ಕಸ ಸಂಸ್ಕರಣೆ, ಹಸಿ ಕಸ ಕಾಂಪೋಸ್ಟ್ ಕುರಿತು ಬಿಬಿಎಂಪಿ ಮಹತ್ವದ ಸುತ್ತೋಲೆ
ಬೆಂಗಳೂರು, ಜೂ.29: ರಾಜಧಾನಿಯಲ್ಲಿರುವ ಎಲ್ಲ ಸರಕಾರಿ ಕಚೇರಿಗಳು ಹಾಗೂ ಸರಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ನೌಕರರ ಮನೆ ಕಸವನ್ನು ವಿಂಗಡಿಸದೆ, ಸಂಸ್ಕರಿಸದೆ ಹೊರ ಹಾಕುವಂತಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಹೀಗಾಗಿ, ನಗರದ ಎಲ್ಲ ಸರಕಾರಿ ಇಲಾಖೆಗಳ ಕಚೇರಿಗಳು ಹಾಗೂ ಅವುಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿ ತಮ್ಮ ಮನೆಯಲ್ಲಿಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿ ಕಸ, ಒಣ ಕಸ ಹಾಗೂ ಗೃಹ ನೈರ್ಮಲ್ಯಗಳು ಎಂದು ಮೂರು ಭಾಗಗಳಾಗಿ ಸಂಸ್ಕರಿಸಬೇಕು. ಅದರಲ್ಲಿ ಹಸಿ ಕಸವನ್ನು ಕಡ್ಡಾಯವಾಗಿ ಅಲ್ಲಿಯೇ ಕಾಂಪೋಸ್ಟ್ ಮಾಡಬೇಕು. ಆ ನಂತರ ಉತ್ಪತ್ತಿಯಾಗುವ ಸಂಸ್ಕರಿತ ಗೊಬ್ಬರವನ್ನು ಸಮೀಪದ ಉದ್ಯಾನಕ್ಕೆ ನೀಡಬೇಕಿದೆ.
ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 5 ಸಾವಿರ ಟನ್ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತಿದ್ದು, ಇದರ ನಿರ್ವಹಣೆ ಪಾಲಿಕೆಗೆ ಜಟಿಲ ಸಮಸ್ಯೆಯಾಗಿದೆ. 2018-19ನೇ ಸಾಲಿನಲ್ಲಿ ಬಿಬಿಎಂಪಿ ಕಸ ಸಂಗ್ರಹ ಮತ್ತು ಸಾಗಣೆಗೆ 821 ಕೋಟಿ ರೂ. ಖರ್ಚು ಮಾಡಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಆ ಖರ್ಚು 100 ಕೋಟಿ ರೂ. ಹೆಚ್ಚಾಗಿದೆ. ಆದರೂ ನಗರದಲ್ಲಿ ಕಸ ಸಂಸ್ಕರಣೆ ಹಾಗೂ ವಿಲೇವಾರಿ ಸಮಸ್ಯೆ ಬಗೆಹರಿಯುತ್ತಿಲ್ಲ. ಹಾದಿ ಬೀದಿಯಲ್ಲಿ ಕಸದ ರಾಶಿ ಕಾಣತ್ತಿವೆ. ಕೆಲವೆಡೆ ಕಸ ಸೂಕ್ತ ರೀತಿಯಲ್ಲಿ ವಿಂಗಡಣೆ ಆಗುತ್ತಿಲ್ಲ. ಇನ್ನು ಕೆಲವೆಡೆ ವಿಂಗಡಿಸಿದರೂ ಕಸ ಸಂಗ್ರಹಿಸುವವರು ಮತ್ತೆ ಅದನ್ನು ಒಟ್ಟುಗೂಡಿಸುತ್ತಿದ್ದಾರೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೊದಲು ಸರಕಾರಿ ವಲಯ ಮತ್ತದರ ನೌಕರರೇ ಕಸ ಸಂಸ್ಕರಣೆ ಹಾಗೂ ಕಾಂಪೋಸ್ಟ್ ಮಾಡಿ ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಈ ನಿಯಮ ಮಾಡಲಾಗಿದೆ.
