ಪರಿಶುದ್ಧ ರಾಜಕಾರಣದ ಏಣಿಯನ್ನು ಏರುವೆಡೆಗೆ...

Update: 2019-06-17 18:29 GMT

ಹಿಂದೊಮ್ಮೆ ರಾಜಕೀಯದ ಸ್ವರೂಪ ಮತ್ತು ರಚನೆಗಳನ್ನು ಸತತವಾಗಿ ರೂಪಿಸುತ್ತಿದ್ದ ದುಡಿಯುವ ವರ್ಗಗಳ ನಿರಂತರ ಹೋರಾಟಗಳು ಈಗ ಗಣನೀಯವಾಗಿ ಕಡಿಮೆಯಾಗಿವೆ ಅಥವಾ ಸಂಪೂರ್ಣವಾಗಿ ಆ ಜಾಗವನ್ನು ಚುನಾವಣಾ ರಾಜಕೀಯವೇ ಆಕ್ರಮಿಸಿಕೊಂಡಿದೆ. ಪ್ರಾಯಶಃ ಚುನಾವಣಾ ರಾಜಕಾರಣವೂ ಸಹ ಒಂದು ಹೊಸ ತಿರುವನ್ನು ತೆಗೆದುಕೊಂಡಿದೆ. ಹೊಸ ಸಂದರ್ಭದಲ್ಲಿ ದುರ್ಬಲ ವರ್ಗಗಳ ನಾಯಕರೂ ಸಹ ತತ್ವ ಅಥವಾ ಆದರ್ಶಗಳಿಗೆ ಬದ್ಧರಾಗುವುದಕ್ಕಿಂತ ಹೆಚ್ಚಾಗಿ ಅಧಿಕಾರ ರಚನೆಯ ಭಾಗವಾಗುವುದನ್ನು ಬಯಸುತ್ತಿದ್ದಾರೆ ಮತ್ತು ಅದು ಸಾಧ್ಯ ಎಂದೂ ಸಹ ಹಲವರಿಗೆ ಅನಿಸುತ್ತಿದೆ. ಹೀಗಾಗಿ ‘ಸಾಧ್ಯತೆಗಳ ರಾಜಕಾರಣ’ ಎಂಬುದು ಇಂದಿನ ರಾಜಕೀಯ ವಾಸ್ತವಗಳನ್ನು ಅಭಿವ್ಯಕ್ತಗೊಳಿಸುವ ಪ್ರಧಾನ ಅಭಿಪ್ರಾಯವಾಗಿಬಿಟ್ಟಿದೆ.

ರಾಜಕೀಯವು ಇಂದು ತೆಗೆದುಕೊಂಡಿರುವ ಈ ತಿರುವೇ ಅಂತಹ ರಾಜಕೀಯವನ್ನು ವಿಮರ್ಶಾತ್ಮಕವಾಗಿ ಟೀಕಿಸುತ್ತಾ ರಾಜಕೀಯದ ಬಗೆಗಿನ ಪರ್ಯಾಯ ಪರಿಕಲ್ಪನೆಯನ್ನು ಮುಂದಿಡುವುದನ್ನು ಅನಿವಾರ್ಯಗೊಳಿಸಿದೆ. ಅಂತಹ ಪರ್ಯಾಯ ರಾಜಕೀಯವೊಂದು ಕನಿಷ್ಠ ನೈತಿಕ ಮಾನದಂಡಗಳನ್ನು ಆಧರಿಸಿ ಜೀವನದ ಪರಿಸ್ಥಿತಿಗಳನ್ನು ಸಾಕಾರ ಮಾಡಿಕೊಳ್ಳುವ ಸಂಗತಿಯಾಗಿ ವ್ಯಾಖ್ಯಾನಗೊಳ್ಳಬೇಕು. ಆ ಮಾನದಂಡಗಳು ವ್ಯಕ್ತಿಯನ್ನು ಚಿಂತನಾಶೀಲ ವ್ಯಕ್ತಿಯನ್ನಾಗಿ ಗೌರವಿಸುವಂತಿರಬೇಕು ಮತ್ತು ಕೇವಲ ಜೀವದೊಡನೆ ಬದುಕುವುದನ್ನು ಮಾತ್ರವಲ್ಲದೆ ಘನತೆಯಿಂದ ಬದುಕುವುದನ್ನು ಖಾತರಿಗೊಳಿಸುವಂತಿರಬೇಕು. ಹೀಗಾಗಿ ಇಂದು ಚುನಾವಣಾ ರಾಜಕಾರಣದಲ್ಲಿ ಕಾಣುತ್ತಿರುವ ವಾಸ್ತವನೆಲೆಯ ತಿರುವುಗಳು ಒಂದು ಕನಿಷ್ಠ ನೈತಿಕತೆಯ ಜೀವನವುಳ್ಳ ಸಮಾಜದ ಅಗತ್ಯವನ್ನು ಗಣನೆಗೆ ತೆಗೆದುಕೊಂಡಿದೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ಕೇಳಬೇಕಾಗುತ್ತದೆ.

