ಬೆಂಗಳೂರು: ಶಾಸಕರ ಮನೆ ಬಳಿ ಸ್ಫೋಟ; ಓರ್ವ ಮೃತ್ಯು

Update: 2019-05-19 14:55 GMT

ಬೆಂಗಳೂರು, ಮೇ 19: ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ವೈಯಾಲಿಕಾವಲ್ ಮನೆ ಬಳಿ ನಿಗೂಢ ಸ್ಫೋಟ ಸಂಭವಿಸಿದ್ದು, ಮನೆಗೆಲಸ ಮಾಡುತ್ತಿದ್ದ ವೆಂಕಟೇಶ್ (45) ಎಂಬಾತ ಸಾವನ್ನಪ್ಪಿದ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರವಿವಾರ ಬೆಳಗ್ಗೆ 9:30ರ ಸುಮಾರಿಗೆ ವೈಯಾಲಿಕಾವಲ್ನ 11ನೆ ಬಿ ಕ್ರಾಸ್ ಬಳಿ ಇರುವ ಮುನಿರತ್ನ ಅವರ ಒಡೆತನದ ಕಟ್ಟಡದ ಕಾರ್ ಪಾರ್ಕಿಂಗ್ ಬಳಿ ಈ ಸ್ಫೋಟ ಸಂಭವಿಸಿದೆ. ಮೃತ ವ್ಯಕ್ತಿ ಇದೇ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ವೆಂಕಟೇಶ್ ವೈಯಾಲಿಕಾವಲ್‌ನ ಧೋಬಿಘಾಟ್‌ನಲ್ಲಿ ಕುಟುಂಬಸ್ಥರ ಜೊತೆ ವಾಸವಾಗಿದ್ದು, ಅವರು ಬೆಳಗ್ಗೆ ಮೊಬೈಲ್‌ಫೋನ್‌ನಲ್ಲಿ ಮಾತನಾಡುತ್ತಾ ಮುನಿರತ್ನ ಮನೆ ಮುಂದೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಆತನ ಮೊಬೈಲ್, ಮನೆಯ ಬಾಗಿಲು ಹಾಗೂ ಗೋಡೆ ಛಿದ್ರವಾಗಿದೆ. ಭಾರೀ ಸ್ಫೋಟದ ಸದ್ದು ಕೇಳಿಸಿದ್ದು, ಸುತ್ತಮುತ್ತಲಿನ ಒಂದು ಕಿ.ಮೀ. ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ. ಏನಾಯಿತೋ ಏನೋ ಎಂದು ತಿಳಿಯುವಷ್ಟರಲ್ಲಿ ಮುನಿರತ್ನ ಅವರ ನಿವಾಸದ ಬಳಿ ವ್ಯಕ್ತಿಯೊಬ್ಬರ ದೇಹ ಛಿದ್ರವಾಗಿ ಬಿದ್ದಿರುವುದನ್ನು ನೋಡಿ ಸ್ಥಳೀಯರು ಆತಂಕಗೊಂಡಿದ್ದಾರೆ.

ಪರಿಶೀಲನೆ: ಸುದ್ಧಿ ತಿಳಿದ ಕೂಡಲೇ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಡಿಸಿಪಿ ದೇವರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ಕೈಗೊಂಡಿದ್ದಾರೆ.

ವದಂತಿಗಳಿಗೆ ಕಿವಿಗೂಡಬೇಡಿ: ಇಲ್ಲಿನ ವೈಯಾಲಿಕಾವಲ್‌ನಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ವೆಂಕಟೇಶ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸ್ಫೋಟದ ಸ್ಥಳದಲ್ಲಿ ಭೂಮಿಯೊಳಗಿಂದ ಕ್ರೇಟ್ ಮಾದರಿ ವಸ್ತು ಸ್ಫೋಟ ಆಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ. ಎನ್‌ಐಎ ಸೇರಿ ಎಲ್ಲ ತನಿಖಾ ತಂಡಗಳಿಗೂ ವಿಚಾರ ಮುಟ್ಟಿಸಲಾಗುವುದು. ಆತಂಕಪಡುವ ಅಗತ್ಯವಿಲ್ಲ, ವದಂತಿಗಳಿಗೆ ಸಾರ್ವಜನಿಕರು ಕಿವಿಗೂಡಬಾರದು ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.

ಪಿಒಪಿ ಕೆಮಿಕಲ್: ಪಿಒಪಿ ಕಲಾಕೃತಿಗಳ ನಿರ್ಮಿಸಲು ರಸಾಯನಿಕವನ್ನು ಶೇಖರಿಸಿದ್ದು, ಅದನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯವ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ಘರ್ಷಣೆಯಾಗಿ ಸ್ಫೋಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

‘ಯಾವುದೇ ಭಯಪಡುವ ಅಗತ್ಯವಿಲ್ಲ. ಪ್ಲಾಸ್ಟಿಕ್‌ಗೆ ಬಳಸುವ ಕೆಲ ರಸಾಯನಿಕ ಸ್ಫೋಟ ಸಂಭವಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವಿಧಿ ವಿಜ್ಞಾನ ಪ್ರಯೋಗಾಯಲದ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ’

-ದೇವರಾಜ್, ಡಿಸಿಪಿ

‘ಯಾವುದೇ ವಿಷಯವೇ ಆಗಿರಲಿ, ಊಹಾಪೋಹದ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ತನಿಖೆಗೆ ಸಹಕಾರ ನೀಡಬೇಕಾಗಿದೆ. ಪೊಲೀಸರು ಪ್ರಮಾಣಿಕವಾಗಿ ತನಿಖೆ ಮಾಡಲಿದ್ದಾರೆ. ಮೃತ ವೆಂಕಟೇಶ್ ತಂದೆ ನನ್ನ ತಂದೆ ಬಾಲ್ಯದ ಸ್ನೇಹಿತ. ನಾವು ಒಟ್ಟಿಗೆ ಬೆಳೆದವರು. ಆತನಿಗೆ ಹೀಗೆ ಆಗಿರುವುದು ನನಗೆ ಅತೀವ ನೋವಾಗಿದೆ’

-ಮುನಿರತ್ನ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News