ಕಾಂಗ್ರೆಸ್ ಸೋಲು ಆಘಾತಕಾರಿ: ಸಿದ್ದರಾಮಯ್ಯ

Update: 2019-05-23 14:29 GMT

ಬೆಂಗಳೂರು, ಮೇ 23: ಸೋಲು-ಗೆಲುವುಗಳು ರಾಜಕೀಯ ಜೀವನದ ಅವಿಭಾಜ್ಯ ಅಂಗ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ನಮ್ಮ ಪಕ್ಷದ ಸೋಲು ಅನಿರೀಕ್ಷಿತವಾಗಿದ್ದರೂ ಜನಾಭಿಪ್ರಾಯಕ್ಕೆ ತಲೆ ಬಾಗಬೇಕಾಗುತ್ತೇವೆ. ರಾಜ್ಯದಲ್ಲಿನ ನಮ್ಮ ಪಕ್ಷದ ಸೋಲು ಆಘಾತಕಾರಿಯಾದುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ತಮ್ಮ ಸರಕಾರಿ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಇಂತಹ ಸೋಲಿನ ಸಣ್ಣ ಸೂಚನೆಯನ್ನೂ ನಾನು ಕಂಡಿರಲಿಲ್ಲ. ಕನಿಷ್ಠ 15ರಿಂದ 20 ಸ್ಥಾನಗಳನ್ನು ಗೆಲ್ಲುವ ಭರವಸೆ ಇತ್ತು ಎಂದರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಎಚ್.ಡಿ.ದೇವೇಗೌಡರ ಸೋಲನ್ನು ಯಾರೂ ಊಹಿಸಿರಲಿಲ್ಲ. ಇಂತಹ ಸೋಲಿಗೆ ಖಂಡಿತ ಇಬ್ಬರು ನಾಯಕರೂ ಅರ್ಹರಾಗಿರಲಿಲ್ಲ. ಈ ಇಬ್ಬರು ಹಿರಿಯ ನಾಯಕರು ಲೋಕಸಭೆಯಲ್ಲಿ ಇದ್ದಿದ್ದರೆ ಅದರ ಲಾಭ ಕರ್ನಾಟಕಕ್ಕೆ ಸಂದಾಯವಾಗುತ್ತಿತ್ತು. ಎರಡೂ ಕ್ಷೇತ್ರಗಳ ಮತದಾರರು ಇವರನ್ನು ಸೋಲಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಹೇಳಿದರು.

ಈ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಪಕ್ಷಕ್ಕೆ ಮತ್ತು ಈ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ಐದು ವರ್ಷಗಳ ಕಾಲ ಜನ ಮೆಚ್ಚುವಂತಹ, ಇಡೀ ದೇಶವನ್ನು ಕುವೆಂಪು ಹೇಳಿರುವಂತೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದರು.

ಚುನಾವಣೆ ಮುಗಿದ ಮೇಲೆ ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ನಮ್ಮ ರಾಜ್ಯದ ಪ್ರತಿನಿಧಿಗಳಾಗಿರುತ್ತಾರೆ. ಎಲ್ಲರೂ ನಮ್ಮವರೇ ಆಗಿರುತ್ತಾರೆ. ಅವರೆಲ್ಲರಿಗೂ ಅಭಿನಂದನೆಗಳು. ಲೋಕಸಭೆಯಲ್ಲಿ ರಾಜ್ಯದ ದನಿ ಕೇಳಿಸುವಂತೆ ಅವರೆಲ್ಲರೂ ಕೆಲಸ ಮಾಡಲಿ ಎಂದು ಸಿದ್ದರಾಮಯ್ಯ ಹಾರೈಸಿದರು.