ಈ ಹೊಸ ತಿರುವಿನ ವಾಸ್ತವಿಕ ಅಂಶಗಳನ್ನು ವಿವರಿಸುವ ಅಂಶಗಳನ್ನು ಪರಿಶೀಲಿಸಿ ಒಂದು ಕನಿಷ್ಠ ನೈತಿಕತೆಯನ್ನು ಒದಗಿಸುವಲ್ಲಿ ಅದಕ್ಕಿರುವ ಗಂಭೀರ ಕೊರತೆಗಳನ್ನು ಬಯಲುಗೊಳಿಸುವ ಅಗತ್ಯವಿದೆ. ಆ ವಿಮರ್ಶೆಯು ಒಂದು ಪರಿಶುದ್ಧ ಅಥವಾ ಆದರ್ಶಮಯ ರಾಜಕಾರಣದಿಂದ ಈ ವಾಸ್ತವಿಕ ರಾಜಕಾರಣವು ದೂರತಳ್ಳಿರುವುದೇನನ್ನು ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಒಂದು ಪರಿಶುದ್ಧ ಅಥವಾ ಆದರ್ಶಮಯ ಪರ್ಯಾಯ ರಾಜಕೀಯದ ಪರಿಕಲ್ಪನೆಗಳು ಲೆಕ್ಕಾಚಾರ ಮತ್ತು ವಿಶ್ವಾಸದ ದುರ್ಬಳಕೆಗಳಿಂದ ಪ್ರೇರಿತವಾಗಿರುವ ರಾಜಕೀಯವನ್ನು ಮೀರುವಂತಹ ನೈತಿಕ ಮತ್ತು ಬೌದ್ಧಿಕ ದೃಢತೆ ಇರುವ ಪ್ರಕ್ರಿಯೆಗಳನ್ನು ಅಪ್ಪಿಕೊಳ್ಳುವಂತಿರಬೇಕು. ಹೀಗಾಗಿ ಪರಿಶುದ್ಧ ರಾಜಕೀಯವೆಂಬುದು ವಾಸ್ತವವಾದಿ ಸ್ವರೂಪದ ರಾಜಕೀಯದ ವಿಮರ್ಶೆಯೇ ಆಗಿದೆ. ಒಂದು ರಾಜಕೀಯದ ವ್ಯೆಹತಂತ್ರದಲ್ಲಿ ಅತ್ಯಂತ ಪ್ರಮುಖವಾದ ವಿಷಯವೇನೆಂದರೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭೌತಿಕ ಸಂಪತ್ತುಗಳನ್ನು ಸೃಷ್ಟಿಸುವುದು ಮತ್ತು ಅದನ್ನು ವಿಸ್ತರಿಸುತ್ತಾ ಹೋಗುವುದು ಹಾಗೂ ಅದೇ ಸಮಯದಲ್ಲಿ ಅದರ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ತೊರೆದುಕೊಳ್ಳುವುದು ಅಥವಾ ಅದರ ಜೊತೆ ಅನುಸಂಧಾನ ಮಾಡಿಕೊಳ್ಳುವುದೇ ಆಗಿದೆ.

