ಕಮಲ್ನಾಥ್ ಸರಕಾರ ಬಹುಮತ ಸಾಬೀತುಪಡಿಸಲಿ: ರಾಜ್ಯಪಾಲರಿಗೆ ಪತ್ರ ಬರೆದ ಬಿಜೆಪಿ
ಹೊಸದಿಲ್ಲಿ, ಮೇ 20: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಬಿಜೆಪಿ ಸೋಮವಾರ ಆಗ್ರಹಿಸಿದೆ ಹಾಗೂ ರಾಜ್ಯ ವಿಧಾನ ಸಭೆಯಲ್ಲಿ ವಿಶೇಷ ಅಧಿವೇಶನ ಆಯೋಜಿಸುವಂತೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಲ್ಲಿ ವಿನಂತಿಸಿದೆ.
ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಲಿದೆ ಎಂದು ಹೇಳಿದ ಒಂದು ದಿನದ ಬಳಿಕ ಈ ಆಗ್ರಹ ಕೇಳಿ ಬಂದಿದೆ. ಕಾಂಗ್ರೆಸ್ ಸರಕಾರದ ಬಲಾಬಲ ಪರೀಕ್ಷಿಸಲು ಹಾಗೂ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲು ರಾಜ್ಯ ವಿಧಾನ ಸಭೆಯಲ್ಲಿ ವಿಶೇಷ ಅಧಿವೇಶನ ಆಯೋಜಿಸುವಂತೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಲ್ಲಿ ಪಕ್ಷ ವಿನಂತಿಸಿದೆ ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಗೋಪಾಲ್ ಭಾರ್ಗವ್ ಹೇಳಿದ್ದಾರೆ.
ಮಧ್ಯಪ್ರದೇಶದ ವಿಧಾನ ಸಭೆಯಲ್ಲಿ ವಿಶೇಷ ಅಧಿವೇಶನ ಆಯೋಜಿಸುವಂತೆ ನಾನು ರಾಜ್ಯಪಾಲೆಗೆ ಪತ್ರ ಬರೆದಿದ್ದೇನೆ. ಸರಕಾರದ ಬಲಾಬಲ ಪರೀಕ್ಷೆ ನಡೆಸಲು ಹಾಗೂ ಕೃಷಿ ಸಾಲ ಮನ್ನಾದಂತಹ ವಿವಿದ ವಿಷಯಗಳ ಬಗ್ಗೆ ಚರ್ಚಿಸಲು ನಾವು ಬಯಸುತ್ತಿದ್ದೇವೆ ಎಂದು ಭಾರ್ಗವ ಹೇಳಿದ್ದಾರೆ.