ಮಳೆಯೇ ಬಾ...

Update: 2019-06-16 07:28 GMT

ಮಳೆಗೆ ಎಂತಹ ಏಕಾಂತ ದುಃಖ ಸುಖ ಕಲ್ಪಿಸುವ ಶಕ್ತಿ ಇದೆ! ಮಳೆ ಬಂದಾಗೆಲ್ಲ ಕಣ್ಣೀರಿನ ಉಗುರುಬೆಪ್ಪಿನ ಶಾಖ ಸುಖ ಆಗುತ್ತದೆಯೇ ನಿಮಗೂ? ಪುಟ್ಟ ದಿನಗಳ ಹಾಳೆಹಾಳೆಗಳನ್ನೇ ಮಡಚಿ ದೋಣಿ ಮಾಡಿ ತೇಲಿಬಿಟ್ಟ ನೆನಪು? ಅವು ಕುಣಿ ಕುಣಿಯುತ್ತ ಕಣ್ಮರೆಯಾಗಿ ಬಿಟ್ಟವು. ಕುಣಿತ. ಹೊಳಪು ನಯ ಕಾಗದದ ಮೇಲೆ ಚೈತನ್ಯನ ಕೃಷ್ಣ ಸ್ಮರಣೆ ಕುಣಿತ . ಚೈತನ್ಯ ಚರಿತಾಮೃತ. ಓದುವಾಗ ಹೊರಗೆ ಹೀಗೇ ಮಳೆ ಸುರಿಯುತ್ತಿತ್ತು. ಆಗ ಸುಮ್ಮನೆ ಓದಿ ಕೊಂಡದರ ಅರ್ಥ ಈಗ! ಶಬ್ದಗಳು ನೆನಪಿಲ್ಲ. ಚೈತನ್ಯ ದೇವನ ಮುಖ ನೆನಪಿಲ್ಲ. ನೆನಪಿರುವುದು ಕುಣಿಯುವ ಪದಗಳು, ಅವನ ಚಂದ ಕಂಬನಿ ಮತ್ತು ಆ ಪುಟಗಳ ನುಣುಪು.

ಮಳೆ ಬರುತ್ತಿದೆ.

ಮಳೆ ಮಳೆ ಮತ್ತು ಮಳೆ.

ಪ್ರಾಸ ಬೆಳೆಯಲು ಬೇಕಷ್ಟು ಎಡೆ ಇದ್ದರೂ ಬೇಕೆಂದೇ ಬೆಳೆಯುವುದಿಲ್ಲ. ಕರಗುತ್ತದೆ. ಮಳೆ ಸುರಿಯುತ್ತಲೇ ಇದೆ.

ನೀವೆಲ್ಲ ಹೇಳುವುದು ನಿಜ. ಮಳೆಗಿಂತ ಚಂದ ಇನ್ನೊಂದಿಲ್ಲ. ಆದರೆ ಇಂಥ ಮಳೆ ಕಂಡಿದ್ದೀರಾ? ಇದು ಅಪೂರ್ವ ಮಳೆ. ನಿನ್ನೆ ಬಂದಿರಲಿಲ್ಲ, ನಾಳೆ ಬರುತ್ತದೆಯೇ ಗೊತ್ತಿಲ್ಲ. ನಾಳೆಯೆಂಬುದು ಇದೆಯೇ ನಿಜಕ್ಕೂ?... ಆ ನಾಳೆಯಲ್ಲಿ ನಾನಿರುತ್ತೇನೆಯೇ?... ಇಲ್ಲದೆಯೂ ಇರಬಹುದು. ಈ ಕ್ಷಣದ್ದಾಗಿರುವುದು ಒಂದೇ. ಪರ್ಜನ್ಯನಾದಾನುಸಂಧಾನ. ಮಳೆಯೇ ನೀ ಯಾವೂರಿಂದ ಬಂದೆ?

ಮಳೆ ಮಾತಾಡುವುದಿಲ್ಲ. ಸುರಿಯುವುದೊಂದೇ. ಮಳೆಯೇ ನೀನೇಕೆ ಮಾತಾಡುವುದಿಲ್ಲ? ಗುಡುಗುತ್ತದೆ ಮಿಂಚುತ್ತದೆ ಧುಮ್ಮಿಕ್ಕುತ್ತದೆ.

ಉತ್ತರವೆಂಬುದು ಯಾವಾಗಲೂ ಮುತ್ತಿನಂತೆ. ತಾಕತ್ತಿದ್ದರೆ ಅಂತರಾಳಕ್ಕಿಳಿಯಬೇಕು. ಮುತ್ತು ಹೆಕ್ಕಿದಂತೆ ಹೆಕ್ಕಿಕೊಳ್ಳಬೇಕು. ಎಲ್ಲದಕ್ಕೂ ಎಲ್ಲೆಲ್ಲೂ ಉತ್ತರ ಸಿಗುವುದೆಂದರೆ ಹಾದಿ ಬೀದಿಗಳಲ್ಲಿಯೂ ಕಲ್ಲು ಮರಳುಗಳಿವೆಯಲ್ಲ!

ಮಳೆ-

ಮಾತಾಡುವುದಿಲ್ಲ. ಹಾಡುತ್ತದೆ. ಹರಡಿಕೊಳ್ಳುತ್ತದೆ. ಒಳಗೊಂಡು ಒದ್ದೆ ಮಾಡುತ್ತದೆ. ಮತ್ತೆ ಎಲ್ಲಿಗೋ ಹೋಗಿ ಬಿಡುತ್ತದೆ. ಬಹುಶಃ ಮೋಡ ಕವಿದ ಧರಿತ್ರಿಗಳು ಒಂದಲ್ಲ- ಹಲವು. ಮತ್ತೊಮ್ಮೆ ಅದನ್ನು ಕಾಣಬೇಕೆಂದರೆ ಕಾಯಬೇಕು. ಕಾದು ಕಾದು ಕಾಯಬೇಕು. ಕರಿಮೋಡದ ಕೊಡೆಯಡಿ. ದಿನಗಟ್ಟಲೆ.

ಸ್ವಾಧಿಷ್ಠಾನ ಚಕ್ರ. ಸ್ಥಾನ ಮೂಲಾಧಾರ ಮತ್ತು ಮಣಿಪುರ ಚಕ್ರಗಳ ನಡುವೆ. ಅಲ್ಲಿನ ತತ್ವ ‘ಅಪ್’-ಎಂದರೆ ಜಲ. ಸಿಂಧೂರ ವರ್ಣದ ಆರು ಎಸಳುಗಳು. ಬೀಜಾಕ್ಷರಗಳು. ಅಲ್ಲಿನ ದೇವತೆ ವರುಣ. ಪ್ರತಿನಿಧಿಸುವ ಲೋಕ ಭುವರ್ಲೋಕ. ಭೌತ ಶರೀರದಲ್ಲಿ ಹೇಳುವುದಾದರೆ ಅದರ ಸ್ಥಾನ ಜನನೇಂದ್ರಿಯ ಮೂಲದಲ್ಲಿ ಅರ್ಥವಾಗುವುದಿಲ್ಲ. ಹತ್ತಿರವಾಗುವುದು ಅರ್ಥಮೀರಿದ ಮಳೆಯೊಂದೇ.

ಮಳೆಗೆ ಎಂತಹ ಏಕಾಂತ ದುಃಖ ಸುಖ ಕಲ್ಪಿಸುವ ಶಕ್ತಿ ಇದೆ! ಮಳೆ ಬಂದಾಗೆಲ್ಲ ಕಣ್ಣೀರಿನ ಉಗುರುಬೆಪ್ಪಿನ ಶಾಖ ಸುಖ ಆಗುತ್ತದೆಯೇ ನಿಮಗೂ? ಪುಟ್ಟ ದಿನಗಳ ಹಾಳೆಹಾಳೆಗಳನ್ನೇ ಮಡಚಿ ದೋಣಿ ಮಾಡಿ ತೇಲಿಬಿಟ್ಟ ನೆನಪು? ಅವು ಕುಣಿ ಕುಣಿಯುತ್ತ ಕಣ್ಮರೆಯಾಗಿ ಬಿಟ್ಟವು.

