×
Ad

ಜನಸಂಖ್ಯೆಗನುಗುಣವಾಗಿ ವಾರ್ಡ್‌ಗಳ ಮರುವಿಂಗಡನೆ: ಬಿಬಿಎಂಪಿಯಿಂದ ಕರಡು ಸಿದ್ಧ

Update: 2019-06-28 22:47 IST

ಬೆಂಗಳೂರು, ಜೂ.28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳನ್ನು ಜನಸಂಖ್ಯೆಯಾಧಾರಿತವಾಗಿ ಪುನರ್ ವಿಂಗಡನೆ ಪ್ರಕ್ರಿಯೆ ಆರಂಭಗೊಂಡಿದ್ದು, ಪಾಲಿಕೆ ಕರಡು ವರದಿಯನ್ನು ಸಿದ್ಧಪಡಿಸಿದೆ.

2007 ಕ್ಕೂ ಮೊದಲು ಬೆಂಗಳೂರು ಮಹಾನಗರ ಪಾಲಿಕೆ ಇದ್ದ ಸಂದರ್ಭದಲ್ಲಿ ನಗರದಲ್ಲಿ 100 ವಾರ್ಡ್‌ಗಳಿದ್ದವು. ಆದರೆ, 2007 ರಲ್ಲಿ ಏಳು ನಗರಸಭೆಗಳು, 1 ಪಟ್ಟಣ ಪಂಚಾಯತ್ ಹಾಗೂ 110 ಹಳ್ಳಿಗಳು ಸೇರಿದಂತೆ ಬಿಬಿಎಂಪಿಯನ್ನು ರಚನೆ ಮಾಡಿದರು. ಆ ಬಳಿಕ 100 ವಾರ್ಡ್‌ಗಳು ಪುನರ್‌ರಚನೆಗೊಂಡು 198 ವಾರ್ಡ್‌ಗಳಾದವು.

2015ರಲ್ಲಿ ಪಾಲಿಕೆ ಚುನಾವಣೆ ನಡೆಯುವ ಮೊದಲು 2001ರ ಜನಸಂಖ್ಯೆಗೆ ಅನುಗುಣವಾಗಿ ಮರುವಿಂಗಡನೆ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲವಾದ್ದರಿಂದ ಈಗ ಕೈಗೆತ್ತಿಕೊಂಡಿದೆ. ಅದರಂತೆ ಸರಾಸರಿ ಜನಸಂಖ್ಯೆ ಆಧಾರದಲ್ಲಿ ಹೊಸ ವಾರ್ಡ್‌ಗಳ ವ್ಯಾಪ್ತಿ ಎಷ್ಟಿರಬೇಕು, ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ವಾರ್ಡ್ ರಚಿಸಬೇಕು, ಎಲ್ಲಿ ಕಡಿಮೆ ಮಾಡಬೇಕು ಎಂಬ ಬಗ್ಗೆ ಪಾಲಿಕೆಯು ಕರಡನ್ನು ಸಿದ್ಧಪಡಿಸಿದ್ದು, ಶೀಘ್ರವೇ ವಿಂಗಡನೆಯಾಗಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಯಿದೆ.

ಮುಂದಿನ ವರ್ಷ ಪಾಲಿಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಾರ್ಡ್‌ಗಳ ಪುನರ್‌ವಿಂಗಡನೆ ಸಂಬಂಧ ರಾಜ್ಯ ಚುನಾವಣಾ ಆಯುಕ್ತರು ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜನಗಣತಿಯಾದ ಬಳಿಕ ವಾರ್ಡ್‌ಗಳ ಮರುವಿಂಗಡನೆಯಾಗಬೇಕು ಎಂದು ಸುಪ್ರೀಂಕೋರ್ಟ್‌ನ ಆದೇಶವೇ ಇದೆ. ಈ ನಿಟ್ಟಿನಲ್ಲಿ ಕಳೆದ ಚುನಾವಣೆಗೂ ಮೊದಲೇ ಪುನರ್‌ವಿಂಗಡೆಯಾಗಬೇಕಿತ್ತು, ಕಾರಣಾಂತರಗಳಿಂದ ಆಗಿಲ್ಲ. ಈಗ ಕರಡು ಸಿದ್ಧವಾಗಿದ್ದು, ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಇದರ ಪ್ರಾತ್ಯಕ್ಷಿಕೆ ನೀಡಲಾಗಿದೆ.

ಮುಂದಿನ ಒಂದು ವಾರದಲ್ಲಿ ಶಾಸಕರು ಹಾಗೂ ಬಿಬಿಎಂಪಿಯ ಎಲ್ಲ ವಾರ್ಡ್‌ಗಳ ಸದಸ್ಯರಿಗೆ ಪ್ರಾತ್ಯಕ್ಷಿತೆ ನೀಡಿ, ಚರ್ಚೆ ನಡೆಸಿದ ಬಳಿಕ ಅಗತ್ಯ ಮಾರ್ಪಾಡುಗಳೊಂದಿಗೆ ಆಗಸ್ಟ್‌ರೊಳಗೆ ಅಂತಿಮ ಕರಡು ಸಿದ್ಧವಾಗಲಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

13 ವಾರ್ಡ್‌ಗಳು ಬದಲಾಗಲ್ಲ: ಪ್ರಸ್ತುತವಿರುವ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪ್ರತಿನಿಧಿಸಿರುವ ಜಯನಗರ(153) ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಪ್ರತಿನಿಧಿಸುವ ದೇವರ ಜೀವನಹಳ್ಳಿ ವಾರ್ಡ್‌ಗಳೂ ಸೇರಿದಂತೆ 13 ವಾರ್ಡ್‌ಗಳು ಬದಲಾಗುವುದಿಲ್ಲ ಎಂದು ಕರಡು ವರದಿಯಲ್ಲಿದೆ.

ವಿಜಯನಗರ, ಕೆಂಪಾಪುರ ಅಗ್ರಹಾರ, ಅತ್ತಿಗುಪ್ಪೆ(ವಿಜಯನಗರ ವಿಧಾನಸಭಾ ಕ್ಷೇತ್ರ), ನಾಯಂಡಹಳ್ಳಿ (ಗೋವಿಂದರಾಜನಗರ ಕ್ಷೇತ್ರ), ದೇವರಜೀವನಹಳ್ಳಿ (ಪುಲಕೇಶಿನಗರ ಕ್ಷೇತ್ರ),ಯಲಹಂಕ ಉಪನಗರ (ಯಲಹಂಕ ಕ್ಷೇತ್ರ), ಜಯನಗರ (ಚಿಕ್ಕಪೇಟೆ ಕ್ಷೇತ್ರ), ಶಾಂತಿನಗರ (ಶಾಂತಿನಗರ ಕ್ಷೇತ್ರ), ಬೆನ್ನಿಗಾನಹಳ್ಳಿ, ಸರ್ವಜ್ಞನಗರ (ಸಿ.ವಿ.ರಾಮನ್ನಗರ), ಈಜಿಪುರ (ಬಿಟಿಎಂ ಬಡಾವಣೆ ಕ್ಷೇತ್ರ), ಕಾಡುಗೊಂಡನಹಳ್ಳಿ, ಲಿಂಗರಾಜಪುರ (ಸರ್ವಜ್ಞನಗರ ಕ್ಷೇತ್ರ)ಗಳು ಈಗಿರುವ ಸ್ಥಿತಿ ಉಳಿಸಿಕೊಳ್ಳಲಿದ್ದು, ಉಳಿದ 185 ವಾರ್ಡ್‌ಗಳು ಮರು ವಿಂಗಡನೆಯಾಗಲಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News