ಅಧಿಕಾರರೂಢ ಪಕ್ಷಕ್ಕೆ ಸ್ಥಾನ-ಸೌಕರ್ಯಗಳ ವಿತರಣೆಯ ಚೌಕಟ್ಟಿನ ಮೇಲೆ ಸಂಪೂರ್ಣ ನಿಯಂತ್ರಣವಿರುತ್ತದೆ. ಆದ್ದರಿಂದಲೇ ಅದು ಅವರಿಗೆ ಸಾಮಾಜಿಕವಾಗಿ ಒಳಗೊಳ್ಳುವಿಕೆಯ ಇಮೇಜನ್ನು ಒದಗಿಸುವ ಆದರೆ ಚುನಾವಣಾ ಲೆಕ್ಕಾಚಾರಗಳಲ್ಲಿ ವಾಸ್ತವವಾಗಿ ಒಂದು ಹೊರೆಯೇ ಆಗಿರುವ ನಾಯಕರನ್ನು ಉದಾರವಾಗಿ ಒಳಗೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಆ ರೀತಿಯ ಅಧಿಕಾರದಾಹಿ ಪಕ್ಷಗಳು ಬಡಜನರ ಪಕ್ಷಗಳನ್ನು ಸದಾ ಒಂದು ಹೊರೆಯೆಂದೇ ಭಾವಿಸುತ್ತವೆ. ಒಂದು ಆದರ್ಶ ಸನ್ನಿವೇಶದಲ್ಲಿ ವಿಮೋಚನಾವಾದಿ ಆಶಯಗಳ ಬಗ್ಗೆ ಬದ್ಧತೆ ಇರುವವರು ಮಾತ್ರ ಬಡಜನರ ಪಕ್ಷಗಳಿಗೆ ಸೇರಿಕೊಳ್ಳುತ್ತಾರೆ.

ಉದಾಹರಣೆಗೆ 1936ರಲ್ಲಿ ಅಂಬೇಡ್ಕರ್ ಅವರು ಸ್ಥಾಪಿಸಿದ್ದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಐಎಲ್‌ಪಿ)ಗೇ ಸೇರಿಕೊಂಡಿದ್ದ ಹಲವಾರು ದಲಿತೇತರ ನಾಯಕರಲ್ಲಿ ಅಂತಹ ಬದ್ಧತೆಯು ಎದ್ದುಕಾಣುತ್ತಿತ್ತು. ಹೀಗಾಗಿ ಇಂದು ಇಂದಿನ ದಲಿತ ಪಕ್ಷಗಳು ಐಎಲ್‌ಪಿಯಲ್ಲಿದ್ದ ಸಾರವನ್ನು ಹೊಂದಿವೆಯೇ? ಎಂಬ ಪ್ರಶ್ನೆಯನ್ನು ಖಂಡಿತಾ ಕೇಳಲೇಬೇಕಾಗುತ್ತದೆ. ಪ್ರಬಲವಾದ ಪಕ್ಷಗಳು ಇಂತಹ ಒಳವಲಸೆಯನ್ನು ಸ್ವಾಗತಿಸುತ್ತವೆ. ಬೇರೆ ಪಕ್ಷಗಳಿಂದ ನಿರ್ಲಕ್ಷಕ್ಕೊಳಗಾಗಿದ್ದೇವೆಂದು ಹೇಳಿಕೊಳ್ಳುವ ನಾಯಕರಿಗೆ ತಮ್ಮ ಪಕ್ಷದಲ್ಲಿ ಅವಕಾಶ ಕೊಡುವುದು ಅವರಿಗೆ ಲಾಭದಾಯಕವಾಗಿರುತ್ತದೆ. ಅಂತಹ ಪಕ್ಷವು ತಾನು ಎಲ್ಲರಿಗೂ ಸಮಾನ ಅವಕಾಶ ಕೊಡುವ ಪಕ್ಷ ಎಂದು ಕೊಚ್ಚಿಕೊಳ್ಳುವುದಕ್ಕೂ ಅನುವು ಮಾಡಿಕೊಡುತ್ತದೆ. ಆದರೆ ಅಂತಹ ಪಕ್ಷವು ಒಂದು ಪರಿಶುದ್ಧ ಸ್ವರೂಪದ ರಾಜಕೀಯವನ್ನು ಅನುಸರಿಸುತ್ತಿದೆ ಎಂದು ಹೇಳಲು ಸಾಧ್ಯವೇ? ಆಯಾ ನಿರ್ದಿಷ್ಟ ಪ್ರಕರಣಗಳಲ್ಲಿ ಅವು ತೋರಿದ ಸಕಾರಾತ್ಮಕತೆಗಳು ಒಂದು ಪರಿಶುದ್ಧ ರಾಜಕೀಯವೆಂದು ಬಣ್ಣಿಸಲು ಬೇಕಾದ ಪರಿಸ್ಥಿತಿಯನ್ನು ಒದಗಿಸಿದೆಯೆಂದು ಹೇಳಲು ಸಾಧ್ಯವೇ? ಉದಾಹರಣೆಗೆ ತಮ್ಮದು ಸಕಾರಾತ್ಮಕ ರಾಜಕೀಯ ಎಂದು ಬಣ್ಣನೆ ಮಾಡಿಕೊಳ್ಳುತ್ತಿರುವ ಕೆಲವು ಸಮಕಾಲಿನ ಉದಾಹರಣೆಗಳನ್ನು ಗಮನಿಸೋಣ.

ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಮೀಸಲು ಕ್ಷೇತ್ರಗಳಲ್ಲಿ ತೋರಿರುವ ಅಸಾಮಾನ್ಯ ಸಾಧನೆಯನ್ನು ವ್ಯಾಖ್ಯಾನಿಸುವ ಹಲವು ರಾಜಕೀಯ ವಿಶ್ಲೇಷಕರು ಇದು ಜಾತಿವಾದಿ ರಾಜಕೀಯದ ಮುಕ್ತಾಯದ ಸೂಚನೆಯೆಂದು ವಿವರಿಸುತ್ತಿದ್ದಾರೆ. ಅಂತಹ ವಿಶ್ಲೇಷಕರು ಚುನಾವಣಾ ರಾಜಕೀಯಕ್ಕೆ ಸಕಾರಾತ್ಮಕ ಆಯಾಮವೊಂದನ್ನು ಆರೋಪಿಸುತ್ತಿದ್ದಾರೆ. ಆದರೆ ಇದು ನ್ಯಾಯದ ಬಗ್ಗೆ ತೀರಾ ಅಗ್ಗದ ಪರಿಕಲ್ಪನೆಯಿರುವ ವ್ಯಾಖ್ಯಾನಗಳಾಗಿವೆ. ಒಂದು ವೇಳೆ ಬಿಜೆಪಿ ತನ್ನ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳನ್ನು ಮೀಸಲು ಕ್ಷೇತ್ರಗಳಲ್ಲಿ ನಿಲ್ಲಿಸದೆ ಇತರ ಕ್ಷೇತ್ರಗಳಲ್ಲಿ ನಿಲ್ಲಿಸಿ ಸಾರ್ವತ್ರಿಕ ಮಾನದಂಡಗಳ ಮೂಲಕ ಗೆಲುವು ಸಾಧಿಸುವಂತೆ ಮಾಡಿದ್ದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಅವರು ಹೆಚ್ಚಿನ ತೂಕವನ್ನು ಒದಗಿಸಿದರೆಂದು ಮಾನ್ಯ ಮಾಡಬಹುದಿತ್ತು. ಅದು ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ಪ್ರಜ್ನೆಯನ್ನು ಮುರಿಯುವ ಕಡೆಗೆ ನಿಜಕ್ಕೂ ಒಂದು ಗಟ್ಟಿಯಾದ ಹೆಜ್ಜೆಯಾಗುತ್ತಿತ್ತು.

