ಬೇಧ-ಭಾವ ಬಿಟ್ಟು ಒಗ್ಗಟ್ಟಿನಿಂದ ಬದುಕುವುದೇ ಜೀವನ: ಡಾ.ನಿರ್ಮಲಾನಂದ ಸ್ವಾಮೀಜಿ
ಬೆಂಗಳೂರು, ಜೂ.16: ತಂದೆ ತಾಯಿಯೇ ನಿಜವಾದ ದೇವರು. ಅವರನ್ನು ಪೋಷಣೆ ಮಾಡಿ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಪ್ರೀತಿಯಿಂದ ಕಾಣುವ ಮೂಲಕ ಭಗವಂತನನ್ನು ಒಲಿಸಿಕೊಳ್ಳಬೇಕು. ಹಾಗೂ ಬೇಧ, ಭಾವ ಬಿಟ್ಟು ಒಗ್ಗಟ್ಟಿನಿಂದ ಬದುಕುವುದನ್ನು ಕಲಿಯಬೇಕೆಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಹೇಳಿದರು.
ರವಿವಾರ ನಾಗರಭಾವಿಯ ಅನ್ನಪೂರ್ಣೇಶ್ವರಿ ದೇವಸ್ಥಾನದ ರಾಜಗೋಪುರ, ಕುಂಭಾಭಿಷೇಕ, ಗರುಡಗಂಭ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು, ನಮಗೆ ದೇಹವೇ ಒಂದು ದೇವಸ್ಥಾನ, ಸ್ಮರಣೆ ಮಾಡಲು ಭಗವಂತನನ್ನು ಒಲಿಸಿಕೊಳ್ಳಬೇಕಾದರೆ ಆರಾಧನೆಯಲ್ಲಿ ಸಂಸ್ಕೃತಿ ಕಾಣಬಹುದು, ಅದುವೇ ದೇವಸ್ಥಾನ ಎಂದು ಹೇಳಿದರು.
ಪಂಚಭೂತಗಳಿಲ್ಲದೆ ಮನುಷ್ಯ, ಪ್ರಾಣಿ, ಪಕ್ಷಿ ಬದುಕಲು ಸಾಧ್ಯವೇ ಇಲ್ಲ. ಗಾಳಿ, ಬೆಳಕು, ನೀರು ಆಹಾರವಿಲ್ಲದಿದ್ದರೆ ಮನುಷ್ಯ ಜೀವವೇ ಉಳಿಯುವುದಿಲ್ಲ. ಆದರೂ ಸಹ ದುರಾಸೆ, ದುರಾಭಿಮಾನ, ಸೇಡು ಕಿಚ್ಚು ಹೆಚ್ಚಾಗಿ ಮತ್ತೊಬ್ಬರಿಗೆ ಕೇಡು ಬಯಸುವ ಪ್ರವೃತ್ತಿ ಬಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡು ನೆಮ್ಮದಿಯ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ನಿತ್ಯ ನಿರಂತರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡು ಭಗವಂತನನ್ನು ಒಲಿಸಿಕೊಂಡಾಗ ಮಾತ್ರ ಎಲ್ಲರಲ್ಲಿಯೂ ಶಾಂತಿ-ವಿಶ್ವಾಸ ನೆಮ್ಮದಿ ಕಾಣಬಹುದು ಎಂದು ಶಾಸಕ ಮುನಿರತ್ನ ತಿಳಿಸಿದರು.
ಸ್ಥಳೀಯ ಪಾಲಿಕೆ ಸದಸ್ಯರಾದ ಜೆ.ಡಿ.ತೇಜಸ್ವಿನಿ ಸೀತಾರಾಮಯ್ಯ, ಜಿ.ಮೋಹನ್ಕುಮಾರ್, ಉದ್ಯಮಿ ಎಂ.ಜಿ.ರಾಜೇಶ್ಗೂಳಿಗೌಡ, ವಾರ್ಡ್ ಅಧ್ಯಕ್ಷ ಎಂ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡ, ಕೆ.ಎಸ್.ಯೋಗೇಶ್, ರಾಂಪುರ ನಾಗೇಶ್, ಬಿ.ಎಸ್.ಪುಟ್ಟರಾಜು ಹಾಜರಿದ್ದರು. ರಾಜಾಜಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೆ.ಎಲ್.ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು.