ತಂತ್ರಜ್ಞಾನದಿಂದ ಜಾನಪದ ಕಲೆ ಕ್ಷೀಣಿಸುತ್ತಿದೆ: ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ

Update: 2019-06-23 15:02 GMT

ಬೆಂಗಳೂರು, ಜೂ.23: ದೃಶ್ಯ ಮಾಧ್ಯಮ ಹಾಗೂ ಮೊಬೈಲ್ ಬಳಕೆಯಿಂದ ಜಾನಪದ ಕಲೆ ಮತ್ತು ನೃತ್ಯ ಕ್ಷೀಣಿಸುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದ್ದಾರೆ. 

ರವಿವಾರ ಕಸಾಪ ಸಭಾಂಗಣದಲ್ಲಿ ಸಿದ್ದಪ್ಪಾಜಿ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ಆಯೋಜಿಸಿದ್ದ ಸಂಸ್ಥೆಯ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಳಕೆಯಿಂದ ಎಲ್ಲ ಕ್ಷೇತ್ರಗಳು ಬೆಳವಣಿಗೆ ಕಾಣುತ್ತಿವೆ. ಆದರೆ, ಜಾನಪದ ಕ್ಷೇತ್ರ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾನಪದ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಅಂತಹ ಕೆಲಸವನ್ನು ಶ್ರೀಸಿದ್ದಪ್ಪಾಜಿ ಜಿ. ಜಾನಪದ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ಮಾಡುತ್ತಿದೆ ಎಂದು ಅಭಿನಂದಿಸಿದರು.

ಇತ್ತೀಚಿನ ದಿನಗಳಲ್ಲಿ ಹಣವನ್ನು ಕೊಟ್ಟು ಡಾಕ್ಟರೇಟ್ ಪದವಿ ಪಡೆಯುತ್ತಿದ್ದು, ಈ ಪದವಿಗೆ ಗೌರವಿಲ್ಲದಂತಾಗಿದೆ. ಇದು ದುರಾದೃಷ್ಟಕರ ಸಂಗತಿಯಾಗಿದೆ. ಅರ್ಹತೆಗೆ ಅನುಗುಣವಾಗಿ ಪದವಿ ನೀಡಿದರೆ ಆ ಪದವಿಗೂ ಒಂದು ಗೌರವ ಬರುತ್ತದೆ ಎಂದು ಹೇಳಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ, ನಿವೃತ್ತ ಆರಕ್ಷಕ ಡಾ.ವೇಮಗಲ್ ನಾರಾಯಣಸ್ವಾಮಿ, ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಅಧ್ಯಕ್ಷ ಎಂ.ತಿಮ್ಮಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News