ಕುಣಿತ... ಹೊಳಪು ನಯ ಕಾಗದದ ಮೇಲೆ ಚೈತನ್ಯನ ಕೃಷ್ಣ ಸ್ಮರಣೆ ಕುಣಿತ . ಚೈತನ್ಯ ಚರಿತಾಮೃತ. ಓದುವಾಗ ಹೊರಗೆ ಹೀಗೇ ಮಳೆ ಸುರಿಯುತ್ತಿತ್ತು. ಆಗ ಸುಮ್ಮನೆ ಓದಿ ಕೊಂಡದರ ಅರ್ಥ ಈಗ! ಶಬ್ದಗಳು ನೆನಪಿಲ್ಲ. ಚೈತನ್ಯ ದೇವನ ಮುಖ ನೆನಪಿಲ್ಲ. ನೆನಪಿರುವುದು ಕುಣಿಯುವ ಪದಗಳು, ಅವನ ಚಂದ ಕಂಬನಿ ಮತ್ತು ಆ ಪುಟಗಳ ನುಣುಪು.

‘‘ಸ್ಮತಿ ಪರಿಶುದ್ಧೌಸ್ವರೂಪ ಶೂನ್ಯೇವ ಅರ್ಥ ಮಾತ್ರ ನಿರ್ಭಾಸಾ ನಿರ್ವಿತರ್ಕಾ...’’ ಎಂದ ಪತಂಜಲಿ. ಎರಡು ಸಾವಿರ ವರ್ಷಗಳ ಹಿಂದೆಯೇ. ಹೇಳಿದ್ದು ಮಾತ್ರ ನಿರ್ವಿತರ್ಕ ಸಮಾಧಿಯ ಕುರಿತು...

ರಾತ್ರಿಯಿಡೀ ಸುರಿದು ಬಿಟ್ಟುಹೋದ ಮಳೆಯ ಬೆಳಗು.

ಮತ್ತು ಬರಿಸುವ ಮಳೆಗತ್ತಲಲ್ಲಿ ಬೆಚ್ಚಗೆ ಎಚ್ಚರಾಗುವ ಬದಲು ಜನ ಹೊದಿಕೆಯೊಳಗಿನ ಕತ್ತಲಾಗಿದ್ದಾರೆ.

ಕಿಟಕಿಯಾಚೆಗೆ ಕಾಣಿಸುವ ಬಟ್ಟೆ ಒಣ ಹಾಕುವ ತಂತಿಯ ಮೇಲೆ ಮಳೆ ಹನಿಗಳು ಪಿಳಪಿಳನೆ ಎಲ್ಲಿಗೋ ಸಾಲುಗಟ್ಟಿ ಧಾವಿಸುತ್ತಿವೆ. ಅದು ವರ್ಷಾಕಾಲದ ಸಂಭ್ರಮದ ಚಿತ್ತಾರ. ಎಲ್ಲಿಗೆಂತ ಕೇಳಿದರೆ ನಕ್ಕಾವು. ಸಂಭ್ರಮಕ್ಕೆ ದಿಕ್ಕಿದೆಯೆಂದು ಹೇಳಿದವರು ಯಾರಾದರೂ ಇದ್ದಾರೆಯೇ ಇವತ್ತಿನವರೆಗೆ?

ಶ್ರವಣ ತಂತುವನ್ನು ಸ್ಪುಟಗೊಳಿಸಿಕೊಳ್ಳಿ. ನಿಶ್ಯಬ್ದ ಆಲಿಸಿರಿ. ಕೇಳಿಸಿತೇ?...ಸಮುದ್ರ ಮೊರೆತ.. ದೂರದಿಂದ?

