ಕಣ್ಣಮುಂದಿನ ಸತ್ಯಗಳನ್ನು ಗ್ರಹಿಸಿ... ಹತಾಶೆಗೆ ಜಾರದಿರಿ

Update: 2019-06-11 18:30 GMT

ಕೈಚೆಲ್ಲಿ ಕುಳಿತವರು ಹತಾಶ ಮನಸ್ಥಿತಿಗಳಿಂದ ಹೊರಬಂದು ಕಣ್ಣೆದುರಿನ ವಾಸ್ತವಗಳನ್ನು ಗ್ರಹಿಸಬೇಕಾಗಿದೆ. ಸಾಮಾಜಿಕ ಹಾಗೂ ರಾಜಕೀಯ ಸ್ಫೂರ್ತಿಯಿಂದ ಜನಸಾಮಾನ್ಯರಿಗೆ ಭಾರತದ ಪ್ರಜಾ ಪ್ರಭುತ್ವ ಹಾಗೂ ಚುನಾವಣೆಗಳ ಹಿಂದಿನ ವಾಸ್ತವಗಳ ಬಗ್ಗೆ ಅರಿವು ಮೂಡಿಸುವ ಕೆಲಸಗಳನ್ನು ಮಾಡುವಲ್ಲಿ ಈಗಲಾದರೂ ಆಸಕ್ತಿ ವಹಿಸಿದರೆ ಆ ಮಟ್ಟಿಗಾದರೂ ಸಮಾಜದಲ್ಲಿ ಜಾಗೃತಿ ಮೂಡಿ ಮುಂದೆ ಬರುವ ಗಂಡಾಂತರಗಳಿಂದ ಬಚಾವಾಗುವ ಪರ್ಯಾಯಗಳತ್ತ ಅವರು ಆಲೋಚಿಸುವಂತಾಗುತ್ತದೆ.


ಮೋದಿಯ ಬಿಜೆಪಿ ಆಶ್ಚರ್ಯಕರವಾಗಿ 2019ರ ಮಹಾಚುನಾವಣೆಯಲ್ಲಿ ಎರಡನೇ ಅವಧಿಗೆ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದೆ. ಎಲ್ಲಾ ವಿರೋಧ ಪಕ್ಷಗಳು ನಾಮಮಾತ್ರದ ಮಟ್ಟಕ್ಕೆ ಹೋಗಿ ನಿಂತಿವೆ. ಮೋದಿ -2 ಸರಕಾರ ಆರಂಭದಲ್ಲಿಯೇ ಹಿಂದಿ ಭಾಷೆ ಹೇರುವ ಭಾರೀ ಸನ್ನಾಹ ನಡೆಸಿದೆ ಎಂಬ ಸುದ್ದಿ ದಕ್ಷಿಣ ಭಾರತ, ಅದರಲ್ಲೂ ತಮಿಳುನಾಡು, ಕರ್ನಾಟಕಗಳಲ್ಲಿ ಭಾರೀ ವಿವಾದಕ್ಕೆಡೆ ಮಾಡಿದೆ. ಅದು ದಕ್ಷಿಣ ಭಾರತದ ರಾಜ್ಯಗಳ ಒಕ್ಕೂಟ ರಚನೆಯ ಪ್ರಸ್ತಾವದ ಚರ್ಚೆಯನ್ನು ಮತ್ತೆ ಹೆಚ್ಚಿನ ಶಕ್ತಿಯೊಂದಿಗೆ ಮುನ್ನೆಲೆಗೆ ತಂದಿದೆ. ಅಲ್ಲದೆ ದಕ್ಷಿಣದ ರಾಜ್ಯಗಳು ಉತ್ಪಾದಿಸುತ್ತಿರುವ ಸಂಪತ್ತನ್ನು ಕೇಂದ್ರ ಸರಕಾರ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸುತ್ತಿದೆ. ಈ ಅಸಮಾನ ಹಂಚಿಕೆ ವಿರುದ್ಧದ ಧ್ವನಿ ಈಗ ಸ್ವಲ್ಪಹೆಚ್ಚಿನ ಶಕ್ತಿಯನ್ನು ಪಡೆದು ಕೊಂಡಿದೆ. ಸಾಮಾಜಿಕ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಸಾಕಷ್ಟು ಅವಕಾಶವನ್ನು ಈ ಚರ್ಚೆ ಪಡೆದಿದೆ. ಈ ಚರ್ಚೆ ಮುನ್ನೆಲೆಗೆ ಬರಲು ಪ್ರಧಾನವಾದ ಕಾರಣ ಉತ್ತರ ಭಾರತ ಸಂಘ ಪರಿವಾರ ಹಾಗೂ ಬಿಜೆಪಿಯ ಕೋಮು ಹಾಗೂ ಜಾತಿ ರಾಜಕಾರಣದ ಆಡೊಂಬಲವಾಗಿದೆ. ದಕ್ಷಿಣಭಾರತ ಹಾಗಿಲ್ಲ.