ಇದೇ ವಿಶ್ಲೇಷಣೆಯೇ ಮಹಿಳಾ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿಷಯಗಳಿಗೂ ಅನ್ವಯವಾಗುತ್ತದೆ. ಮೀಸಲು ಕ್ಷೇತ್ರಗಳಿಂದ ಅತಿಹೆಚ್ಚಿನ ಸಂಖ್ಯೆಯ ಸಂಸದರನ್ನು ಪಡೆದುಕೊಂಡಿರುವ ಸಾಧನೆಯು ಒಂದು ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಆಯಾ ಪಕ್ಷಗಳಿಗೆ ಮತ್ತು ಗೆದ್ದ ಅಭ್ಯರ್ಥಿಗಳಿಗೆ ಹೆಮ್ಮೆಯ ಪ್ರತ್ಯಯವನ್ನು ಒದಗಿಸಬಹುದು. ಆದರೆ ಈ ಗೆಲುವುಗಳು ಆಯಾ ಹುರಿಯಾಳುವಿನ ಆತ್ಮ ಪ್ರತ್ಯಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವುದಾದರೂ ಅದು ರಾಜಕೀಯ ಸರೀಕರ ನಡುವೆ ತಲೆ ಎತ್ತಿ ನಡೆಯುವಷ್ಟು ಆತ್ಮ ಗೌರವವನ್ನು ತಂದುಕೊಡುವುದೇ ಎಂಬುದು ಒಂದು ಪರಿಶುದ್ಧ ಹಾಗೂ ಆದರ್ಶವಾದಿ ರಾಜಕೀಯದ ಮಾನದಂಡಗಳಿಂದ ಕೇಳಲೇಬೇಕಾದ ಪ್ರಶ್ನೆಯಾಗಿದೆ. ಅಸಮಾನ ಸ್ಥಾನಮಾನಗಳು ಕೇವಲ ಎಸ್ಸಿ-ಎಸ್ಟಿ ಸಮುದಾಯದವರಿಗೆ ಮಾತ್ರವಲ್ಲದೆ ಇತರ ಸಂಸದರಿಗೂ ಕೂಡಾ ಸಾರ್ವಜನಿಕ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಸ್ವತಂತ್ರವಾಗಿ ತಮ್ಮ ಸತ್ವವನ್ನು ಪ್ರತಿಪಾದಿಸಲು ಸಾಧ್ಯವಾಗದಂತೆ ಮಾಡುತ್ತದೆ.

ಆದರೆ ಪ್ರಧಾನ ಸಮುದಾಯಗಳ ಸಂಸದರು ತನ್ನ ಸಮುದಾಯಗಳ ನಾಯಕರ ವರ್ಚಸ್ಸಿನ ಬಲದ ಫಲಾನುಭವಿಗಳಾಗಿರುವುದರಿಂದ ತಮ್ಮ ಸತ್ವವನ್ನು ಪ್ರತಿಪಾದನೆ ಮಾಡದಿದ್ದರೂ ಸಂತುಷ್ಟರಾಗಿಯೇ ಇರುತ್ತಾರೆ ಎಂದು ಹೇಳಬಹುದೆನ್ನಿಸುತ್ತದೆ. ಒಂದು ಶ್ರೇಣೀಕೃತ ಪಕ್ಷದಲ್ಲಿನ ಆಂತರಿಕ ಸ್ಥಾನಮಾನಗಳನ್ನೂ ಸಹ ಅದೇ ರೀತಿಯಲ್ಲಿ ಅಸಮಾನವಾಗಿ ಹಂಚುತ್ತದಾದ್ದರಿಂದ ಒಬ್ಬ ನಾಯಕರು ಆ ಶ್ರೇಣೀಕರಣದ ಏಣಿಯಲ್ಲಿ ಮೇಲೆ ಏರಿದಷ್ಟೂ ಗೌರವ-ಪ್ರತಿಷ್ಠೆಗಳು ಹೆಚ್ಚಾಗುತ್ತಾ ಹೋಗುವ ವ್ಯವಸ್ಥೆಯನ್ನೇ ಹೊಂದಿರುತ್ತವೆ. ಆದರೆ ಅದು ಏಣಿಯಲ್ಲೇ ಇದ್ದರೂ ಪ್ರತಿಯೊಬ್ಬರಿಗೂ ತಮ್ಮದೇ ನೈತಿಕವಾದ ಸತ್ವವಿರುತ್ತದೆ ಎಂಬ ಆದರ್ಶ ರಾಜಕಾರಣದ ತತ್ವವನ್ನು ಕಡೆಗಣಿಸುತ್ತದೆ. ಎಲ್ಲಕಿಂತ ಮುಖ್ಯವಾಗಿ ಚುನಾವಣಾ ರಾಜಕೀಯದಲ್ಲಿರುವ ಈ ಅಸಮಾನ ಸಂಬಂಧಗಳು ಒಂದು ಕನಿಷ್ಠ ನೈತಿಕತೆಯನ್ನು ಉಳಿಸಿಕೊಳ್ಳುವ ಪರಿಶುದ್ಧ ರಾಜಕೀಯದಿಂದ ಈ ಪ್ರತಿನಿಧಿಗಳು ಮತ್ತಷ್ಟು ದೂರಸರಿಯುವಂತೆಯೇ ಮಾಡುತ್ತದೆ.

ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News