ಬೈಕ್ ಕಳವು ಪ್ರಕರಣ: ರೌಡಿ ಬಂಧನ, 8.5 ಲಕ್ಷ ರೂ. ಮೌಲ್ಯದ ದುಬಾರಿ ಬೈಕ್ಗಳ ಜಪ್ತಿ
ಬೆಂಗಳೂರು, ಮೇ 27: ಬೈಕ್ ಕಳವು ಮಾಡುತ್ತಿದ್ದ ಆರೋಪದಡಿ ರೌಡಿಯೋರ್ವನನ್ನು ಇಲ್ಲಿನ ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿ, 8.5 ಲಕ್ಷ ರೂ. ಮೌಲ್ಯದ ದುಬಾರಿ ಬೈಕ್ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಹೊರಮಾವಿನ ಅರ್ಜುನ್(29) ಬಂಧಿತ ರೌಡಿ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಜುನ್ ಬಂಧನದಿಂದ ಹೆಣ್ಣೂರಿನ 3, ಬಾಣಸವಾಡಿಯ 2, ಕೆಆರ್ ಪುರಂ, ಮಹದೇವಪುರ ಹಾಗೂ ಯಶವಂತಪುರದ ತಲಾ 1 ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಆರೋಪಿಯು ಬೆದರಿಕೆ, ಸುಲಿಗೆ ಯತ್ನ ಸೇರಿ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಆತನನ್ನು ಹೆಣ್ಣೂರು ಪೊಲೀಸ್ ಠಾಣೆಯ ರೌಡಿಪಟ್ಟಿಗೆ ಸೇರಿಸಲಾಗಿತ್ತು. ಅಪರಾಧ ಕೃತ್ಯದಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದ ಆರೋಪಿಯು, ಮೋಜು-ಮಸ್ತಿ ಮಾಡಲು ದುಬಾರಿ ಬೆಲೆಯ ಬೈಕ್ಗಳನ್ನು ನಕಲಿ ಕೀ ಬಳಸಿ ಇಲ್ಲವೆ, ಹ್ಯಾಂಡಲ್ನ ಬೀಗ ಮುರಿದು ಕಳವು ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಹೆಣ್ಣೂರಿನಲ್ಲಿ ನಡೆದಿದ್ದ ಬೈಕ್ ವಾಹನ ಕಳವು ಪ್ರಕರಣವೊಂದನ್ನು ದಾಖಲಿಸಿದ್ದ ಪೊಲೀಸರು, ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.