ಗಾಳಿ ಮೊರೆತ ಮೋಡಗಳು ಮಳೆ ಬಿಸಿಲು ಸೆಖೆ -ಆದರೆ ಸೆಖೆಯಾದಾಗಲೆಲ್ಲ ಮಳೆ ಬರುವುದಿಲ್ಲ.

ಎಲ್ಲ ಮೋಡಗಳೂ ಶ್ಯಾಮಕಾಯಗಳಲ್ಲ.

ಎಲ್ಲ ಮಳೆಯಂತ್ಯಕ್ಕೂ ಸಮುದ್ರ ಮೊರೆಯುವುದಿಲ್ಲ.

ನೆರೆ, ಗುಡಿಸಲು, ಆಕ್ರಂದನ, ವೌನ, ಸ್ಮಶಾನ... ಮಳೆಯೇ, ನಿಲ್ಲು ನಿಲ್ಲು.

ಬಿರಿದ ನೆಲ, ಹಸಿರೊಣಗಿದ ಮರಗಿಡಗಳು, ಉಸಿರಿಲ್ಲದ ಊರುಗಳು ... ಮಳೆ ಮುಂಜಾವಿನ ಬನಿಯೆದುರು ನಿಂತು ನೇರ ಪ್ರಶ್ನಿಸುತ್ತಿವೆ. ಮಳೆಯೇ ಹೋಗು ಆ ಕಡೆ. ಉಸಿರು ಒಣಗಿದಲ್ಲಿ

ಮತ್ತೆ ಬಾ. ಕಾಯುತ್ತಿರುತ್ತೇನೆ. ಆದರೆ ಮಳೆ ಕರೆದರೆ ಬರುವುದಿಲ್ಲ, ನಿಲ್ಲೆಂದರೆ ನಿಲ್ಲುವುದಿಲ್ಲ. ಹೋಗೆಂದರೆ ಹೋಗುವುದೂ ಇಲ್ಲ!

ಬರುತ್ತದೆ, ನಿಲ್ಲುತ್ತದೆ, ಹೋಗುತ್ತದೆ, ಬರುತ್ತದೆ. ಅದು ಜೀವತಂತ್ರ. ಸ್ವತಂತ್ರ.

ದಿನಗಳೆಷ್ಟು ಉರುಳಿದವೋ. ಮಳೆಯಂತೂ ಕೃಶವಾಗಿದೆ. ದೋಣಿ ಬುಡಮೇಲಾಗಿ ವಿಕಾಸಪಥದ ಹಿಮ್ಮುಖ ನಡಿಗೆಯಲ್ಲಿ ಪುನಃ ಪ್ರಕೃತಿ ಸೇರುವ ಹವಣಿಕೆಯಲ್ಲಿದೆ.

ಉಳಿದಿರುವ ಸ್ಮತಿ ಪರಿಶುದ್ಧವಾದ ಸ್ವರೂಪಶೂನ್ಯವಾದ ಅರ್ಥಮಾತ್ರ ಹೊಳೆವ ಒಂದು ಚಿತ್ತಪ್ರತ್ಯಯ ಮಾತ್ರ.

‘ಮಳೆಯೇ ಬಾ’ ಎಂದು ಜಪಿಸುತ್ತ.

ಮಳೆಯೆಂದರೆ

ಮಳೆ ಎಂದರೆ

ಕಣ್ಣೀರ ಸರಳಲ್ಲ ಮಗೂ

ಮರುಳು!

ಮಳೆ ಎಂದರೆ ಥಂಡಿ ಚಳಿಯೇ ಮಗೂ

ತಳಿಕಂಡಿಯಲಿ ನಿಂತು

ಕಾಯುತಿರು.

ಮಳೆಯೆಂದರೆ

ಮಡಲಮರೆ ಬಿಡು

ನೆನೆ.

Writer - ವೈದೇಹಿ

contributor

Editor - ವೈದೇಹಿ

contributor

Similar News