94 ‘ಸಿ’, 94 ‘ಸಿಸಿ’ ಅಡಿ ಅರ್ಹ ಮನೆಗಳಿಗೂ ಪರಿಹಾರ: ಕಂದಾಯ ಸಚಿವ ದೇಶಪಾಂಡೆ

Update: 2019-06-28 15:19 GMT

ಬೆಂಗಳೂರು, ಜೂ. 28: ಕೊಡಗು ಜಿಲ್ಲೆಯಲ್ಲಿ 94 ‘ಸಿ’ ಮತ್ತು 94 ‘ಸಿಸಿ’ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಸಕ್ರಮಕ್ಕೆ ಅರ್ಹತೆ ಪಡೆದಿದ್ದ ಮನೆಗಳು ಪ್ರಕೃತಿ ವಿಕೋಪದಡಿ ಹಾನಿಗೊಳಗಾಗಿದ್ದರೆ ಅಂತಹ ಮನೆಗಳಿಗೂ ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಹಾಗೂ ಬರ ಪರಿಹಾರ ಕಾಮಗಾರಿ ಪರಿಶೀಲನೆಯನ್ನು ಕೈಗೊಂಡ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಸಂತ್ರಸ್ತರು ಹಾಗೂ ಅಧಿಕಾರಿಗಳು ಈ ವಿಷಯವನ್ನು ಸಚಿವರ ಗಮನಕ್ಕೆ ತಂದು ವಿನಂತಿಸಿದ್ದರು. ಇದಕ್ಕೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ ದೇಶಪಾಂಡೆ, ಈ ಬಗ್ಗೆ ಸರಕಾರದಿಂದ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದ ಹಲವು ಸಂತ್ರಸ್ತರು ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದು, ಇವರು ಅರ್ಹತೆ ಪಡೆದಿದ್ದಾಗ್ಯೂ ಪ್ರವಾಹದಲ್ಲಿ ಮನೆ ಕೊಚ್ಚಿ ಹೋಗಿದ್ದರಿಂದ ಸೂಕ್ತ ಪರಿಹಾರ ದೊರಕದೆ ತೊಂದರೆಗೀಡಾಗಿದ್ದರು. ಈ ಆದೇಶದಿಂದಾಗಿ ಸಂತ್ರಸ್ತರಿಗೆ ಅನುಕೂಲ ಆಗಲಿದೆ ಎಂದು ಅವರು ವಿವರಿಸಿದ್ದಾರೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94‘ಸಿ’ ಮತ್ತು 94‘ಸಿಸಿ’ ಅಡಿ ಅರ್ಹವಿದ್ದರೆ ‘ಸಿ’ ಮತ್ತು ‘ಡಿ’ ವರ್ಗೀಕೃತ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಮತ್ತು ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ‘ಸಿ’ ಮತ್ತು ‘ಡಿ’ ವರ್ಗೀಕೃತ ಜಮೀನುಗಳಲ್ಲಿ ಬಗರ್ ಹುಕುಂ ಅಡಿ ಸಕ್ರಮೀಕರಣ ಕೋರಿ ಬಾಕಿ ಇರುವ ಅರ್ಜಿಗಳನ್ನು ವಿಲೇ ಮಾಡಲು ಆದೇಶಿಸಲಾಗಿದೆ.

ಕಂದಾಯ ಸಚಿವರು ಇದೇ ದಿನ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಭೂ ಸರ್ವೇಕ್ಷಣಾ ಇಲಾಖೆಯು ಸೇರಿದಂತೆ ಇತರೆ ಸಂಸ್ಥೆಗಳ ನುರಿತ ತಾಂತ್ರಿಕ ತಜ್ಞರೊಂದಿಗೆ ಸಭೆ ನಡೆಸಿ ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿನ ಭೂ ಪರಿವರ್ತನೆ ವಿಷಯ ಕುರಿತು ಸಮಾಲೋಚನೆ ನಡೆಸಿದ್ದಾರೆಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News