ಮೋದಿ ಈ ಬಾರಿಯಾದರೂ ಅಭಿವೃದ್ಧಿಯತ್ತ ಗಮನ ನೀಡಲಿ: ಜಿ.ಟಿ.ದೇವೇಗೌಡ

Update: 2019-05-25 15:07 GMT

ಬೆಂಗಳೂರು, ಮೇ 25: ಪುಲ್ವಾಮಾ, ಸರ್ಜಿಕಲ್ ಸ್ಟ್ರೈಕ್‌ಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ನಡೆಸಿ, ಕೇಂದ್ರದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ ಈ ಬಾರಿಯಾದರೂ ಅಭಿವೃದ್ಧಿಯತ್ತ ಗಮನ ಕೊಡಲಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಲಹೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಈ ಮೊದಲು ಭರವಸೆ ಕೊಟ್ಟಂತೆ 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರ ಖಾತೆಗೆ ಹಾಕಲಿ. ರಾಜ್ಯದ ಬರ ಪರಿಸ್ಥಿತಿಗೆ, ಕುಡಿಯುವ ನೀರಿಗೆ ಸರಕಾರ ಕಳುಹಿಸಿರುವ ಪ್ರಸ್ತಾವನೆಯಂತೆ ಹಣ ನೀಡಲಿ. ರೈತರ ಕಡೆ ಗಮನ ಕೊಡಲಿ ಎಂದು ಹೇಳಿದರು.

ಲೋಕಸಭಾ ಚುನಾವಣಾ ಫಲಿತಾಂಶ ನಮಗೆ ದೊಡ್ಡ ಪಾಠ ಆಗಿದೆ. ಕೆಲವು ವಿಷಯಗಳನ್ನು ನಾನು ನೇರವಾಗಿ ಹೇಳುವಂತಿಲ್ಲ. ಮಾತನಾಡಿದರೆ ವಿವಾದಗಳಾಗುತ್ತವೆ. ರಾಜ್ಯದ ನಾಯಕರು ರಾಜಕಾರಣದ ಬಗ್ಗೆ ಯಾವ ಸಚಿವರೂ ಮಾತನಾಡಬಾರದು. ಕೇವಲ ಇಲಾಖೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡಬೇಕು ಎಂದು ಸೂಚನೆ ನೀಡಲಾಗಿದೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದರು.

ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದ ಮುಂದಿನ ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವಂತೆ ಸಮ್ಮಿಶ್ರ ಸರಕಾರದ ಉಭಯ ಪಕ್ಷಗಳಿಗೂ ಚಾಟಿ ಬೀಸಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನಾವು ಒಂದು ವರ್ಷ ಆಡಳಿತ ಪೂರೈಸಿದ್ದೇವೆ, ಉಳಿದ ಅವಧಿಯಲ್ಲಿ ಅಭಿವೃದ್ಧಿಯತ್ತ ಗಮನ ಕೊಡಲಿ ಎಂಬುದು ಜನರ ತೀರ್ಪಾಗಿದೆ ಎಂದು ಹೇಳಿದರು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿರುವುದಕ್ಕೆ ಅವರೂ ಬೇಸರಗೊಂಡಿಲ್ಲ. ಸೋಲೇ ಗೆಲುವಿನ ಸೋಪಾನ ಎಂದು ಚಿಕ್ಕ ವಯಸ್ಸಿನಲ್ಲೇ ಅರ್ಥ ಮಾಡಿಕೊಂಡು ಫಲಿತಾಂಶವನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ಹಾಸನದಲ್ಲಿ ಜಯಗಳಿಸಿರುವ ಪ್ರಜ್ವಲ್ ರೇವಣ್ಣ ದೇವೇಗೌಡರಿಗಾಗಿ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದ್ದರು. ಆದರೆ ಅದನ್ನು ದೇವೇಗೌಡರು ತಿರಸ್ಕರಿಸಿದ್ದಾರೆ. ನನ್ನ ಉತ್ತರಾಧಿಕಾರಿಯಾಗಿ ಹಾಸನದಲ್ಲಿ ಕೆಲಸ ಮಾಡು ಎಂದು ಆಶೀರ್ವದಿಸಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News