ಸಿಎಂ ಗ್ರಾಮ ವಾಸ್ತವ್ಯ ಒಳ್ಳೆಯದು: ಸಣ್ಣ ಕೈಗಾರಿಕಾ ಸಚಿವ ನಾಗೇಶ್

Update: 2019-06-27 14:56 GMT

ಬೆಂಗಳೂರು, ಜೂ. 27: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಬಹಳ ಒಳ್ಳೆಯ ಕಾರ್ಯಕ್ರಮ. ನಮ್ಮ ಕ್ಷೇತ್ರದಲ್ಲಿಯೂ ಸಿಎಂ ಗ್ರಾಮ ವಾಸ್ತವ್ಯ ಮಾಡಲಿ ಎಂದು ನೂತನ ಸಣ್ಣ ಕೈಗಾರಿಕಾ ಸಚಿವ ನಾಗೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಕುಟುಂಬ ಸಮೇತರಾಗಿ ಕಚೇರಿ ಪೂಜೆ ಮಾಡಿ ಕಾರ್ಯಾರಂಭ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೂ ಇನ್ನೂ ಹೊಸಬ. ಸ್ವತಂತ್ರವಾಗಿ ಗ್ರಾಮ ವಾಸ್ತವ್ಯ ಮಾಡುವುದಿಲ್ಲ. ಸಿಎಂ ಗ್ರಾಮ ವಾಸ್ತವ್ಯದ ವೇಳೆ ನನ್ನ ಅಗತ್ಯವಿದ್ದರೆ ತೆರಳುವೆ ಎಂದರು.

ಸಣ್ಣ ಕೈಗಾರಿಕೆ ಇಲಾಖೆಗೆ ನೂತನವಾಗಿ ಸಚಿವನಾಗಿದ್ದೇನೆ. ನಾನು ಇಂಜಿನಿಯರಿಂಗ್ ಪದವೀಧರ. ನನ್ನ ಮೇಲೆ ವಿಶ್ವಾಸವಿಟ್ಟು ಮುಖ್ಯಮಂತ್ರಿ ನೀಡಿರುವ ಈ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನಾಗೇಶ್ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ನಾನೂ ಹಾಗೂ ಆರ್.ಶಂಕರ್ ಯಾವುದೇ ಆಪರೇಷನ್ ಕಮಲಕ್ಕೆ ತುತ್ತಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ ನಾಗೇಶ್, ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸುಭದ್ರವಾಗಿರಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News