ಅತ್ಯಾಚಾರಿಗಳ ಕೈ ಕಡಿಯಿರಿ ಎಂಬ ಹೇಳಿಕೆ: ವಿಚಾರಣೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮುತಾಲಿಕ್

Update: 2019-06-11 16:45 GMT

ಬೆಂಗಳೂರು, ಜೂ.11: ಅತ್ಯಾಚಾರಿಗಳ ಕೈ ಕತ್ತರಿಸಿ, ಅದರ ಬಳಿಕ ಬೇಕಾದ ಕಾನೂನು ಸಹಾಯ ಮತ್ತು ಕೋರ್ಟ್ ವೆಚ್ಚವನ್ನು ಶ್ರೀರಾಮಸೇನೆಯಿಂದ ಭರಿಸುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಂಗಳೂರಿನ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.

2014ರ ನ.16ರಂದು ಮಂಗಳೂರಿಗೆ ಬಂದಿದ್ದ ಪ್ರಮೋದ್ ಮುತಾಲಿಕ್, ಆರ್ಯ ಸಮಾಜದ ಬಳಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅತ್ಯಾಚಾರಿಗಳನ್ನು ಕೋರ್ಟ್ ಮತ್ತು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವ ಬದಲು ಪಾಲಕರು ಅಥವಾ ಸಂಬಂಧಪಟ್ಟವರು ಅತ್ಯಾಚಾರಿಗಳ ಕೈ ಕಾಲುಗಳನ್ನು ಕತ್ತರಿಸಬೇಕು. ಇಂತಹ ಪ್ರಕರಣಗಳು ನಡೆದ ಸಂದರ್ಭ ಶ್ರೀರಾಮ ಸೇನೆಯ ವತಿಯಿಂದ ಕೋರ್ಟ್ ಪ್ರಕ್ರಿಯೆಯ ಸಂಪೂರ್ಣ ವೆಚ್ಚ ಭರಿಸಲಾಗುವುದು ಎಂದಿದ್ದರು.

ಈ ಹೇಳಿಕೆಯ ಹಿಂದೆ ಹಿಂಸೆಗೆ ದಾರಿ ಮಾಡಿಕೊಡುವ ಮತ್ತು ಶಾಂತಿ ಕದಡುವ ಉದ್ದೇಶ ಇರುವುದರಿಂದ ಮಂಗಳೂರು ಪೂರ್ವ ವಿಭಾಗ ಪೊಲೀಸ್ ಠಾಣೆಯವರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 505(1)ಬಿಯಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಮುತಾಲಿಕ್, ಮಂಗಳೂರಿನ ಕೋರ್ಟ್‌ನಲ್ಲಿ 2014ರ ಡಿ.20ರಂದು ಜಾಮೀನು ಪಡೆದಿದ್ದರು. ಈಗ ಹೈಕೋರ್ಟ್ ಮೆಟ್ಟಿಲೇರಿ ಮಂಗಳೂರು ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ಹಾಗೂ ಪ್ರಕರಣ ರದ್ದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News