ಲಾರಿ ಢಿಕ್ಕಿ: ಬೈಕ್ ಸವಾರ ಸಾವು
Update: 2019-06-10 18:10 GMT
ಬೆಂಗಳೂರು, ಜೂ.10: ಶರವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದು ಬೈಕ್ನಲ್ಲಿ ಹೋಗುತ್ತಿದ್ದ ಯುವಕ ಮೃತಪಟ್ಟಿರುವ ಘಟನೆ ಕೆ.ಆರ್. ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ನಾಗವಾರಪಾಳ್ಯದ ಅಶ್ವತ್ಥಪ್ಪ ಲೇಔಟ್ನ ಪೂವರಸನ್(22) ಮೃತಪಟ್ಟವರನ್ನು ಗುರುತಿಸಲಾಗಿದೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೂವರಸನ್, ಸೋಮವಾರ ಮುಂಜಾನೆ ರಾಮಮೂರ್ತಿನಗರದ ಸ್ನೇಹಿತನ ಮನೆಗೆ ಹೋಗಿ, ಬೈಕ್ನಲ್ಲಿ ವಾಪಸ್ ಆಗುತ್ತಿದ್ದರು. ಮಾರ್ಗಮಧ್ಯೆ ರಾಮಮೂರ್ತಿನಗರ ಸಿಗ್ನಲ್ ಬಳಿ ಲಾರಿಯೊಂದು ಎದುರಿನಿಂದ ಬಂದು ಢಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಕೆ.ಆರ್. ಪುರಂ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.