18-20 ಸ್ಥಾನಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು: ಎಚ್.ಡಿ.ರೇವಣ್ಣ

Update: 2019-05-06 14:57 GMT

ಬೆಂಗಳೂರು, ಮೇ 6: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು 18-20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಜೆಡಿಎಸ್ 5-6 ಸೀಟು ಗೆಲ್ಲುತ್ತೆ. 7 ಸ್ಥಾನಗಳಲ್ಲಿಯೂ ಜೆಡಿಎಸ್ ಗೆದ್ದರೆ ಆಶ್ಚರ್ಯ ಪಡಬೇಡಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭವಿಷ್ಯ ನುಡಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌ಎಂಟಿ(ಹಾಸನ, ಮಂಡ್ಯ, ತುಮಕೂರು) ಬಗ್ಗೆ ಮಾತನಾಡದಿದ್ದರೆ ಕೆಲವರಿಗೆ ಸಮಾಧಾನನೇ ಆಗುವುದಿಲ್ಲ ಎಂದರು.

ಇಷ್ಟು ದಿನ ರಾಮ ಆಯ್ತು. ಈಗ ಎಚ್‌ಎಂಟಿ ಮೇಲೆ ಕಣ್ಣಿಟ್ಟಿದ್ದಾರೆ. ಸುಮ್ಮನೆ ಪ್ರಚಾರ ಕೊಟ್ಟರೆ ಬೇಡ ಅನ್ನೋಕೆ ಆಗುತ್ತಾ? ಈ ವಿಷಯದಲ್ಲಿ ನಾನು ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಚ್‌ಎಂಟಿ ದಿಲ್ಲಿಗೆ ಹೋಗುವುದು ಶತಸಿದ್ಧ ಎಂದು ಅವರು ಹೇಳಿದರು.

ನನ್ನ ಮಗ ಪ್ರಜ್ವಲ್‌ನನ್ನು ಗೆಲ್ಲಿಸಲು ನಾನು ಯಾವುದೇ ರೀತಿಯಲ್ಲಿ ಕಳ್ಳ ಓಟುಗಳನ್ನು ಹಾಕಿಸಿಲ್ಲ. ಈ ಬಗ್ಗೆ ದೂರು ನೀಡಿರುವವರ ಮೇಲೆ ಎರಡು ಪ್ರಕರಣಗಳು ದಾಖಲಾಗಿವೆ. ಈ ವಿಚಾರದ ಕುರಿತು ನನಗೆ ಚುನಾವಣಾ ಆಯೋಗದಿಂದ ಯಾವ ದೂರು ಬಂದಿಲ್ಲ ಎಂದು ಅವರು ಹೇಳಿದರು.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಎ.18ರಂದು ಮತದಾನ ಆಗಿದೆ. ಅವತ್ತೆ ಈ ಸಂಬಂಧ ದೂರು ಕೊಡಬಹುದಿತ್ತು. ಯಾಕೆ ಅಂದು ದೂರು ನೀಡಿಲ್ಲ. ಕಳ್ಳ ಓಟು ಹಾಕಿಸಿರುವ ಕುರಿತು ನಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ, ಯಾವುದೇ ರೀತಿಯ ತನಿಖೆ ಬೇಕಾದರೂ ಮಾಡಿಕೊಳ್ಳಲಿ ಎಂದು ರೇವಣ್ಣ ಸವಾಲು ಹಾಕಿದರು.

ಮೇ 23ರ ನಂತರ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲರೂ ಸಮಾಧಾನಗೊಳ್ಳಲಿದ್ದಾರೆ. ನಾನು ಹೇಳಿದ್ದು ಯಾವತ್ತು ಸುಳ್ಳು ಆಗಿಲ್ಲ. ಬಿಜೆಪಿಯವರು ಎಷ್ಟು ಗಡುವುಗಳನ್ನು ಕೊಟ್ಟರೂ, ಸರಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಅವರು ಹೇಳಿದರು.

