ಬೆಂಗಳೂರು: ಮೀನು ವ್ಯಾಪಾರಿಯ ಕೊಲೆ

Update: 2019-05-15 17:22 GMT

ಬೆಂಗಳೂರು, ಮೇ 15: ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ದೇವರಜೀವನಹಳ್ಳಿಯಲ್ಲಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ.

ರೋಷನ್ ನಗರದ ನಿವಾಸಿ ಝರಾರ್(30) ಕೊಲೆಗೈದ ವ್ಯಕ್ತಿಯಾಗಿದ್ದು, ಈ ಪ್ರಕರಣದಲ್ಲಿ ಇಷಾಕ್ ಸೇರಿ ಮೂವರನ್ನು ಡಿಜಿ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದೇವರಜೀವನಹಳ್ಳಿಯ ಮುಖ್ಯರಸ್ತೆಯ ಹಿಂಭಾಗ ಮೀನು ವ್ಯಾಪಾರ ಮಾಡುತ್ತಿದ್ದ ಝರಾರ್, ಕಳ್ಳತನ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದ. ಆದರೆ, ಪರಿಚಯಸ್ಥನಾದ ಇಷಾಕ್‌ನನ್ನು ಪದೇ ಪದೇ ನಿಂದಿಸಿ ಆತನ ಸಹೋದರಿಗೂ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡಿದ್ದ ಇಷಾಕ್, ತನ್ನ 6 ಮಂದಿ ಸಹಚರರ ಜತೆ ಸೇರಿ ಝರಾರ್‌ನ ಕೊಲೆಗೆ ಸಂಚು ರೂಪಿಸಿ, ಅದರಂತೆ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಝರಾರ್, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News