ಟಾರು ಹಾಕುವ ಕಾಮಗಾರಿಯ ಗುತ್ತಿಗೆ ಪಡೆದವರು ಮೂರು ವರ್ಷಗಳವರೆಗೆ ಆ ರಸ್ತೆಯ ನಿರ್ವಹಣೆ ಮಾಡಬೇಕೆಂಬ ನಿಯಮವಿದೆ. ಗುತ್ತಿಗೆದಾರರಿಂದ ರಸ್ತೆಗಳ ನಿರ್ವಹಣೆ ಸರಿಯಾಗಿ ನಡೆದಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಪಾಲಿಕೆ ಎಂಜಿನಿಯರ್‌ಗಳ ಜವಾಬ್ದಾರಿ. ಆದರೆ, ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆಗಳ ದುಸ್ಥಿತಿಗೆ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ನಡುವಿಗೆ ಅಪವಿತ್ರ ಮೈತ್ರಿಯೇ ಕಾರಣ. ರಸ್ತೆ ಇತಿಹಾಸ ನಿರ್ವಹಣೆ ಮಾಡದೆ, ದಾಖಲೆಗಳನ್ನೂ ಇಡದೆ ಮತ್ತೆ ಮತ್ತೆ ಅದೇ ರಸ್ತೆಗಳಿಗೆ ದುಡ್ಡು ಸುರಿಯಲಾಗುತ್ತಿದೆ.

ರಸ್ತೆ ಗುಂಡಿಗಳು ಸೃಷ್ಟಿಸುತ್ತಿರುವ ಅನಾಹುತ ಒಂದೆರಡಲ್ಲ. ಪ್ರತಿ ವರ್ಷವೂ ಹಲವು ಮಂದಿಯನ್ನು ಬಲಿ ಪಡೆಯುತ್ತಲೇ ಇವೆ. ಇಷ್ಟಾದರೂ, ಅಧಿಕಾರಿಗಳು ಜನರು ಅನುಭವಿಸುವ ನೋವು, ಯಾತನೆಗೆ ಮಿಡಿಯುತ್ತಿಲ್ಲ. ಹೊಂಡಗಳಿಂದಾಗಿ ಬೆನ್ನು ನೋವಿಗೀಡಾದವರು, ಕತ್ತು ಉಳುಕಿಸಿಕೊಂಡವರು, ಬಿದ್ದು ಪೆಟ್ಟು ಮಾಡಿ ಕೊಂಡವರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಗುಂಡಿಗಳಿಗೆ ತೇಪೆ ಹಾಕುವ ಕಾಮಗಾರಿ ಕೂಡ ಅವೈಜ್ಞಾನಿಕವಾಗಿದೆ. ಇದರಿಂದಾಗಿ ಸಣ್ಣ ಸಣ್ಣ ದಿನ್ನೆಗಳು ನಿರ್ಮಾಣವಾಗುತ್ತಿವೆ. ಅವುಗಳನ್ನು ತಪ್ಪಿಸಿ ವಾಹನ ಓಡಿಸುವುದು ಸಹ ಕಷ್ಟ.

ಮಳೆಗಾಲಕ್ಕೆ ಮುನ್ನವೇ ರಸ್ತೆಗಳನ್ನು ಸುಸ್ಥಿಯಲ್ಲಿಟ್ಟುಕೊಳ್ಳಬೇಕಾದ ಪಾಲಿಕೆ ಎಂಜಿನಿಯರ್‌ಗಳು ಈಗಷ್ಟೆ ಮೈಕೊಡವಿಕೊಂಡು ಎದ್ದಿದ್ದಾರೆ. ಹಲವು ರಸ್ತೆಗಳ ದುರಸ್ತಿ, ಅಭಿವದ್ಧಿಗಾಗಿ ಟೆಂಡರ್ ಕರೆದಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡು, ಗುತ್ತಿಗೆದಾರರು ಕೆಲಸ ಆರಂಭಿಸುವಷ್ಟರಲ್ಲಿ ಮಳೆಗಾಲ ಶುರುವಾಗುತ್ತದೆ. ಸಾರ್ವಜನಿಕರು, ವಾಹನ ಸವಾರರು ಹೊಂಡ-ಗುಂಡಿಗಳನ್ನು ತಪ್ಪಿಸಿ ಓಡಾಡಲು ಸರ್ಕಸ್ ಮಾಡಬೇಕಾದ್ದು ಅನಿವಾರ್ಯವಾಗಲಿದೆ.

