ರೋಹಿತ್ ವೇಮುಲಾನನ್ನು ನೆನಪಿಸಿದ ಪಾಯಲ್ ಆತ್ಮಹತ್ಯೆ

Update: 2019-06-03 06:12 GMT

ಡಾ.ಪಾಯಲ್ ತಡ್ವಿ ಆತ್ಮಹತ್ಯೆಯ ಮೂಲಕ ರೋಹಿತ್ ವೇಮುಲಾ ಆತ್ಮ ಮತ್ತೆ ಮುಲುಗುಟ್ಟಿದೆ. ಹೈದರಾಬಾದ್ ವಿ.ವಿ.ಯಲ್ಲಿ ಜಾತಿ ತಾರತಮ್ಯದ ಪರಮಾವಧಿ ಹಿಂಸೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲಾ ಕಳೆದ ಕೆಲವು ವರ್ಷಗಳಿಂದ ದೇಶಾದ್ಯಂತ ಸುದ್ದಿಯಾದರು. ಆ ಸಾವಿನ ಗಾಯ ಆರುವ ಮೊದಲೇ ಇದೀಗ ಪಾಯಲ್ ಸಾವು ಸುದ್ದಿಯಲ್ಲಿದೆ. ಈ ದೇಶದಲ್ಲಿ ಜಾತೀಯತೆ ಕೇವಲ ಹಳ್ಳಿಗಳಲ್ಲಿ ಅಥವಾ ಗುಡಿ ಗುಂಡಾರಗಳಲ್ಲಿ ಮಾತ್ರ ನೆಲೆಸಿರುವುದಲ್ಲ, ವಿದ್ಯಾವಂತರೆಂದು ಕರೆಸಿಕೊಂಡಿರುವವರ ಮೆದುಳಿನ ಆಳದಲ್ಲೂ ಇಂದು ವೈರಸ್ ರೂಪದಲ್ಲಿ ಬಚ್ಚಿಟ್ಟುಕೊಂಡಿರುವ ಸತ್ಯವನ್ನು ಪಾಯಲ್ ಸಾವು ಬಹಿರಂಗಪಡಿಸಿದೆ. ಬೃಹತ್ ಆಸ್ಪತ್ರೆಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲೂ ಅದು ದಲಿತರನ್ನು, ಶೋಷಿತರನ್ನು ಬೆಂಬಿಡದೆ ಹಿಂಬಾಲಿಸುತ್ತಿದೆ ಎನ್ನುವುದನ್ನು ಇದು ಸಾರಿ ಹೇಳುತ್ತಿದೆ. ಸಮಾನತೆ, ಪ್ರತಿಭೆ ಎಂಬ ನೆಪದಲ್ಲಿ ಮೀಸಲಾತಿಯನ್ನು ವಿರೋಧಿಸುವ ಮನಸ್ಥಿತಿಗಳೆಲ್ಲವೂ ಆಳದಲ್ಲಿ ದಲಿತರ ಕುರಿತಂತೆ ತಳೆದಿರುವ ಧೋರಣೆಯನ್ನು ಇದು ಒತ್ತಿ ಹೇಳಿದೆ. ಮೀಸಲಾತಿಯ ಮೂಲಕ ತಮ್ಮ ಹಕ್ಕುಗಳನ್ನು ಪಡೆದ ಬಳಿಕವೂ ಅವರು ಸಮಾಜದಲ್ಲಿ ಎದುರಿಸಬೇಕಾದ ಸವಾಲುಗಳು ಏನು ಎನ್ನುವುದನ್ನು ಪಾಯಲ್ ತನ್ನ ಆತ್ಮಹತ್ಯೆಯ ಮೂಲಕ ದೇಶಕ್ಕೆ ಸಾರಿ ಹೇಳಿದ್ದಾರೆ.

ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ವೈದ್ಯಳಾಗಿದ್ದ ಡಾ. ಪಾಯಲ್ ತಡ್ವಿಯವರ ಸಾವು ಮೆಡಿಕಲ್ ಕಾಲೇಜುಗಳಲ್ಲಿ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ತಾರತಮ್ಯ ಮತ್ತು ಜಾತೀಯತೆಗಳ ಅಮಾನವೀಯ ಸ್ವರೂಪಗಳನ್ನು ಬಯಲಿಗೆ ತಂದಿವೆ. ತಡ್ವಿಯವರು ಪರಿಶಿಷ್ಟ ಪಂಗಡ (ಎಸ್ಟಿ) ಎಂದು ಪರಿಗಣಿಸಲ್ಪಟ್ಟ ಮುಸ್ಲಿಂ ಸಮುದಾಯದ ಭಿಲ್ ಪಂಗಡಕ್ಕೆ ಸೇರಿದವರಾಗಿದ್ದರು. ವರದಿಗಳ ಪ್ರಕಾರ ಬಿವೈಎಲ್ ನಾಯರ್ ಆಸ್ಪತ್ರೆಗೆ ಸೇರಿದ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಮೂವರು ಹಿರಿಯ ವೈದ್ಯರಿಂದ ಸತತ ಕಿರುಕುಳಕ್ಕೆ ಗುರಿಯಾಗಿದ್ದರಿಂದಲೇ ತಡ್ವಿಯವರು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. ಆಕೆಯನ್ನು ಹಿರಿಯ ವೈದ್ಯರು ಜಾತಿನಿಂದೆಗೆ ಗುರಿ ಮಾಡುತ್ತಿರುವ ಬಗ್ಗೆ ಮತ್ತು ವಿನಾಕಾರಣ ಛೀಮಾರಿ ಹಾಕುತ್ತಾ ಅಪಮಾನಿಸುತ್ತಿರುವ ಬಗ್ಗೆ ತಡ್ವಿಯ ಕುಟುಂಬದವರು ಆಸ್ಪತೆಯ ಆಡಳಿತವರ್ಗಕ್ಕೆ ಔಪಚಾರಿಕವಾಗಿ ದೂರನ್ನು ನೀಡಿದ್ದರೂ ಸಹ ಏನೂ ಪ್ರಯೋಜನವಾಗಿರಲಿಲ್ಲ.

ತಡ್ವಿಯ ಮರಣಾನಂತರದಲ್ಲೇ ಆಡಳಿತ ಯಂತ್ರವು ಚುರುಕುಗೊಂಡು ಆ ಮೂವರು ಹಿರಿಯ ವೈದ್ಯರನ್ನೂ ಮತ್ತು ಆ ಘಟಕದ ಮುಖ್ಯಸ್ಥರನ್ನೂ ಅಮಾನತು ಮಾಡಿತು ಮತ್ತು ಸಂಸ್ಥೆಯ ರ್ಯಾಗಿಂಗ್ ವಿರೋಧಿ ಘಟಕವು ತನಿಖೆಯನ್ನೂ ಪ್ರಾರಂಭಿಸಿತು. ಆಕೆಯ ಸಾವಿನ ಒಂದು ವಾರದ ನಂತರ ತನಿಖಾ ಸಮಿತಿಯು ತಡ್ವಿಯವರು ತೀವ್ರತರವಾದ ಕಿರುಕುಳಕ್ಕೆ ಗುರಿಯಾಗಿದ್ದರೆಂದೂ, ಎಸ್ಟಿ ಪಂಗಡಕ್ಕೆ ಸೇರಿದ್ದರಿಂದ ಜಾತಿ ನಿಂದನೆಗೆ ಮತ್ತು ಎಸ್ಸಿ-ಎಸ್ಟಿ ಕೋಟಾದಲ್ಲಿ ಮೆಡಿಕಲ್ ಸೀಟು ಪಡೆದುಕೊಂಡಿದ್ದಕ್ಕೆ ಅವಹೇಳನಕ್ಕೆ ಗುರಿಯಾಗುತ್ತಿದ್ದುದನ್ನು ಪತ್ತೆ ಹಚ್ಚಿದೆ. ತಡ್ವಿಯ ಸಾವಿನ ನಂತರದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಸೇರಿದ ಹಲವಾರು ವೈದ್ಯರು ತಾವು ವೈದ್ಯಕೀಯ ಕಾಲೇಜಿನಲ್ಲಿದ್ದಾಗ ಹೇಗೆ ಇದೇ ಬಗೆಯ ಕಿರುಕುಳಕ್ಕೆ ಗುರಿಯಾಗಿದ್ದೆವೆಂದು ಹೇಳಿಕೊಳ್ಳಲು ಮುಂದೆಬರುತ್ತಿದ್ದಾರೆ.

 ಈ ಎಲ್ಲಾ ಬೆಳವಣಿಗೆಗಳಿಂದ ವಿಚಲಿತರಾಗಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ)ನ ಪ್ರತಿನಿಧಿಗಳು ಇಡೀ ವೈದ್ಯಕೀಯ ಕ್ಷೇತ್ರದಲ್ಲಿ ಜಾತಿ ಆಧಾರಿತ ತಾರತಮ್ಯಗಳು ಇರಲು ಸಾಧ್ಯವಿಲ್ಲವೆಂದೂ ಅಥವಾ ಇರಬಹುದಾದ ಜಾತಿ ಆಧಾರಿತ ತಾರತಮ್ಯಗಳು ತಮ್ಮ ಗಮನವನ್ನು ಸೆಳೆಯುವಷ್ಟು ದೊಡ್ಡಮಟ್ಟದಲ್ಲಿ ಇಲ್ಲವೆಂದೂ ವಾದಿಸುತ್ತಿದ್ದಾರೆ. ಆದರೆ ವಾಸ್ತವವಾಗಿ, ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಅಪಾರ ಶೈಕ್ಷಣಿಕ ಒತ್ತಡದ ಪರಿಸರಗಳಿರುವ ದೇಶದ ಇನ್ನಿತರ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯಗಳು ಮತ್ತು ಮೇಲ್ಜಾತಿಗೆ ಸೇರಿದ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಯ ಅಸಹನೆಗಳು ಸಾರ್ವತ್ರಿಕವಾಗಿ ಅಸ್ತಿತ್ವದಲ್ಲಿದೆ. ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ದಿಲ್ಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್)ನಲ್ಲಿ ಕೂಡ ಎಷ್ಟು ವ್ಯಾಪಕವಾಗಿ ಮತ್ತು ವಿವಿಧ ರೀತಿಗಳಲ್ಲಿ ಜಾತಿ ಆಧಾರಿತ ತಾರತಮ್ಯಗಳನ್ನು ಮಾಡಲಾಗುತ್ತದೆ ಎಂಬುದನ್ನು 2007ರಲ್ಲಿ ಥೋರಟ್ ಸಮಿತಿಯ ವರದಿಯು ತೋರಿಸಿಕೊಟ್ಟಿದೆ. ಆ ವರದಿಯು ಹೊರಬಂದು ಹತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದ್ದರೂ ಅದರಿಂದ ನಾವೇನು ಕಲಿತಿಲ್ಲವೆಂಬುದನ್ನು ತಡ್ವಿಯವರ ಸಾವು ಸೂಚಿಸುತ್ತದೆ.

  2013-2017ರ ನಡುವೆ ರ್ಯಾಗಿಂಗ್‌ಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಂದ 3,022 ದೂರುಗಳು ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗಕ್ಕೆ (ಯುಜಿಸಿ) ಸಲ್ಲಿಕೆಯಾಗಿವೆ. ಅಷ್ಟು ಮಾತ್ರವಲ್ಲದೆ ಇನ್ನೂ ಎಷ್ಟೋ ಪಟ್ಟು ಪ್ರಕರಣಗಳು ವರದಿಯಾಗಿರುವುದಿಲ್ಲ ಮತ್ತು ಸಾರ್ವಜನಿಕರ ಗಮನಕ್ಕೆ ಬಂದಿರುವುದಿಲ್ಲ. ಯುಜಿಸಿಯ ವರದಿಯೇ ಹೇಳುವಂತೆ ಕಾಲೇಜಿನ ಆಡಳಿತ ಮಂಡಳಿಯು ತಮ್ಮ ದೂರನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬ ಬಗ್ಗೆ ವಿಶ್ವಾಸವಿಲ್ಲದಿರುವುದರಿಂದ, ದೂರು ನೀಡಿದರೆ ತಮ್ಮ ಮುಂದಿನ ಭವಿಷ್ಯಕ್ಕೆ ಹಾನಿಯಾಗಬಹುದೆಂಬ ಭಯದಿಂದ, ಕಾಲೇಜು ಕ್ಯಾಂಪಸ್‌ನಿಂದ ಬಹಿಷ್ಕಾರಕ್ಕೆ ಗುರಿಯಾಗಬಹುದೆಂಬ ಆತಂಕದಿಂದ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಥಳಿತಕ್ಕೆ ಗುರಿಯಾಗಬಹುದೆಂಬ ಭೀತಿಯಿಂದ ಶೇ.84.3ರಷ್ಟು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸೀನಿಯರ್‌ಗಳಿಂದ ರ್ಯಾಗಿಂಗ್‌ಗೆ ಗುರಿಯಾದ ಬಗ್ಗೆ ದೂರುಗಳನ್ನೇ ಸಲ್ಲಿಸುವುದಿಲ್ಲ.