ಇತ್ತೀಚೆಗೆ ನಡೆದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ರಚಿಸಿರುವ ರಾಜ್ಯ ಮಟ್ಟದ ಸಮಿತಿಯ ಸಭೆಯಲ್ಲಿ ಬೆಂಗಳೂರಿನಲ್ಲಿ ಇಂದಿಗೂ ಶೇ.23ರಷ್ಟು ಮಾತ್ರ ಸಂಸ್ಕರಿಸಿದ ಕಸ ಸಂಗ್ರಹವಾಗುತ್ತಿದ್ದು, ಬಿಬಿಎಂಪಿ ಹಾಗೂ ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಸಮಿತಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದರು. ಜತೆಗೆ ಘನತಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ 2016ರಲ್ಲಿ ರೂಪಿಸಿರುವ ನಿಯಮಾವಳಿಗಳನ್ನು ಜಾರಿಗೆ ತಂದು ಒಂದು ವೇಳೆ ಪಾಲಿಸದಿದ್ದರೆ ದಂಡ ವಿಧಿಸಲು ಸೂಚಿಸಿತ್ತು. ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಕಾಂಪೊಸ್ಟ್ ಕಡ್ಡಾಯ: ಕಚೇರಿ ಅಥವಾ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಮೊದಲು ಹಸಿ ಕಸ, ಒಣ ಕಸ ಹಾಗೂ ಗೃಹ ನೈರ್ಮಲ್ಯಗಳು ಎಂದು ಮೂರು ಭಾಗಗಳಾಗಿ ಸಂಸ್ಕರಿಸಬೇಕು. ಅದರಲ್ಲಿ ಹಸಿ ಕಸವನ್ನು ಬುಟ್ಟಿ, ಮಡಿಕೆ ಮಾದರಿಯ ಕಾಂಪೋಸ್ಟ್ ಬಿನ್ಗಳನ್ನಿಟ್ಟು ಅದರಲ್ಲಿ ಹಾಕುತ್ತಾ ಹಸಿ ಕಸದ ಪ್ರಮಾಣದಲ್ಲಿಯೇ ಕಸದ ಮೇಲೆ ಕೊಕೊ ಪುಡಿಯನ್ನು ಸಿಂಪಡಿಸಿ ಗೊಬ್ಬರವಾಗಿಸಬೇಕು.
ಬಳಿಕ ಅದನ್ನು ಕಚೇರಿ ಅಥವಾ ಮನೆಯ ಗಿಡಗಳಿಗೆ, ಕೈತೋಟಗಳಿಗೆ ಬಳಸಬೇಕು. ಒಂದು ವೇಳೆ ಕೈತೋಟ ಇಲ್ಲವಾದರೆ ಸಮೀಪದ ಉದ್ಯಾನಕ್ಕೆ ನೀಡಬೇಕು. ಉಳಿದಂತೆ ಬೇರ್ಪಡಿಸಿ ಒಣಕಸವನ್ನು ವಾರಕ್ಕೆ ಎರಡು ಬಾರಿ ಪಾಲಿಕೆ ವತಿಯಿಂದ ಒಣಕಸ ಸಂಗ್ರಹಣೆಗೆ ನಿಯೋಜಿಸಿರುವ ಟಿಪ್ಪರ್ಗಾಡಿಗಳಿಗೆ ಹಾಗೂ ಗೃಹ ಹಾನಿಕಾರಕ ಕಸವನ್ನು ಹಳದಿ ಚೀಲದಲ್ಲಿ ಸುತ್ತಿ ಪಾಲಿಕೆ ಕಸ ಸಂಗ್ರಹಿಸುವವರಿಗೆ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.