ಸಂಘಪರಿವಾರದ ಹುನ್ನಾರಗಳನ್ನು ದಕ್ಷಿಣದ ರಾಜ್ಯಗಳು ಹಿಮ್ಮೆಟ್ಟಿಸಿವೆ. ಸಂಘ ಪರಿವಾರದ ಕೋಮು ದ್ವೇಷ ಹಾಗೂ ಬಹುತ್ವದ ವಿರೋಧಗಳನ್ನು ತಡೆಯಬೇಕಾದರೆ ದಕ್ಷಿಣದ ರಾಜ್ಯಗಳು ಪ್ರತ್ಯೇಕ ಒಕ್ಕೂಟವನ್ನು ರಚಿಸಿಕೊಳ್ಳಬೇಕು. ಉತ್ತರದ ಆರ್ಯ ಚಿಂತನೆಗಳನ್ನು ದಕ್ಷಿಣದ ದ್ರಾವಿಡ ಚಿಂತನೆಗಳು ಹೋರಾಡಿ ತಡೆಯುತ್ತಿವೆ. ಹಾಗಾಗಿ ದಕ್ಷಿಣ ರಾಜ್ಯಗಳನ್ನು ಸೇರಿಸಿ ದ್ರಾವಿಡ ರಾಜ್ಯಗಳ ಒಕ್ಕೂಟವೆಂದು ಪರಿಗಣಿಸಬೇಕೆಂಬ ಅಭಿಪ್ರಾಯವೂ ಮುನ್ನೆಲೆಗೆ ಬಂದಿದೆ. ಇದನ್ನು ತಮಿಳುನಾಡಿನ ಡಿಎಂಕೆಯ ಸ್ಟಾಲಿನ್ ಸೇರಿದಂತೆ ಹಲವಾರು ರಾಜಕಾರಣಿಗಳು ಅನುಮೋದಿಸಿ ಬೆಂಬಲಿಸುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ದಕ್ಷಿಣದ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ತೆರಿಗೆಯನ್ನು ನೀಡುತ್ತಿದ್ದರೂ ಮರಳಿ ಆ ರಾಜ್ಯಗಳಿಗೆ ಸಿಗುತ್ತಿರುವುದು ಬಹಳ ಕಡಿಮೆ. ಅದೇ ವೇಳೆಯಲ್ಲಿ ಉತ್ತರದ ರಾಜ್ಯಗಳು ಅವರು ನೀಡಿದ್ದಕ್ಕಿಂತಲೂ ಹಲವು ಪಟ್ಟು ಮರಳಿ ಪಡೆಯುತ್ತಿವೆ. ಅದೇ ವೇಳೆ ದಕ್ಷಿಣ ರಾಜ್ಯಗಳಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಕೇಂದ್ರ ನೀಡಬೇಕಾದ ಕಾನೂನು ಬದ್ಧ ಅನುದಾನಗಳಲ್ಲಿ ಭಾರೀ ತಾರತಮ್ಯ ಮಾಡಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಈ ಚರ್ಚೆ ಹಿಂದೆ ಕೂಡ ಮುನ್ನೆಲೆಗೆ ಬಂದಿತ್ತು.

ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಂಧ್ರದ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು ಆಯಾ ರಾಜ್ಯಗಳ ವಿಚಾರಗಳಲ್ಲಿ ಕೇಂದ್ರ ಸರಕಾರವು ಅನುದಾನ ಬಿಡುಗಡೆಯಲ್ಲಿ ತಾರತಮ್ಯ ತೋರಿಸಿದಾಗ ತೆರಿಗೆ ಹಂಚಿಕೆಯಲ್ಲಿನ ಅಸಮಾನತೆಗಳನ್ನು ಬೆರಳು ಮಾಡಿ ತೋರಿಸಿದ್ದರು. ಉತ್ತರದ ರಾಜ್ಯಗಳಿಗೆ ಹಲವು ಪಟ್ಟು ಹೆಚ್ಚು ತೆರಿಗೆ ಹಂಚಿಕೆ ಹಾಗೂ ಅನುದಾನಗಳನ್ನು ನೀಡಲಾಗುತ್ತಿದೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳಿದ್ದರು. ವಾಸ್ತವದಲ್ಲಿ ಉತ್ತರದ ರಾಜ್ಯಗಳಿಗೆ ಹೋಲಿಸಿದಾಗ ದಕ್ಷಿಣದ ರಾಜ್ಯಗಳು ಸಾಪೇಕ್ಷವಾಗಿ ಮುಂದುವರಿದ ರಾಜ್ಯಗಳಾಗಿವೆ. ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಉದ್ಯೋಗ ಅರಸಿಕೊಂಡು ಭಾರೀ ಸಂಖ್ಯೆಯಲ್ಲಿ ಜನರು ವಲಸೆ ಬರುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್‌ಗಳಂತಹ ನಗರಗಳು ದೊಡ್ಡ ಪ್ರಮಾಣದ ವಲಸಿಗರ ನಗರಗಳಾಗಿವೆ. ಕೇರಳದ ಎಲ್ಲೆಡೆಯೂ ಉತ್ತರಭಾರತದ ವಲಸಿಗರೇ ಹೆಚ್ಚಿನ ಪ್ರಮಾಣದಲ್ಲಿ ಕೂಲಿಯಾಳು ಗಳಾಗಿದ್ದಾರೆ.

ಜೊತೆಗೆ ಈಗ ಮೋದಿ ಸರಕಾರ ಹಿಂದಿ ಭಾಷೆಯನ್ನು ದಕ್ಷಿಣದ ರಾಜ್ಯಗಳ ಮೇಲೆ ಹೇರಲು ಶಿಕ್ಷಣ ನೀತಿಯ ಮೂಲಕ ಹೊರಟಿದೆ ಎಂಬ ಬಲವಾದ ಗುಮಾನಿ ದಕ್ಷಿಣ ಭಾರತ ರಾಜ್ಯಗಳ ಒಕ್ಕೂಟದ ಪ್ರಸ್ತಾಪವನ್ನು ಚಾಲನೆಯಲ್ಲಿಟ್ಟಿದೆ.

 ಭಾರತ ಹಲವಾರು ರಾಷ್ಟ್ರೀಯತೆಗಳನ್ನು ಹೊಂದಿರುವ ಪ್ರದೇಶ. ಅವುಗಳಲ್ಲಿ ಕೆಲವು ರಾಷ್ಟ್ರೀಯತೆಗಳು ರಾಜ್ಯಗಳ ಸ್ಥಾನಗಳನ್ನು ಪಡೆದುಕೊಂಡಿವೆ. ಪ್ರತಿ ರಾಷ್ಟ್ರೀಯತೆಗೂ ಅದರದ್ದೇ ಆದ ಭಾಷೆ, ಪ್ರದೇಶ, ಕಲೆ, ಸಾಹಿತ್ಯ, ಆಚಾರ ವಿಚಾರ, ಸಂಸ್ಕೃತಿಗಳಿವೆ. ಭಾರತೀಯ ಸಂಸ್ಕೃತಿ ಎಂದು ಎಲ್ಲವನ್ನೂ ಏಕಗೊಳಿಸಿ ಹೇಳಿದಾಕ್ಷಣ ಅಲ್ಲಿ ಈ ಪ್ರತ್ಯೇಕತೆಗಳು ಹಾಗೂ ವೈವಿಧ್ಯತೆಗಳನ್ನು ಮರೆಸಿ ಅಳಿಸಿ ಹಾಕುವ ಹುನ್ನಾರ ಕೂಡ ಎದ್ದು ಕಾಣುತ್ತದೆ. ಕನ್ನಡ ಸಂಸ್ಕೃತಿ, ತೆಲುಗು ಸಂಸ್ಕೃತಿ, ತಮಿಳು ಸಂಸ್ಕೃತಿ, ಬಂಗಾಳಿ ಸಂಸ್ಕೃತಿ, ಗುಜರಾತಿ ಸಂಸ್ಕೃತಿ, ಹರಿಯಾನ್ವಿ ಸಂಸ್ಕೃತಿ ಎಂದೆಲ್ಲಾ ನಾವು ಗುರುತಿಸಬಹುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ಭಾರತೀಯ ಸಂಸ್ಕೃತಿ ಎಂದು ಗುರುತಿಸಲು ಹೋದಾಗ ಅದು ಆರೆಸ್ಸೆಸ್ ಸಂಘ ಪರಿವಾರದ ಬ್ರಾಹ್ಮಣಶಾಹಿ ಸಂಸ್ಕೃತಿ ಚಿಂತನೆಯಾಗುವುದೇ ವಿನಃ ಬೇರೇನೂ ಆಗಲಾರದು. ಈ ಚಿಂತನೆ ಹಿಂದಿ ಭಾಷೆಯನ್ನು ಎಲ್ಲಾ ರಾಷ್ಟ್ರೀಯತೆಗಳ ಮೇಲೂ ಹೇರುವ ಪ್ರತ್ಯಕ್ಷ ಹಾಗೂ ಪರೋಕ್ಷ ನಡಾವಳಿಯನ್ನು ಹೊಂದಿದೆ. ಅದರ ಹಿಂದೆ ಒಂದೇ ದೇಶ, ಒಂದೇ ಭಾಷೆ, ಒಂದೇ ಧರ್ಮ ಎನ್ನುವ ಪ್ರತಿಪಾದನೆ ಕೂಡ ಇದೆ. ಹಾಗಂತ ಅದು ಕೇವಲ ಸಂಘ ಪರಿವಾರದ ಹುನ್ನಾರ ಮಾತ್ರವಲ್ಲ. ಅದರ ಹಿಂದೆ ಹಿಂದಿ ಪ್ರದೇಶದ ಭಾರೀ ಕಾರ್ಪೊರೇಟ್‌ಗಳ ಮಾರುಕಟ್ಟೆ ಹಿತಾಸಕ್ತಿಯೇ ಪ್ರಧಾನವಾಗಿ ಇರುತ್ತದೆ. ಟಾಟಾ, ಬಿರ್ಲಾ, ಅಂಬಾನಿ, ಅದಾನಿ, ಜಿಂದಾಲ್, ಬಜಾಜ್ ಹೀಗೆ ಭಾರೀ ಕಾರ್ಪೊರೇಟ್‌ಗಳಲ್ಲಿ ಹೆಚ್ಚಿನವರು ಪಾರ್ಸಿಗಳು, ಗುಜರಾತಿಗಳೇ ಆಗಿದ್ದರೂ ಹಿಂದಿ ಭಾಗದವರೇ ಆಗಿದ್ದಾರೆ. ಅವರಿಗೆ ಹಿಂದಿಯ ಮೇಲಿನ ಪ್ರೇಮದಿಂದ ಅದನ್ನು ಹೇರಲು ಹೊರಟಿಲ್ಲ. ಬದಲಿಗೆ ಆ ಮೂಲಕ ಇಡೀ ಭಾರತದಲ್ಲಿ ತಮ್ಮ ಉದ್ಯಮ ವ್ಯವಹಾರಗಳನ್ನು ನಡೆಸಿಕೊಂಡು ಹೋಗಲು, ಮಾರುಕಟ್ಟೆಯನ್ನು ಸ್ಥಳೀಯ ಜನರ ವಿರೋಧವಿಲ್ಲದೇ ಹಿಡಿದಿಡಲು ಅನುಕೂಲವಾಗುತ್ತದೆ ಎನ್ನುವ ಕುತಂತ್ರವಿದೆ. ವಾಸ್ತವದಲ್ಲಿ ಹಿಂದಿ ಹೇರಿಕೆಯನ್ನು ಹಿಂದಿನ ಎಲ್ಲಾ ಕೇಂದ್ರ ಸರಕಾರಗಳೂ ಅವರವರ ಮಟ್ಟದಲ್ಲಿ ಮಾಡುತ್ತಲೇ ಬಂದಿವೆ.

ಹಿಂದಿ ಕಲಿಸಲೆಂದೇ ಹಿಂದಿ ಭಾಷಾ ಪ್ರಚಾರ ಸಭಾದಂತಹ ಪ್ರತ್ಯೇಕವಾದ ಅಂಗಗಳನ್ನು ಮೊದಲಿನಿಂದಲೂ ನಡೆಸಿಕೊಂಡು ಬರಲಾಗಿದೆ. ಆದರೆ ಹಿಂದಿ ಹಾಗೂ ಸಂಸ್ಕೃತ ಭಾಷೆ ಹೊರತುಪಡಿಸಿದಂತೆ ಇತರ ಭಾಷೆಗಳಿಗೆ ಇಂತಹ ಯಾವುದೇ ಪ್ರತ್ಯೇಕ ಅಂಗಗಳನ್ನು ಇದುವರೆಗಿನ ಕೇಂದ್ರ ಸರಕಾರಗಳು ರಚಿಸಿ ನಡೆಸಿಕೊಂಡು ಬರಲಿಲ್ಲವೆನ್ನುವುದನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬೇಕು. ತ್ರಿಭಾಷ ಸೂತ್ರವೆಂಬ ಕರ್ನಾಟಕ ಸರಕಾರದ ಭಾಷಾ ನೀತಿ ಕೂಡ ಹಿಂದಿ ಹೇರಿಕೆಯ ಭಾಗವೇ ಆಗಿದೆ ಎನ್ನುವುದನ್ನು ಮರೆಯಬಾರದು. ಭಾರತ ಹಲವು ರಾಜ್ಯಗಳನ್ನೊಳಗೊಂಡ ಒಕ್ಕೂಟ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ, ವಿವಿಧತೆಯಲ್ಲಿ ಏಕತೆಯ ಸೂತ್ರ ಅಳವಡಿಸಿಕೊಂಡಿದೆ ಎಂದೆಲ್ಲಾ ಹೇಳಿಕೊಂಡು ಬರಲಾಗುತ್ತಿದ್ದರೂ; ವಾಸ್ತವದಲ್ಲಿ ಕೇಂದ್ರತ್ವವನ್ನೇ ಹೇರಿಕೊಂಡು ಬರಲಾಗಿದೆ. ರಾಜ್ಯಗಳ ಒಳವ್ಯವಹಾರಗಳಲ್ಲಿ ಕೇಂದ್ರ ಸರಕಾರಗಳು ನಿರಂತರವಾಗಿ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿ ಹಸ್ತಕ್ಷೇಪಗಳನ್ನು ಮಾಡಿಕೊಂಡು ಬಂದಿವೆ. ರಾಜ್ಯಗಳು ಮತ್ತವುಗಳ ಭಾಷೆ, ಸಂಸ್ಕೃತಿಗಳ ವಿಚಾರದಲ್ಲಿ ತಾರತಮ್ಯ, ಕಡೆಗಣನೆ, ಹೇರಿಕೆಗಳನ್ನೇ ಮಾಡಿಕೊಂಡು ಬರಲಾಗಿದೆ. ಈಗಂತೂ ರಾಜ್ಯಗಳ ಸ್ಥಾನಮಾನಗಳು ಮತ್ತಷ್ಟು ಕುಸಿದು ಎಲ್ಲವನ್ನೂ ಕೇಂದ್ರವನ್ನು ಅವಲಂಬಿಸಿಯೇ ತೀರ್ಮಾನಿಸಬೇಕಾದ ಸ್ಥಿತಿಗೆ ತಲುಪಿದೆ. ಜಿಎಸ್‌ಟಿ, ಆಧಾರ್ ಹೇರಿಕೆಗಳಿಂದಾಗಿ ರಾಜ್ಯಗಳಿಗೆ ಹಿಂದೆ ಇದ್ದ ತಮ್ಮ ಸಂಪನ್ಮೂಲಗಳ ಮೇಲಿನ ಹಿಡಿತ ಕೂಡ ತಪ್ಪಿಕೇಂದ್ರವನ್ನೇ ಆಶ್ರಯಿಸಬೇಕಾಗಿ ಬಂದಿದೆ. ಜೊತೆಗೆ ನೀಟ್‌ನಂತಹ ಅಖಿಲ ಭಾರತ ಮಟ್ಟದ ಶೈಕ್ಷಣಿಕ ಪರೀಕ್ಷೆಗಳ ಹೇರಿಕೆಗಳು ಸೇರಿವೆ. ಅಂದರೆ ಕೇಂದ್ರತ್ವದ ಹೇರಿಕೆ ಈಗ ಬಿರುಸಾಗುತ್ತಿದೆ. ಅದು ರಾಜಕೀಯ ಹಾಗೂ ಸಾಮಾಜಿಕವಾಗಿ ಜನಸಾಮಾನ್ಯರ ಮೇಲೆ ಹತ್ತು ಹಲವು ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತಾ ಬಂದಿದೆ. ಪ್ರಾದೇಶಿಕ ಅಸಮಾನತೆಗಳ ಮಟ್ಟ ಹೆಚ್ಚಾಗುತ್ತಾ ಇಂದು ಪ್ರತ್ಯೇಕತಾ ಮನೋಭಾವಗಳನ್ನು ಮತ್ತೂ ತೀವ್ರಗೊಳಿಸುತ್ತಿದೆ. ಅಸಮಾನತೆಗಳನ್ನು ಬಗೆಹರಿಸದಿದ್ದಾಗ ಆಗುವ ಸಹಜ ಪರಿಣಾಮಗಳಿವು.

ಮಿತಿಮೀರಿದ ಕೇಂದ್ರೀಕರಣ, ಅಸಹನೀಯವಾಗುತ್ತಿರುವ ಅಸಮಾನತೆ, ಹೆಮ್ಮರವಾಗಿರುವ ಇದುವರೆಗಿನ ದಾಖಲೆ ಪ್ರಮಾಣದ ನಿರುದ್ಯೋಗ ಸಮಸ್ಯೆ, ರೈತರನ್ನು ಜೀವಂತ ಹೆಣಗಳನ್ನಾಗಿಸುತ್ತಿರುವ ಕೃಷಿ ಬಿಕ್ಕಟ್ಟು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಹಾಗೂ ವ್ಯವಹಾರಗಳ ಅವಕಾಶಗಳನ್ನು ಇಲ್ಲವಾಗಿಸುತ್ತಿರುವ ಭಾರೀ ಕಾರ್ಪೊರೇಟ್‌ಗಳ ಹುನ್ನಾರ ಇತ್ಯಾದಿಗಳಿಂದಾಗಿ ಜನಸಾಮಾನ್ಯರ ಜೀವನ ಮಟ್ಟ ತೀವ್ರ ಕುಸಿತಕ್ಕೊಳಗಾಗಿದೆ. ಹಲವು ವಿಚಾರಗಳಲ್ಲಿ ಹಿಂದುಳಿದ ಆಫ್ರಿಕಾ ರಾಷ್ಟ್ರಗಳಿಗಿಂತಲೂ ಭಾರತ ಹಿಂದುಳಿಸಲ್ಪಟ್ಟಿದೆ. ಜಾಗತಿಕ ಭಾರೀ ಕಾರ್ಪೊರೇಟ್‌ಗಳ ಮುಖ್ಯ ಗ್ರಾಹಕ ಮಾರುಕಟ್ಟೆಯೆಂದೇ ಭಾರತವನ್ನು ಪರಿಗಣಿಸಲಾಗಿದೆ. ಉತ್ಪಾದನಾ ಮಾರುಕಟ್ಟೆಯಾಗಿ ಅಲ್ಲ. ಅದನ್ನೇ ಅಭಿವೃದ್ಧಿಯೆಂಬಂತೆ ಬಿಂಬಿಸಲಾಗುತ್ತಿದೆ. ಅದೇ ವೇಳೆಯಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನದ ಬಹುತೇಕ ಹಿಡಿತ ಕೆಲವೇ ಕಾರ್ಪೊರೇಟ್ ವ್ಯಕ್ತಿಗಳ ಕೈಯಲ್ಲಿ ಸೇರಿದೆ. ಅವರ ಈಗಿನ ಅಗತ್ಯಕ್ಕೆ ತಕ್ಕಂತೆ ದೇಶದ ಸಂವಿಧಾನ ಹಾಗೂ ಆಡಳಿತಾಂಗಗಳ ಬದಲಾವಣೆಯ ಪ್ರಕ್ರಿಯೆ ಬಿರುಸಾಗಿದೆ. ನ್ಯಾಯಾಂಗವೂ ಹಿಂದಿನ ಸ್ವಾಯತ್ತತೆಯನ್ನು ಕಳೆದುಕೊಂಡು ಆಳುವ ಶಕ್ತಿಗಳ ಮರ್ಜಿಗೆ ತಕ್ಕಂತೆ ಕಾರ್ಯಾಚರಿಸಬೇಕಾದ ಪರಿಸ್ಥಿತಿಗೆ ಒಳಗಾಗಿದೆ ಎನ್ನುವುದನ್ನು ನ್ಯಾಯಾಂಗದ ಅತ್ಯುನ್ನತ ಮೂಲಗಳೇ ಹೇಳುತ್ತಿವೆ. ಅಂದರೆ ಸಂಪೂರ್ಣ ನಿರಂಕುಶ ಫ್ಯಾಶಿಸ್ಟ್ ವ್ಯವಸ್ಥೆಯೊಂದನ್ನು ಯಾವ ರೂಪದಲ್ಲಾದರೂ ಹೇರಲು ಆಳುವ ಶಕ್ತಿಗಳು ಹೊರಟಿವೆ ಎನ್ನುವುದೇ ಇದರ ಹಿಂದಿನ ಮುಖ್ಯ ಸಾರ. ಅದು ಸಂವಿಧಾನ ಇಲ್ಲವೇ ಚುನಾಯಿತ ಹೊರರೂಪಗಳಲ್ಲಿ ಕೂಡ ಆಗಬಹುದು.

ಅಂದರೆ ಇದುವರೆಗೂ ಇದ್ದ ಮೇಲ್ಮಟ್ಟದ ಪ್ರಜಾತಾಂತ್ರಿಕ ಸಂಸ್ಥೆಗಳು ಈಗ ಕಾರ್ಯಾಚರಿಸಲಾಗದಂತಹ ಸ್ಥಿತಿಗೆ ಬಂದು ನಿಂತಿವೆ. ಯಥಾಸ್ಥಿತಿವಾದಿ ರಾಜಕೀಯ ಪಕ್ಷಗಳು ಇದುವರೆಗೂ ಮಾಡಿಕೊಂಡು ಬಂದ ರಾಜಕೀಯ ಚಟುವಟಿಕೆಗಳನ್ನೂ ಕೂಡ ನಡೆಸಲಾಗದ ಪರಿಸ್ಥಿತಿ ತಲುಪಿ ಬಹಳ ಕಾಲವಾಗಿದೆ. ಅದಕ್ಕೆ ಅವುಗಳದೇ ಆದ ಮಿತಿಗಳು ಹಾಗೂ ಈಗಿನ ಬಿಕ್ಕಟ್ಟಿನ ಸಂದರ್ಭ ಹೇರುತ್ತಿರುವ ಒತ್ತಡಗಳು ಪ್ರಧಾನ ಕಾರಣವಾಗಿವೆ. ಇಂತಹ ವಿದ್ಯಮಾನಗಳು ಜಗತ್ತಿನ ಹಲವೆಡೆಗಳಲ್ಲಿ ನಡೆಯುತ್ತಿವೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು.