ಮೇಲಾಗಿ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಬಗ್ಗೆ ಮೇಲ್ಜಾತಿಗಳಿಗೆ ಸೇರಿದ ಹಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವರ್ಗದವರು ಅಪಾರ ಅಸಹನೆಯನ್ನೇ ತುಂಬಿಕೊಂಡಿರುವಾಗ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅದನ್ನು ಹೇಳಿಕೊಳ್ಳಲು ಹಿಂಜರಿಕೆಯಾಗುತ್ತದೆ ಮತ್ತು ಆ ಕೋಟಾಗಳ ಮೂಲಕ ಪ್ರವೇಶವನ್ನು ಪಡೆದುಕೊಂಡ ಸಂಗತಿ ಬಯಲಾಗುವುದರ ಬಗ್ಗೆ ಅಂಜುವಂತಹ ಸನ್ನಿವೇಶಗಳು ಇರುತ್ತದೆ. ಇದೂ ಸಹ ವಿದ್ಯಾರ್ಥಿಗಳು ದೂರು ನೀಡದಂತೆ ಮಾಡುತ್ತವೆ. ತಡ್ವಿ ಮತ್ತವರ ಕುಟುಂಬ ವರ್ಗದವರು ಆಕೆ ಎದುರಿಸುತ್ತಿದ್ದ ಕಿರುಕುಳದ ಬಗ್ಗೆ ಆಡಳಿತ ಮಂಡಳಿಗೆ ಹಲವಾರು ದೂರುಗಳನ್ನು ಕೊಟ್ಟಿದ್ದರೂ ಅದರ ಬಗ್ಗೆ ಅವರು ಕ್ರಮಗಳನ್ನು ತೆಗೆದುಕೊಳ್ಳುವುದಿರಲಿ, ದೂರು ಸ್ವೀಕಾರ ಪತ್ರವನ್ನೂ ಸಹ ಕೊಟ್ಟಿರಲಿಲ್ಲ. ವಾಸ್ತವವಾಗಿ ಟಿಎನ್‌ಎಂ ಕಾಲೇಜಿನ ರ್ಯಾಗಿಂಗ್ ವಿರೋಧಿ ಸಮಿತಿಯು ಕಳೆದ ಒಂದೂವರೆ ವರ್ಷದಿಂದ ಒಮ್ಮೆಯೂ ಸಭೆ ಸೇರಿರಲಿಲ್ಲವೆಂದು ವರದಿಯಾಗಿದೆ. ಅಷ್ಟು ಮಾತ್ರವಲ್ಲ. ಆಕೆಯ ಕುಟುಂಬದವರ ಪ್ರಕಾರ ಆಡಳಿತ ಮಂಡಳಿಗೆ ದೂರು ಸಲ್ಲಿಸಿದ ಬಳಿಕ ತಡ್ವಿಯವರು ಅನುಭವಿಸುತ್ತಿದ್ದ ಕಿರುಕುಳ ಇನ್ನೂ ಹೆಚ್ಚಾಯಿತು. ಹೀಗಾಗಿ ದೂರುಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ಮತ್ತು ಅದರ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದೂ ಸಹ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳು ತಾವು ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ದೂರು ಕೊಡಲು ಮುಂದೆ ಬರದಂತೆ ಮಾಡುತ್ತವೆ. ಅದರ ಬದಲಿಗೆ ಬಹುಪಾಲು ಜನ ಕಿರುಕುಳವನ್ನು ಸುಮ್ಮನೆ ಸಹಿಸುವ ಅಥವಾ ಓದನ್ನೇ ತೊರೆಯುವ ಅಥವಾ ಇನ್ನೂ ತೀವ್ರವಾದ ಸನ್ನಿವೇಶಗಳಲ್ಲಿ ತಮ್ಮ ಪ್ರಾಣವನ್ನೇ ತೊರೆಯುವ ತೀರ್ಮಾನಗಳನ್ನು ತೆಗೆದುಕೊಳ್ಳುವಂತಾಗುತ್ತಿದೆ. ಇದು ಉನ್ನತ ಶಿಕ್ಷಣದಲ್ಲಿ ಈಗಾಗಲೇ ಕಡಿಮೆಯಿರುವ ಎಸ್ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆಯಾಗುವಂತೆ ಮಾಡುತ್ತದೆ. ಆಡಳಿತ ವರ್ಗದಲ್ಲಿ ಮತ್ತು ಅಧ್ಯಾಪಕ ವರ್ಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಪ್ರಾತಿನಿಧ್ಯ ಇಲ್ಲದಿರುವ ತನಕ ಅಥವಾ ಅವರು ಇಂತಹ ವಿಷಯಗಳಲ್ಲಿ ಸಂವೇದನಾಶೀಲರಾಗುವ ತನಕ ಜಾತಿ ತಾರತಮ್ಯದ ಅಸ್ತಿತ್ವವನ್ನೇ ನಿರಾಕರಿಸುಂತಹ, ತಾರತಮ್ಯದ ಮತ್ತು ರ್ಯಾಗಿಂಗ್ ಕುರಿತು ನೀಡಲಾಗುವ ದೂರುಗಳ ಬಗ್ಗೆ ಉಪೇಕ್ಷೆ ತೋರುವಂತಹ ಅಥವಾ ತಡ್ವಿಯವರ ಪ್ರಕರಣದಲ್ಲಾದಂತೆ ಏನೂ ಕ್ರಮ ತೆಗೆದುಕೊಳ್ಳದಂತಹ ವಿದ್ಯಮಾನಗಳು ಪ್ರತಿ ಉನ್ನತ ಶಿಕ್ಷಣದ ಸಂಸ್ಥೆಗಳಲ್ಲೂ ಪದೇಪದೇ ನಡೆಯುತ್ತಲೇ ಇರುತ್ತದೆ.

ರೋಹಿತ್‌ರ ಮರಣ ಮತ್ತು ಆ ನಂತರ ನಡೆದ ವಿದ್ಯಮಾನಗಳು ಅಲಕ್ಷಿತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳ ರಕ್ಷಣೆಗಾಗಿ ರೋಹಿತ್ ಕಾಯ್ದೆಯನ್ನು ಜಾರಿ ಮಾಡಬೇಕೆಂಬ ಆಗ್ರಹಕ್ಕೆ ದಾರಿ ಮಾಡಿಕೊಟ್ಟಿತು. ಆದರೂ, ಸಾಮಾಜಿಕ ತಾರತಮ್ಯಗಳು ಹುಟ್ಟುಹಾಕುವ ಆತಂಕಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಅದನ್ನು ನಡೆಸುವವರು ಅರ್ಥಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದಾಗ ಮಾತ್ರ ಅಂತಹ ಕಾಯ್ದೆಗಳೂ ಸಹ ಪರಿಣಾಮಕಾರಿಯಾಗಲು ಸಾಧ್ಯ. ಅತ್ಯಂತ ನಿರುಪದ್ರವಿ ಎಂದು ಬಣ್ಣಿಸಲಾಗುವ ರ್ಯಾಗಿಂಗ್‌ಗಳಿಂದ ಹಿಡಿದು ಅತ್ಯಂತ ತೀವ್ರತರವಾದ ಕಿರುಕುಳ ಎಂದು ಪರಿಗಣಿಸಲ್ಪಡುವ ರ್ಯಾಗಿಂಗ್‌ಗಳವರೆಗೆ ಪ್ರತಿಯೊಂದೂ ಸಹ ಹಿಂಸಾತ್ಮಕ ಕ್ರಮಗಳೇ ಆಗಿವೆ. ಮತ್ತವು ರ್ಯಾಗಿಂಗ್‌ಗೆ ಒಳಗಾಗುವ ವ್ಯಕ್ತಿಯ ಮಾನವ ಹಕ್ಕುಗಳ ಮತ್ತು ಘನತೆಯಿಂದ ಜೀವಿಸಬಯಸುವ ಮತ್ತು ಶಿಕ್ಷಣವನ್ನು ಪಡೆದುಕೊಳ್ಳುವಹಕ್ಕುಗಳ ಉಲ್ಲಂಘನೆಯಾಗಿದೆ. ಇದನ್ನು ಗ್ರಹಿಸಿದಾಗ ಮಾತ್ರ ತಡ್ವಿ, ವೇಮುಲಾರಿಗೆ ಮತ್ತು ಮೌನದಿಂದ ಎಲ್ಲಾ ಬಗೆಯ ನೋವು ಮತ್ತು ಕಿರುಕುಳಗಳನ್ನು ಸಹಿಸಿಕೊಳ್ಳುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ನ್ಯಾಯ ಒದಗುವಂತೆ ಮಾಡುವ ಕಡೆ ಮುಂದಡಿಯಿಡಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News