ಮೇ 17 ರಿಂದ 'ಬರಮುಕ್ತ ಕರ್ನಾಟಕ ಆಂದೋಲನ'

Update: 2019-05-16 16:36 GMT

ಬೆಂಗಳೂರು, ಮೇ 16: ರಾಜ್ಯ ಎದುರಿಸುತ್ತಿರುವ ನಿರಂತರ ಭೀಕರ ಜಲಕ್ಷಾಮದ ಹಿನ್ನೆಲೆಯಲ್ಲಿ ಸಮಗ್ರ ಜಲಸಂರಕ್ಷಣೆ ಮತ್ತು ಜಲನಿರ್ವಹಣೆ ಕುರಿತು ಮೇ 17 ರಿಂದ 19ರವರೆಗೆ ‘ಬರಮುಕ್ತ ಕರ್ನಾಟಕ ಆಂದೋಲನ’ ತರಬೇತಿ ಸಮಾವೇಶವನ್ನು ತುಮಕೂರಿನ ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಪ್ರೊ.ರವಿವರ್ಮ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 17, 18 ಮತ್ತು 19 ರಂದು ಮೂರು ದಿನಗಳ ಕಾಲ ನಡೆಯುವ ಈ ಬರ ಮುಕ್ತ ಕರ್ನಾಟಕ ಆಂದೋಲನ ತರಬೇತಿ ಸಮಾವೇಶವನ್ನು ತರುಣ್ ಭಾರತ ಸಂಘದ ಮುಖಂಡ ಹಾಗೂ ಜಲತಜ್ಞರೆಂದೇ ಪ್ರಖ್ಯಾತರಾದ ಡಾ.ರಾಜೇಂದ್ರಸಿಂಗ್ ನಡೆಸಿಕೊಡಲಿದ್ದಾರೆ. ಈ ಸಮಾವೇಶದಲ್ಲಿ ಸಮಗ್ರ ಜಲಸಂರಕ್ಷಣೆ, ಜಲ ನಿರ್ವಹಣೆಯ ಮಾಡುವ ಮೂಲಕ ರಾಜ್ಯವನ್ನು ಬರ ಮುಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ನಾಳೆ ಬೆಳಿಗ್ಗೆ 9.30ಕ್ಕೆ ಡಾ ರಾಜೇಂದ್ರಸಿಂಗ್ ಬರಮುಕ್ತ ಕರ್ನಾಟಕ ಆಂದೋಲನ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಿದ್ದು, ದೇಶದ 20 ಜನ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕೊಡಿಸಲಾಗುವುದು. ಅಲ್ಲದೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ರೈತರು, ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮಾವೇಶದಲ್ಲಿ ತರಬೇತಿಗೊಂಡ ಕಾರ್ಯಕರ್ತರು ಸ್ಥಳೀಯವಾಗಿ ತಮ್ಮ ಶಕ್ತಿ ಸಾಮರ್ಥ್ಯ, ಸಂಪನ್ಮೂಲ ಮತ್ತು ಜನರ ಸಹಕಾರದೊಂದಿಗೆ ಸಂರಕ್ಷಣೆ ಮತ್ತು ಜಲ ನಿರ್ವಹಣೆಯ ವಿನೂತನ ವಿಶಿಷ್ಟ ಮಾದರಿಗಳನ್ನು ರೂಪಿಸುವ ಪ್ರಯತ್ನದಲ್ಲಿ ತೊಡಗಿಸುವಂತೆ ಆಗಬೇಕೆಂಬುದೇ ಈ ಸಮಾವೇಶದ ಪ್ರಧಾನ ಉದ್ದೇಶವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News