ನೀರಿನ ಸಂಪ್ನಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ
ಬೆಂಗಳೂರು, ಜೂ.9: ಮನೆಯ ಮುಂಭಾಗದ ನೀರಿನ ಸಂಪ್ನಲ್ಲಿ ವ್ಯಕ್ತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಪಿಗೆಹಳ್ಳಿಯ ಬಾಲಾಜಿ ಕೃಪಾ ಲೇಔಟ್ನ ಅಪ್ರೋಝ್ಖಾನ್ (36) ಎಂಬುವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದ ಅಪ್ರೋಝ್ ಖಾನ್ ಅವರು ಪತ್ನಿ ಮೆಹೆರಾರೊಂದಿಗೆ ಇಲ್ಲಿನ ಬಾಲಾಜಿ ಕೃಪಾಲೇಔಟ್ನಲ್ಲಿ ವಾಸವಾಗಿದ್ದರು. ರಂಝಾನ್ ಹಬ್ಬದ ಹಿನ್ನೆಲೆ ಪತ್ನಿ ಮೆಹೆರಾ ಅವರು ತಾಯಿ ಮನೆಗೆ ತೆರಳಿದ್ದರು. ಎರಡು ದಿನಗಳ ನಂತರ ಪತಿ ಅಪ್ರೋಝ್ ಖಾನ್, ಮೊಬೈಲ್ಗೆ ಪತ್ನಿ ಮೆಹೆರಾ ಕರೆ ಮಾಡಿದಾಗ ಮೊಬೈಲ್ ಬಂದ್ ಮಾಡಲಾಗಿತ್ತು. ಈ ಬಗ್ಗೆ ಅತ್ತೆ, ಮಾವನನ್ನ ಪ್ರಶ್ನಿಸಿದರೂ, ಮಾಹಿತಿ ಸಿಕ್ಕಿರಲಿಲ್ಲ.
ಬಳಿಕ ಅಪ್ರೋಝ್ಗಾಗಿ ಹುಡುಕಾಟ ನಡೆಸಿದಾಗ ಸಂಪ್ನಲ್ಲಿ ಶವ ಪತ್ತೆಯಾಗಿದೆ. ಪತಿಯನ್ನು ಉದ್ದೇಶಪೂರಕವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸುವಂತೆ ಸಂಪಿಗೆಹಳ್ಳಿ ಠಾಣಾ ಪೊಲೀಸರಿಗೆ ಮೆಹೆರಾ ದೂರು ನೀಡಿದ್ದಾರೆ.