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆಂಬ ಏಕೈಕ ಗುರಿಯನ್ನಿಟ್ಟುಕೊಂಡು ಹಗಲು ರಾತ್ರಿ ಶ್ರಮಿಸಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎನ್ನುವುದು ನಿಜವಾದರೂ ಅವರ ಪ್ರಯತ್ನವನ್ನು ಅಭಿನಂದಿಸಲೇಬೇಕಾಗುತ್ತದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿಯನ್ನು ಪ್ರಧಾನಿ ಪಟ್ಟದಲ್ಲಿ ಕಾಣಬೇಕೆಂದು ಈ ದೇಶದ ಕೋಟ್ಯಂತರ ಜನ ಕಾದಿದ್ದರು. ಅಂತಹ ಕಾಲ ಕೂಡಿ ಬಂದಿಲ್ಲ. ವಿಳಂಬವಾಗಿಯಾದರೂ ಖಂಡಿತ ಆ ಕಾಲ ಬಂದೇಬರುತ್ತೆ ಎಂಬ ನಂಬಿಕೆ ನನಗಿದೆ. ಈ ಚುನಾವಣೆಯಲ್ಲಿ ನಮ್ಮ ನಿಷ್ಠಾವಂತ ಕಾರ್ಯಕರ್ತರು ಹಗಲು-ರಾತ್ರಿ ಶ್ರಮಿಸಿದ್ದಾರೆ. ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಸೋಲಿನಿಂದ ಅವರಿಗೆ ಖಂಡಿತ ನಿರಾಶೆಯಾಗಿರುತ್ತದೆ. ಸೋಲುಗಳಿಂದ ನಿರಾಶರಾಗದೆ ಮತ್ತೊಮ್ಮೆ ಗೆಲುವಿಗಾಗಿ ಹೋರಾಡುವವನು ನಾಯಕನಾಗುತ್ತಾನೆ. ಇದನ್ನು ನಮ್ಮ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು. ಕತ್ತಲೆಯ ಸುರಂಗದ ಕೊನೆಯಲ್ಲಿ ಬೆಳಕು ಇರುತ್ತದೆ ಎಂದು ನಂಬಿಕೊಂಡು ಮುಂದೆ ಸಾಗಬೇಕಾಗುತ್ತದೆ ಎಂದು ಅವರು ಕರೆ ನೀಡಿದರು.

ಮೇಲ್ನೋಟಕ್ಕೆ ಇಡೀ ದೇಶದಲ್ಲಿ ನರೇಂದ್ರಮೋದಿ ಪರವಾದ ಅಲೆ ಎದ್ದಿರುವಂತೆ ಕಾಣುತ್ತಿದೆ. ಇದಕ್ಕೆ ಏನು ಕಾರಣ ಎಂಬುದನ್ನು ಮುಂದಿನ ದಿನಗಳಲ್ಲಿ ನಾವೆಲ್ಲ ಒಟ್ಟಾಗಿ ಕೂತು ಚರ್ಚೆ ಮಾಡುತ್ತೇವೆ. ನಾವು ಜನರ ನಿತ್ಯ ಜೀವನಕ್ಕೆ ಸಂಬಂಧಿಸಿದ ವಾಸ್ತವದ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಿದೆವು. ಬಹಳ ಮುಖ್ಯವಾಗಿ ನನ್ನ ಐದು ವರ್ಷಗಳ ಆಡಳಿತಾವಧಿಯ ನಮ್ಮ ಸಾಧನೆ ಹಾಗೂ ಹಿಂದಿನ ಯುಪಿಎ ಸರಕಾರದ ಹತ್ತು ವರ್ಷಗಳ ಸಾಧನೆಗಳನ್ನು ಜನರಿಗೆ ತಿಳಿಸಿಹೇಳಲು ಪ್ರಯತ್ನ ಮಾಡಿದೆವು ಎಂದು ಅವರು ತಿಳಿಸಿದರು.

