ಹೊರಗುತ್ತಿಗೆ ಶಿಕ್ಷಕರ ವಜಾಗೆ ಕ್ರಮ: ಇಮ್ರಾನ್ ಪಾಷಾ
ಬೆಂಗಳೂರು, ಮೇ 15: ಇತ್ತೀಚಿಗೆ ನಡೆದ ಎಸೆಸೆಲ್ಸಿ ಪರೀಕ್ಷೆಗಳಲ್ಲಿ ಬಿಬಿಎಂಪಿ ಶಾಲೆಗಳಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಹೊರಗುತ್ತಿಗೆ ಶಿಕ್ಷಕರು ವಜಾ ಮಾಡಲಾಗುತ್ತದೆ ಹಾಗೂ ಖಾಯಂ ಶಿಕ್ಷಕರಿಗೆ ನೀಡಬೇಕಿದ್ದ ಮುಂಭಡ್ತಿಯನ್ನು ತಡೆಯಲಾಗುವುದು ಎಂದು ಪಾಲಿಕೆಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ತಿಳಿಸಿದ್ದಾರೆ.
ಪರೀಕ್ಷೆಯ ಫಲಿತಾಂಶ ಸಂಬಂಧ ಬಿಬಿಎಂಪಿ ವ್ಯಾಪ್ತಿಯ ಪ್ರೌಢಶಾಲೆಗಳ ಮುಖ್ಯಸ್ಥರು ಹಾಗೂ ಸಮಿತಿ ಸದಸ್ಯರೊಡನೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ಪಾಲಿಕೆಯ ಶಾಲೆಗಳಿಗೆ ಗಣನೀಯವಾದ ಹಿನ್ನೆಡೆಯಾಗಿದೆ. ಆದುದರಿಂದಾಗಿ ಹೊಸ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದ್ದು, ಈಗ ಇರುವವರಿಗೆ ಬಿಡುಗಡೆ ನೀಡಲಾಗುವುದು ಎಂದು ಹೇಳಿದರು.
ಅದರ ಜತೆಗೆ ಖಾಯಂ ಶಿಕ್ಷಕರಿಗೆ ನೀಡಬೇಕಿದ್ದ ಮುಂಭಡ್ತಿಯನ್ನು ತಡೆಯಲು ಸಭೆಯಲ್ಲಿ ಚರ್ಚಿಸಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಫಲಿತಾಂಶ ಕಡಿಮೆಯಾಗಲು ಕಾರಣಗಳ ಕುರಿತು ಗಂಭೀರವಾಗಿ ಚಿಂತನೆ ನಡೆಸಲಾಗಿದ್ದು, ಸಮಗ್ರ ವರದಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗುಣಮಟ್ಟ ಶಿಕ್ಷಣ ನೀಡುವುದರ ಕಡೆಗೆ ಗಮನ ನೀಡಲಾಗುವುದು ಎಂದು ತಿಳಿಸಿದ್ದಾರೆ.