ಪ್ರಜ್ಞಾ ಸಿಂಗ್ಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧವಿಲ್ಲ: ಎಸ್ಐಟಿ
ಬೆಂಗಳೂರು, ಮೇ 9: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ, ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಜ್ಞಾ ಸಿಂಗ್ ಠಾಕೂರ್ಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ವಿಶೇಷ ತನಿಖಾ ತಂಡ ಸ್ಪಷ್ಟಪಡಿಸಿದೆ. ಈ ಪ್ರಕರಣದ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಪ್ರಜ್ಞಾ ಕೈವಾಡವಿರುವ ಬಗ್ಗೆ ಎಲ್ಲಿಯೂ ಕಂಡುಬಂದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಪ್ರಜ್ಞಾ ಕೈವಾಡವಿದೆ ಎನ್ನಲು ಅದಕ್ಕೆ ಪೂರಕವಾದ ಸಾಕ್ಷಿಗಳು ನಮ್ಮಲ್ಲಿ ಇಲ್ಲ. ಅಲ್ಲದೆ, ಪ್ರಕರಣದ ಸಂಬಂಧ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ ಪ್ರಜ್ಞಾ ಹೆಸರನ್ನು ಉಲ್ಲೇಖಿಸಿಲ್ಲ. ಗೌರಿ ಲಂಕೇಶ್ ಹತ್ಯೆ ಹಾಗೂ ಪ್ರಜ್ಞಾಗೂ ಸಂಬಂಧವಿರುವ ಬಗ್ಗೆ ಯಾವುದೇ ದಾಖಲೆಯಿಲ್ಲ ಎಂದು ತಂಡ ಹೇಳಿದೆ.
‘ಪ್ರಜ್ಞಾ ಸಿಂಗ್ಗೂ, ಮಾಲೆಗಾಂವ್ ಸ್ಫೋಟ ಮತ್ತು ಅಭಿನವ ಭಾರತ್ ಪ್ರಕರಣಕ್ಕೂ ಸಂಬಂಧವಿದೆ ಎಂದು ತನಿಖೆಯಿಂದ ತಿಳಿದಿಲ್ಲ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇದೊಂದು ಸುಳ್ಳು ವದಂತಿ ಎಂದು ಎಸ್ಐಟಿ ತಂಡ ನೀಡಿರುವ ಪ್ರಕಟನೆಯಲ್ಲಿ ತಿಳಿಸಿದೆ.