ತಾಯಿ-ಮಗ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಮಗನನ್ನು ನೇಣಿಗೆ ಹಾಕಿ ಕೊಲೆಗೈದ ತಂದೆ !

Update: 2019-06-02 17:02 GMT

ಬೆಂಗಳೂರು, ಜೂ.2: ಮೀಟರ್ ದಂಧೆಗೆ ತಾಯಿ ಹಾಗೂ ಮಗ ಬಲಿಯಾದ ಪ್ರಕರಣ ತಿರುವು ಪಡೆದುಕೊಂಡಿದ್ದು, ತಂದೆಯೇ ಮಗನನ್ನು ನೇಣು ಹಾಕುತ್ತಿರುವ ವಿಡಿಯೊವೊಂದು ಬೆಳಕಿಗೆ ಬಂದಿದೆ.

ನಗರದ‌ ಎಚ್‍ಎಎಲ್ ವಿಭೂತಿಪುರ ನಿವಾಸಿ ಗೀತಾಬಾಯಿ (34) ಹಾಗೂ ಮಗ ವರುಣ್ ರಾವ್ (12) ಮೃತರಾಗಿದ್ದು, ಗೀತಾಬಾಯಿ ಅವರ ಪತಿ ಸುರೇಶ್ ತನ್ನ ಮಗನಿಗೆ ನೇಣು ಹಾಕಿ ಕೊಲೆಗೈದಿದ್ದು, ಈ ಬಗ್ಗೆ ವಿಡಿಯೋದಲ್ಲಿ ದೃಶ್ಯ ಸೆರೆಯಾಗಿದೆ.

ನಡೆದದ್ದೇನು?: ಸ್ವಿಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿರುವ ಸುರೇಶ್, ಗೀತಾಬಾಯಿ ಎಂಬಾಕೆಯನ್ನು ಮದುವೆಯಾಗಿದ್ದು, ಹೆಚ್‍ಎಎಲ್ ವಿಭೂತಿಪುರದಲ್ಲಿ ವಾಸವಿದ್ದರು. ಗೀತಾಬಾಯಿ ಅವರು ಖಾಸಗಿ ಕಂಪೆನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಚೀಟಿ ವ್ಯವಹಾರ ನಡೆಸಿದ್ದ ಅವರು, ಅದರಲ್ಲಿ ನಷ್ಟ ಉಂಟಾಗಿ ಲಕ್ಷಾಂತರ ರೂ. ಸಾಲಗಾರಾಗಿದ್ದರು ಎನ್ನಲಾಗಿದೆ.

ಶನಿವಾರ ಮನೆಯಲ್ಲಿದ್ದ ಸುರೇಶ್ ಫ್ಯಾನಿಗೆ ಸೀರೆ ಕಟ್ಟಿ ಪುತ್ರ ವರುಣ್ ರಾವ್‍ಗೆ ನೇಣು ಹಾಕಿದ್ದಾನೆ. ಇದನ್ನು ನೋಡಿದ ಗೀತಾಬಾಯಿ ಕಣ್ಣೀರು ಹಾಕುತ್ತಿದ್ದ ಧ್ವನಿ ಕೇಳಿ ನೆರೆಹೊರೆಯವರು ಮನೆಗೆ ಬಂದಿದ್ದರು. ಈ ವೇಳೆ ಏನು ನಡೆದಿಲ್ಲ ಎಂಬಂತೆ ಸುರೇಶ್ ನಟಿಸಿದ್ದ. ಬಳಿಕ ಮಗನ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಗೀತಾಬಾಯಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ. ಆದರೆ, ಸುರೇಶ್ ಮಾತ್ರ ಮಗನ ಸಾವನ್ನಪ್ಪಿದ ಬಳಿಕವೇ ದೇಹವನ್ನು ಮಂಚದ ಮೇಲೆ ತಂದು ಹಾಕಿದ್ದಾನೆ. ಈ ದೃಶ್ಯವು ಆರೋಪಿಯ ಪುತ್ರಿ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾಳೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News