ಮನ್ಸೂರ್ ಖಾನ್ ಭಾರತಕ್ಕೆ ಮರಳಿದರೆ ರಕ್ಷಣೆ ನೀಡುತ್ತೇವೆ: ಎಸ್ಐಟಿ
Update: 2019-06-23 13:24 GMT
ಬೆಂಗಳೂರು, ಜೂ.23: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ವಿಡಿಯೋ ಕುರಿತು ಸಿಟ್(ಎಸ್ಐಟಿ) ಪ್ರತಿಕ್ರಿಯೆ ನೀಡಿದ್ದು, ಆತ ಭಾರತಕ್ಕೆ ಮರಳಿದರೆ ರಕ್ಷಣೆ ನೀಡುತ್ತೇವೆ ಎಂದು ಹೇಳಿದೆ.
ವಿಡಿಯೋ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಟ್ ತನಿಖಾಧಿಕಾರಿ ಎಸ್.ಗಿರೀಶ್, ಮನ್ಸೂರ್ ಖಾನ್ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿರುವ ವಿಡಿಯೊದಲ್ಲಿ ಕೆಲ ಮುಖಂಡರ ಹೆಸರು ಬಹಿರಂಗಗೊಳಿಸಿದ್ದಾನೆ. ಆದರೆ, ಆತ ಓರ್ವ ಆರೋಪಿ ಸ್ಥಾನದಲ್ಲಿದ್ದು, ಆರೋಪಿ ಆದ ವ್ಯಕ್ತಿ ಯಾರ ಮೇಲಾದರೂ ಆರೋಪ ಮಾಡಬಹುದು ಎಂದರು.
ಯಾವುದೇ ರೀತಿಯ ಗಟ್ಟಿ ಸಾಕ್ಷ್ಯಾಧಾರಗಳಿಲ್ಲದೆ, ಮನ್ಸೂರ್ ಖಾನ್ ಹೇಳಿಕೆ ಪರಿಗಣಿಸಲು ಸಾಧ್ಯವಿಲ್ಲ. ಇನ್ನು, ಆತ ವಿಡಿಯೊದಲ್ಲಿ ಜೀವ ಬೆದರಿಕೆ ಇದೆ ಎಂದಿದ್ದು, ಅವರು ಭಾರತಕ್ಕೆ ಮರಳಿದರೆ ನಾವು ರಕ್ಷಣೆ ನೀಡುತ್ತೇವೆ ಎಂದು ನುಡಿದರು.