ಯಡಿಯೂರಪ್ಪತಿರುಪತಿಗೆ ಹೋಗಿದ್ದರು. ಜಗದೀಶ್ ಶೆಟ್ಟರ್‌ಗೆ ಪಂಡರಾಪುರಕ್ಕೆ ಹೋಗೋಕೆ ಹೇಳಿ. ನಾನು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯ ರೇಸ್‌ನಲ್ಲಿಲ್ಲ. ನನಗೆ ಪಕ್ಷ ಹಾಗೂ ಮುಖ್ಯಮಂತ್ರಿ, ಜವಾಬ್ದಾರಿ ನೀಡಿದ್ದಾರೆ. ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಪಕ್ಷ ನೀಡುವ ಕೆಲಸ ಮಾಡುತ್ತಿದ್ದೇನೆ. ಉಪ ಮುಖ್ಯಮಂತ್ರಿ ಹುದ್ದೆ ರೇಸಿಗೆ ಹೋಗಲು ನನ್ನ ಬಳಿ ಕುದುರೆಯೇ ಇಲ್ಲ. ಹೀಗಾಗಿ ನಾನು ಯಾವ ರೇಸ್‌ನಲ್ಲಿಯೂ ಇಲ್ಲ ಎಂದು ರೇವಣ್ಣ ಹೇಳಿದರು.

ಚಿಕ್ಕಮಗಳೂರಿನಲ್ಲಿ ದೇವೇಗೌಡರ ಪೂಜೆ: ಜೆಡಿಎಸ್ ವರಿಷ್ಠ ದೇವೇಗೌಡರ ತಂದೆಗೆ ಇಬ್ಬರು ಪತ್ನಿಯರಿದ್ದರು. ಇಬ್ಬರು ಪತ್ನಿಯರು ಹಾಗೂ ದೇವೇಗೌಡರ ಅಜ್ಜಿ ಮೂವರೂ ಪ್ಲೇಗ್ ರೋಗದಿಂದ ಅಕಾಲಿಕ ಮರಣ ಹೊಂದಿದ್ದರು. ಅವರ ಸದ್ಗತಿಗಾಗಿ ಜ್ಯೋತಿಷಿಗಳ ಸಲಹೆಯಂತೆ ನಮ್ಮ ತಂದೆ ಚಿಕ್ಕಮಗಳೂರಿನಲ್ಲಿ ಶ್ರಾದ್ಧ ಕರ್ಮ ನೆರವೇರಿಸಿದ್ದಾರೆ ಎಂದು ಅವರು ಹೇಳಿದರು.

ಇದು ನಿಖಿಲ್ ಅಥವಾ ಪ್ರಜ್ವಲ್ ಗೆಲುವಿಗೆ ಮಾಡಿಸಿದ ಪೂಜೆಯಲ್ಲ. ಆ ಪೂಜೆಯಲ್ಲಿ ನಿಖಿಲ್ ಮತ್ತು ಪ್ರಜ್ವಲ್ ಹಾಗೂ ನನ್ನ ಮತ್ತು ಕುಮಾರಸ್ವಾಮಿಯ ಪತ್ನಿಯೂ ಭಾಗಿಯಾಗಿರಲಿಲ್ಲ ಎಂದು ರೇವಣ್ಣ ಸ್ಪಷ್ಟನೆ ನೀಡಿದರು.

ಮೋದಿ ಹೇಳಿಕೆಗೆ ರೇವಣ್ಣ ಖಂಡನೆ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಆ ಕೊಡುಗೆ ದೇವೇಗೌಡರಿಗೆ ಗೊತ್ತು. ಕಾಲ ಕೂಡಿ ಬಂದಾಗ ರಾಜೀವ್ ಗಾಂಧಿ ಅವರ ಕೆಲಸಗಳ ಬಗ್ಗೆ ಹೇಳುತ್ತೇನೆ. ಅವರೊಬ್ಬ ಪ್ರಾಮಾಣಿಕ ರಾಜಕಾರಣಿ. ತುಂಬ ಒಳ್ಳೆಯ ವ್ಯಕ್ತಿ. ಸತ್ತವರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ. ಅದು ಪ್ರಧಾನಿಯ ಘನತೆಗೆ ತಕ್ಕುದ್ದಲ್ಲ ಎಂದು ರೇವಣ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News