ಜಲಮಂಡಳಿಯಿಂದ ಅಗೆತ: ಜಲಮಂಡಳಿಯು ಕುಡಿಯುವ ನೀರು ಮತ್ತು ಒಳಚರಂಡಿ ಕೊಳವೆಗಳ ಅಳವಡಿಕೆಗಾಗಿ 188 ಕಿ.ಮೀ ಉದ್ದದ ರಸ್ತೆ ಅಗೆಯಲು ಅನುಮತಿ ಪಡೆದುಕೊಂಡಿದೆ. ಇದರಲ್ಲಿ 124 ಕಿ.ಮೀ ಉದ್ದದ ರಸ್ತೆಗಳನ್ನು ಅಗೆದು, ಹಾಳು ಮಾಡಿದೆ. ಈ ರಸ್ತೆಗಳ ದುರಸ್ತಿಗಾಗಿ 34 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಪಾವತಿಸಿದೆ. ಆದರೆ, ಪಾಲಿಕೆಯಿಂದ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಕನಕಪುರ ಮುಖ್ಯರಸ್ತೆಯ ಕೋಣನಕುಂಟೆ ಕ್ರಾಸ್‌ನಿಂದ ನೈಸ್ ರಸ್ತೆ ಜಂಕ್ಷನ್‌ವರೆಗೆ ಎರಡೂ ಬದಿಯಲ್ಲೂ ಕುಡಿಯುವ ನೀರು ಮತ್ತು ಒಳಚರಂಡಿ ಕೊಳವೆಗಳ ಅಳವಡಿಕೆಗಾಗಿ ಮನಬಂದಂತೆ ಅಗೆದು ಹಾಕಲಾಗಿದೆ. ಇದರಿಂದ ರಸ್ತೆಗಳ ರೂಪವೇ ಬದಲಾಗಿ ಹೋಗಿದೆ. ಜಲ್ಲಿ ಮಿಶ್ರಣವನ್ನು ಭರ್ತಿ ಮಾಡಿ, ಗುಂಡಿಗಳನ್ನು ಮುಚ್ಚಿಲ್ಲ. ಪರಿಣಾಮ, ಮಳೆ ಬಂದಾಗ ರಸ್ತೆಯು ಕೆಸರುಗದ್ದೆಯಾಗಿ ಪರಿವರ್ತನೆಯಾಗುತ್ತಿದೆ. ಇನ್ನುಳಿದ ಸಂದರ್ಭದಲ್ಲಿ ವಾಹನಗಳಿಂದ ಏಳುವ ಧೂಳಿನಿಂದ ಈ ಭಾಗದ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಪಿಒಡಬ್ಲು ಕಾಮಗಾರಿಯ ಅನುದಾನದಲ್ಲಿ ಶೇ.10ರಷ್ಟನ್ನು ರಸ್ತೆ ಗುಂಡಿಗಳನ್ನು ಮುಚ್ಚಲು ಮೀಸಲಿಡಲಾಗಿದೆ. ಈ ಅನುದಾನವನ್ನು ಬಳಸಿಕೊಂಡು ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಮಳೆಗಾಲ ಆರಂಭಕ್ಕೆ ಮುನ್ನವೇ ಗುಂಡಿಗಳನ್ನು ಮುಚ್ಚಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News