ಬಿಜೆಪಿ ರಾಷ್ಟ್ರೀಯತೆ, ಸೇನೆ, ಯುದ್ದ, ಹಿಂದು-ಮುಸ್ಲಿಮ್ ಮೊದಲಾದ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡಿದರು. ಭಾರತದ ಮತದಾರರು ಭಾವುಕರು, ಈ ಕಾರಣದಿಂದಲೋ ಏನೋ ಅವರು ಭಾವನಾತ್ಮಕ ವಿಚಾರಗಳ ಅಲೆಯಲ್ಲಿ ತೇಲಿ ಹೋದಂತೆ ಕಾಣಿಸುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸತ್ಯ ಯಾವಾಗಲೂ ಕಹಿಯಾಗಿರುತ್ತೆ, ಸುಳ್ಳು ಸಿಹಿಯಾಗಿರುತ್ತದೆ. ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲವಾದರೂ ಒಮ್ಮೆಮ್ಮೆ ಜನ ಅದನ್ನೇ ಇಷ್ಟಪಡುತ್ತಾರೆ. ವೈಯಕ್ತಿಕವಾಗಿ ನಾನು ಸೈದ್ಧಾಂತಿಕ ರಾಜಕೀಯದಲ್ಲಿ ಆಸಕ್ತಿ ಹೊಂದಿದವನು. ಸಮಸಮಾಜ ನಿರ್ಮಾಣದ ಕನಸು ಹೊತ್ತು ರಾಜಕೀಯ ಪ್ರವೇಶಿಸಿದವನು. ಅಧಿಕಾರದಲ್ಲಿದ್ದಾಗೆಲ್ಲ ಸಾಮಾಜಿಕ ನ್ಯಾಯಕ್ಕಾಗಿ ಪ್ರಯತ್ನ ಪಟ್ಟವನು ಎಂದು ಅವರು ಹೇಳಿದರು.

ಚುನಾವಣಾ ಸೋಲಿನ ಹೊರತಾಗಿಯೂ ನನ್ನ ಈ ಹೋರಾಟ ಮುಂದುವರಿಯಲಿದೆ. ಗೆಲುವಿನಿಂದ ನಾನೆಂದು ಹಿಗ್ಗಿದವನಲ್ಲ, ಸೋಲಿನಿಂದ ಕುಗ್ಗಿದವನೂ ಅಲ್ಲ. ಇವೆಲ್ಲ ರಾಜಕೀಯದಲ್ಲಿ ಇರುವಂತಹದ್ದೇ ಆಗಿದೆ. ಇದನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಸೋಲಿನ ಬಗ್ಗೆ ಖಂಡಿತ ಆತ್ಮಾವಲೋಕನ ನಡೆಯಲೇ ಬೇಕು. ಈ ಸೋಲಿಗೆ ಕಾರಣಗಳನ್ನು ಹುಡುಕಲು ಸಾಧ್ಯವಾದರೆ, ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಇದರ ಬದಲಿಗೆ ಪರಸ್ಪರ ದೋಷಾರೋಪ ಮಾಡುತ್ತಾ ಕಾಲ ಕಳೆಯುವುದು ಸರಿ ಅಲ್ಲ. ಸೋಲಿಗೆ ನಾವೆಲ್ಲ ಜವಾಬ್ದಾರರಾಗಿರುವ ಕಾರಣ ಇದನ್ನು ಜತೆಯಾಗಿಯೇ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಸುಭದ್ರವಾಗಿದೆ. ಬಿಜೆಪಿಯ ನೂರೆಂಟು ವಿಘ್ನಗಳ ಹೊರತಾಗಿಯೂ ಅದು ಸಾಂಗವಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಯಡಿಯೂರಪ್ಪಸೇರಿದಂತೆ ರಾಜ್ಯದ ಅನೇಕ ಬಿಜೆಪಿ ನಾಯಕರು ಈ ಸರಕಾರವನ್ನು ಉರುಳಿಸುತ್ತೇವೆ ಎಂದು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದೆ ಎಂದು ನಂಬಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News