ಬಡಮಕ್ಕಳಿಗೆ ಉಚಿತ ಸೈಕಲ್, ಪುಸ್ತಕಗಳ ವಿತರಣೆ

Update: 2019-06-10 18:11 GMT

ಬೆಂಗಳೂರು, ಜೂ.10: ಬಾಂಧವ ಸಂಸ್ಥೆಯ 5ನೆ ವರ್ಷದ ಸಂಭ್ರಮಾಚರಣೆ ಅಂಗವಾಗಿ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾವಿರಾರು ಬಡಮಕ್ಕಳಿಗೆ ಉಚಿತ ಸೈಕಲ್ ಹಾಗೂ ನೋಟ್ ಪುಸ್ತಕಗಳನ್ನು ಮಾಜಿ ಸಚಿವ ರಾಮಲಿಂಗಾರೆಡ್ಡಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಐದು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಾಂಧವ ಸಂಸ್ಥೆ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಲಿ. ಸಾವಿರಾರು ಬಡ ಮಕ್ಕಳಿಗೆ ಸೈಕಲ್ ಹಾಗೂ ನೋಟ್ ಪುಸ್ತಕಗಳನ್ನು ವಿತರಣೆ ಮಾಡುತ್ತಿರುವುದು ನಿಜವಾದ ಸಮಾಜ ಸೇವೆಯಾಗಿದೆ ಎಂದು ನುಡಿದರು.

ಅನಂತರ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಬಾಂಧವ ಸಂಸ್ಥೆ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇಂಥ ಸಂಸ್ಥೆಗಳು ಎಲ್ಲೆಡೆ ಆರಂಭವಾಗಬೇಕು. ಇದರಿಂದ ಸಮಸ್ತ ನಾಗರಿಕರಿಗೆ ಅನುಕೂಲವಾಗಬೇಕೆಂದು ಹಾರೈಸಿದರು.

ಬಿಬಿಎಂಪಿ ಸದಸ್ಯ ನಾಗರಾಜ್ ಮಾತನಾಡಿ, ಬಾಂಧವ ಸಂಸ್ಥೆ ರಾಜ್ಯದಾದ್ಯಂತ ಐದನೇ ವರ್ಷ ಯಶಸ್ವಿ ಹಾಗೂ ಮಾದರಿಯಾಗಿ ನಡೆಯುತ್ತಿದೆ. ನಮ್ಮ ಸಂಸ್ಥೆಗೆ ನಾಗರಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜನತೆಗೆ ಯಾವುದೇ ಸಮಸ್ಯೆ ಎದುರಾದರು ಬಾಂಧವ ಸಂಸ್ಥೆಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂದರು.

ಕಸದ ಸಮಸ್ಯೆ, ಬೀದಿ ದೀಪ, ನೀರಿನ ಸಮಸ್ಯೆ ಸೇರಿದಂತೆ ಇನ್ನಿತರೆ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಸಂಸ್ಥೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಸಮಸ್ಯೆ ಪರಿಹರಿಸುತ್ತಿದೆ. ಬೆಂಗಳೂರಿನಲ್ಲಿ ಅಲ್ಲದೇ, ರಾಜ್ಯಾದ್ಯಂತ ಇಂಥ ಕಾರ್ಯಕ್ರಮಗಳನ್ನು ಬಾಂಧವ ಸಂಸ್ಥೆ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಶಾಸಕಿ ಸೌಮ್ಯರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News