ಇಂತಹ ಸಂದರ್ಭದಲ್ಲಿ ಭಾರತದ ಕಾಂಗ್ರೆಸ್, ಜನತಾ ದಳ, ತೃಣಮೂಲ ಕಾಂಗ್ರೆಸ್, ಬಿಎಸ್ಪಿ, ಎಸ್ಪಿಯಂತಹ ಚುನಾವಣಾ ರಾಜಕೀಯ ಪಕ್ಷಗಳ ಮೂಲಕ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ವ್ಯವಸ್ಥೆಯ ಹೇರಿಕೆಯನ್ನು ತಡೆಯುವುದಾಗಲೀ, ಬದಲಿ ಪರ್ಯಾಯ ರೂಪಿಸುವುದಾಗಲೀ ಸಾಧ್ಯವಾಗದ ಮಾತು. ಯಾಕೆಂದರೆ ಇವುಗಳೂ ಕೂಡ ಅಂತಹ ವ್ಯವಸ್ಥೆಯ ಭಾಗವಾಗಿಯೇ ಇರುತ್ತವೆ. ಈ ವಾಸ್ತವವನ್ನು ಗ್ರಹಿಸದೇ ಹೋದಾಗ ಭ್ರಮೆಗಳಿಗೂ ಭ್ರಮನಿರಸನಗಳಿಗೂ ಒಳಗಾಗಬೇಕಾದ ಪರಿಸ್ಥಿತಿ ಬರುತ್ತದೆ.

ಮೋದಿಯ ಬಿಜೆಪಿ ಎರಡನೇ ಅವಧಿಗೂ ಭಾರೀ ಬಹುಮತದಿಂದ ಅಧಿಕಾರಕ್ಕೇರುತ್ತದೆ ಎನ್ನುವುದನ್ನು ಬಹಳಷ್ಟು ಜನಪರ ಹಾಗೂ ಸಮಾಜಮುಖಿ ವ್ಯಕ್ತಿ ಸಂಘಟನೆಗಳು ಎಣಿಸಿಯೇ ಇರಲಿಲ್ಲ. ಅದನ್ನು ಅವರಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಬಹುತೇಕವಾಗಿ ಅವರೆಲ್ಲರೂ ಕಾಂಗ್ರೆಸ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರವೊಂದು ಮುಂದಿನ ಐದು ವರ್ಷಗಳವರೆಗೆ ಅಧಿಕಾರದಲ್ಲಿರುತ್ತದೆ ಎಂದೇ ಬಲವಾಗಿ ನಂಬಿದ್ದರು. ಆದರೆ ಭಾರತದ ಚುನಾವಣಾ ವ್ಯವಸ್ಥೆ, ರಾಜಕೀಯ ಪಕ್ಷಗಳು ಹಾಗೂ ಈಗಿನ ಸಂದರ್ಭವನ್ನು ಸರಿಯಾಗಿ ಗ್ರಹಿಸಲಾಗದೆ ಹೋಗಿದ್ದರು.
