ಅಧಿಕಾರದಲ್ಲಿರುವ ಪಕ್ಷ ನೋಡಿ ಸರಕಾರದ ಕಾರ್ಯ ವೈಖರಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಡಿ: ಸಜನ್ ಪೂವಯ್ಯ

Update: 2019-05-20 16:52 GMT

ಬೆಂಗಳೂರು, ಮೇ 20: ಅಧಿಕಾರದಲ್ಲಿರುವ ಪಕ್ಷ ನೋಡಿ ಸರಕಾರದ ಕಾರ್ಯ ವೈಖರಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಸಜನ್ ಪೂವಯ್ಯ ಹೇಳಿದ್ದಾರೆ.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಆಯೋಜಿಸಿದ್ದ ಗೋಖಲೆ ಜನ್ಮದಿನ ಸ್ಮರಣಾರ್ಥ ಉಪನ್ಯಾಸದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಉತ್ತಮ ಆಡಳಿತ ಕುರಿತು ಅವರು ಮಾತನಾಡಿದರು. ಉತ್ತಮವಾಗಿ ಯಾರು ಕೆಲಸವನ್ನು ನಿರ್ವಹಿಸುತ್ತಾರೆಯೋ ಅವರಿಗೆ ನಾವು ಮೆಚ್ಚುಗೆಯನ್ನು ವ್ಯಕ್ತಪಡಿಸಬೇಕು. ಅದನ್ನು ಬಿಟ್ಟು ಅಧಿಕಾರದಲ್ಲಿರುವ ಪಕ್ಷ ನೋಡಿ ಸರಕಾರದ ಕಾರ್ಯ ವೈಖರಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಹೇಳಿದರು.

ಆಡಳಿತ ನಡೆಸುವವರು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿಲ್ಲ. ಒಂದು ವೇಳೆ ಬಳಸಿದರೂ ಅದರಿಂದ ಸಂಪೂರ್ಣ ಪ್ರಯೋಜನ ಪಡೆಯುತ್ತಿಲ್ಲ. ಆದರೆ, ಗೂಗಲ್‌ನಂತಹ ಸಂಸ್ಥೆ ಪ್ರತಿ ಬಳಕೆದಾರನ ಬೇಕು-ಬೇಡಗಳನ್ನು ಗಮನದಲ್ಲಿಟ್ಟುಕೊಂಡು ಸೇವೆ ನೀಡುತ್ತಿವೆ. ಅದೇ ರೀತಿಯಲ್ಲಿ ಜನರಿಗೆ ಸೇವೆ ನೀಡುವ ಕ್ರಮಕ್ಕೆ ಸರಕಾರಗಳು ಮುಂದಾಗಬೇಕು. ಆದರೆ, ಜನರ ಬದಲಿಗೆ ಜನಪ್ರತಿನಿಧಿಗಳ ಮನಸ್ಥಿತಿಯಂತೆ ಸರಕಾರ ನಡೆಸಲಾಗುತ್ತಿದೆ ಎಂದರು.

4 ದಶಕಗಳ ಹಿಂದೆ ಪ್ರಪಂಚದ ಎಲ್ಲ ಡಾಟಾಗಳ ಸಂಗ್ರಹ ಕೇವಲ ಅರ್ಧ ಟೆರಾ ಬೈಟ್‌ನಷ್ಟಿತ್ತು. ಆದರೆ, ಈಗ ಅಷ್ಟು ಡಾಟಾ ಒಂದು ಮೊಬೈಲ್ ಫೋನ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಮಾಹಿತಿ ತಂತ್ರಜ್ಞಾನ ಸಾಕಷ್ಟು ಬದಲಾಗಿದೆ. ಅಲ್ಲದೆ, ಜನರ ಮನಸ್ಥಿತಿ ಅರಿತು ಅಗತ್ಯ ಸೇವೆ ನೀಡುವಲ್ಲಿ ಸರಕಾರಗಳು ವಿಫಲವಾಗಿವೆ ಎಂದರು. ನಮ್ಮ ಸಾಮರ್ಥ್ಯ, ದೌರ್ಬಲ್ಯ ಎರಡೂ ನಾವು ಬಳಸುವ ಮೊಬೈಲ್‌ನಲ್ಲಿ ಶೇಖರವಾಗಿರುತ್ತದೆ. ನಮ್ಮ ಅಭಿಪ್ರಾಯ, ಮನಸ್ಥಿತಿ ಕೂಡ ಅದರಿಂದ ತಿಳಿಯುತ್ತದೆ. ಹೀಗಾಗಿ, ಮಾಹಿತಿ ತಂತ್ರಜ್ಞಾನ ಬಳಕೆ ಕುರಿತು ಎಚ್ಚರಿಕೆಯಿಂದ ಇರಬೇಕು. ದೇಶದಲ್ಲಿ ಅದಕ್ಕೆ ಸಂಬಂಧಿಸಿದ ಸೂಕ್ತ ಕಾನೂನುಗಳು ರಚನೆಯಾಗಬೇಕಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News