ಸುಗಂಧ ದ್ರವ್ಯ, ಔಷಧಿ ಮಾರಾಟ ಮಳಿಗೆಗಳ ಮೇಲೆ ಎಸ್ಐಟಿ ದಾಳಿ: 1.15 ಕೋಟಿ ಮೌಲ್ಯದ ಮಾಲು ಜಪ್ತಿ
Update: 2019-06-29 16:28 GMT
ಬೆಂಗಳೂರು, ಜೂ.29: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಮನ್ಸೂರ್ ಖಾನ್ ಮಾಲಕತ್ವದ ರಯ್ಯಾನ್(ಸುಗಂಧ ದ್ರವ್ಯ) ಹಾಗೂ ಔಷಧಿ ಮಾರಾಟ ಮಳಿಗೆಗಳ ಮೇಲೆ ಸಿಟ್(ಎಸ್ಐಟಿ) ಶನಿವಾರ ದಾಳಿ ನಡೆಸಿ, 1.15 ಕೋಟಿ ಮೌಲ್ಯದ ಮಾಲು ಜಪ್ತಿ ಮಾಡಿದೆ.
ನಗರದ ಕೋಲ್ಸ್ ರಸ್ತೆಯಲ್ಲಿರುವ ರಯ್ಯಾನ್ ಮಳಿಗೆಯಲ್ಲಿ ಶೋಧನೆ ನಡೆಸಿದ ವಿಶೇಷ ತನಿಖಾ ತಂಡವು ಸುಮಾರು 15 ಲಕ್ಷ ರೂ. ಮೌಲ್ಯದ ವಿವಿಧ ಬಗೆಯ ಸುಂಗಂಧ ದ್ರವ್ಯಗಳು, ಬಟ್ಟೆ, ಜರ್ಕಿನ್ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದೆ.
ಅದೇ ರೀತಿ, ಎಂ.ಎಂ.ರಸ್ತೆಯಲ್ಲಿರುವ ಫ್ರಂಟ್ಲೈನ್ ಫಾರ್ಮ ಮಳಿಗೆಯಲ್ಲಿ ಶೋಧ ನಡೆಸಿದ ಸಿಟ್ ತನಿಖಾಧಿಕಾರಿಗಳು, 1 ಕೋಟಿ ಮೌಲ್ಯದ ಔಷಧಿಗಳನ್ನು ಹಾಗೂ ಒಂದು ಟಾಟಾ ಏಸ್ ವಾಹನ, ಹಲವು ಬಗೆಯ ವಿದ್ಯುನ್ಮಾನ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟನೆ ತಿಳಿಸಿದೆ.