 
ಬಿಜೆಪಿಯೇತರ ರಾಜಕೀಯ ಪಕ್ಷಗಳು ಎಷ್ಟು ಬಲಹೀನವಾಗಿವೆ ಎಂದರೆ, ಈ ಬಾರಿ ಇವಿಎಂ ಹ್ಯಾಕಿಂಗ್, ಮತದಾರರ ಹೆಸರುಗಳ ನಾಪತ್ತೆ, ಸುಳ್ಳು ಮತದಾನಗಳು ಹತ್ತಾರು ಲಕ್ಷಗಳ ಸಂಖ್ಯೆಗಳಲ್ಲಿ ಆಗಿವೆ ಎಂಬ ಹಲವು ನಂಬಲರ್ಹ ವರದಿಗಳು ಬರುತ್ತಿದ್ದರೂ; ಅದರ ವಿರುದ್ಧ ಬಲವಾಗಿ ದನಿಯೆತ್ತಿ ಮಾತನಾಡಲಾಗದಷ್ಟು ಬಲಹೀನವಾಗಿವೆ. ಈ ಎಲ್ಲಾ ಪ್ರಮುಖ ವಾಸ್ತವಗಳನ್ನು ಅರ್ಥಮಾಡಿಕೊಳ್ಳಲಾಗದೇ ಮೋದಿಯ ಗೆಲುವಿನಿಂದ ದೊಡ್ಡ ಸಂಖ್ಯೆಯ ಸಮಾಜಮುಖಿ ಮನಸ್ಸುಗಳು ಭಾರೀ ಹತಾಶೆಗೆ ಜಾರಿಹೋಗಿವೆ. ಅದಕ್ಕೆ ಕೆಲವು ಸಂಘಟನೆಗಳ ಹಾಗೂ ವ್ಯಕ್ತಿಗಳ ಅವಕಾಶವಾದಿ ರಾಜಕೀಯ ನಿಲುವುಗಳು ಕೂಡ ಕಾರಣವಾಗಿವೆ. ಹಲವರು ಕಾಂಗ್ರೆಸ್ ಪಕ್ಷಕ್ಕೆ ಹಿಡಿಶಾಪ ಹಾಕುವ, ಅದು ಸಕ್ರಿಯ ಪಾತ್ರ ವಹಿಸಲಿಲ್ಲ, ಜನರನ್ನು ಸಂಘಟಿಸಲಿಲ್ಲ ಎಂದೆಲ್ಲಾ ವಿಮರ್ಶಿಸುವ ಕೆಲಸಗಳನ್ನೂ ಮಾಡುತ್ತಿದ್ದಾರೆ. ತಮ್ಮ ಬರಹ ಕವಿತೆಗಳಲ್ಲಿ ತಮ್ಮಲ್ಲಿ ಮೂಡಿರುವ ಹತಾಶೆಗಳನ್ನು ಹೊರಹಾಕುತ್ತಾ ಎಲ್ಲಾ ಮುಗಿದೇ ಹೋಯಿತು ಎನ್ನುವ ಮಟ್ಟದಲ್ಲಿ ಕೈ ಚೆಲ್ಲಿ ಕುಳಿತಿದ್ದಾರೆ. ಇನ್ನು ಕೆಲವರು ಎಲ್ಲಾ ಕಮ್ಯುನಿಸ್ಟ್ ಪಕ್ಷಗಳು ಒಂದಾದರೆ ದೇಶಕ್ಕೆ ಒಳಿತಾಗುತ್ತದೆ ಎನ್ನುವ ಕಲ್ಪನೆಗಳನ್ನು ಹೊರಹಾಕುತ್ತಿದ್ದಾರೆ. ಮೂರು ದಶಕಗಳ ಕಾಲ ಸಿಪಿಎಂ ಆಳ್ವಿಕೆಯಿದ್ದ ಪಶ್ಚಿಮ ಬಂಗಾಲದಲ್ಲಿ ಸಿಪಿಎಂನ ಶಕ್ತಿಗಳೇ ಈ ಬಾರಿ ಬಿಜೆಪಿಯಂತಹ ಪಕ್ಷಕ್ಕೆ ಮತ ನೀಡಿ ಶಕ್ತಿ ತುಂಬಿರುವುದು ಎನ್ನುವ ಸತ್ಯವನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ.

ಇಂತಹ ಮನಸ್ಥಿತಿಗಳಿಂದ ಹೊರಬಂದು ಕಣ್ಣೆದುರಿನ ವಾಸ್ತವಗಳನ್ನು ಗ್ರಹಿಸಬೇಕಾಗಿದೆ. ಸಾಮಾಜಿಕ ಹಾಗೂ ರಾಜಕೀಯ ಸ್ಫೂರ್ತಿಯಿಂದ ಜನಸಾಮಾನ್ಯರಿಗೆ ಭಾರತದ ಪ್ರಜಾ ಪ್ರಭುತ್ವ ಹಾಗೂ ಚುನಾವಣೆಗಳ ಹಿಂದಿನ ವಾಸ್ತವಗಳ ಬಗ್ಗೆ ಅರಿವು ಮೂಡಿಸುವ ಕೆಲಸಗಳನ್ನು ಮಾಡುವಲ್ಲಿ ಈಗಲಾದರೂ ಆಸಕ್ತಿ ವಹಿಸಿದರೆ ಆ ಮಟ್ಟಿಗಾದರೂ ಸಮಾಜದಲ್ಲಿ ಜಾಗೃತಿ ಮೂಡಿ ಮುಂದೆ ಬರುವ ಗಂಡಾಂತರಗಳಿಂದ ಬಚಾವಾಗುವ ಪರ್ಯಾಯಗಳತ್ತ ಅವರು ಆಲೋಚಿಸುವಂತಾಗುತ್ತದೆ. ಅಸಂಖ್ಯಾತ ಸಾಮಾಜಿಕ ಕಾರ್ಯಕರ್ತರು ಹಾಕುವ ಅಮೂಲ್ಯ ಶ್ರಮ ವ್ಯರ್ಥವಾಗದೇ ಸದುಪಯೋಗವಾಗುತ್ತದೆ.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News