ಜಿ.ಪಂ., ತಾ.ಪಂ.ಗಳ ಅನುದಾನ ಹೆಚ್ಚಳಕ್ಕೆ ಸಚಿವ ಸಂಪುಟ ಮಹತ್ವದ ತೀರ್ಮಾನ

Update: 2019-07-11 17:11 GMT

ಬೆಂಗಳೂರು, ಜು. 11: ರಾಜ್ಯದ ಮೂವತ್ತು ಜಿಲ್ಲಾ ಪಂಚಾಯತ್ ಮತ್ತು 177 ತಾಲೂಕು ಪಂಚಾಯತ್‌ಗಳ ರಾಜ್ಯದ ಅನಿರ್ಬಂಧಿತ ಅನುದಾನ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆ ಮಹತ್ವದ ನಿರ್ಣಯ ಕೈಗೊಂಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದ ಸಚಿವ ಕೃಷ್ಣಭೈರೇಗೌಡ, 2019-20ನೆ ಸಾಲಿನ ಆರ್ಥಿಕ ವರ್ಷದಿಂದ 30 ಜಿ.ಪಂ.ಗಳಲ್ಲಿ ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತಿರ್ಣ ಆಧರಿಸಿ ಕನಿಷ್ಠ 4 ಕೋಟಿ ರೂ.ಗಳಿಂದ ಗರಿಷ್ಠ 8 ಕೋಟಿ ರೂ.ಅನುದಾನ ಹಂಚಿಕೆ ಮಾಡಲಾಗುವುದು.

ಅಲ್ಲದೆ, 177 ತಾಲೂಕುಗಳಿಗೆ 2019-20ನೆ ಸಾಲಿಗೆ ಈಗ ನೀಡುತ್ತಿರುವ 1 ಕೋಟಿ ರೂ.ಬದಲು ತಲಾ 2 ಕೋಟಿ ರೂ.ಅನುದಾನ ಹಂಚಿಕೆ ಮಾಡಲಾಗುವುದು. 2020-21ರಿಂದ ಕನಿಷ್ಠ 2ಕೋಟಿ ರೂ.ನಿಂದ ಗರಿಷ್ಠ 3ಕೋಟಿ ರೂ.ವರೆಗೆ ಜನಸಂಖ್ಯೆ ಹಾಗೂ ಭೌಗೋಳಿಕ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ. ಇದಕ್ಕೆ 172 ಕೋಟಿ ರೂ.ಅನುದಾನ ನಿಗದಿಗೊಳಿಸಲಾಗಿದೆ ಎಂದರು.

ನೆರವು: ರಾಜ್ಯದ 24 ಜಿಲ್ಲೆಗಳಲ್ಲಿ ಕೃಷಿ ಬೆಳೆಗಳಿಗೆ ಹನಿ ನೀರಾವರಿ ಘಟಕಗಳ ಅಳವಡಿಕೆಗಾಗಿ ಎಲ್ಲ ವರ್ಗದ ರೈತರಿಗೆ ಸಹಾಯಧನ ನೀಡಲು ನಬಾರ್ಡ್‌ನಿಂದ 20ಕೋಟಿ ರೂ.ಯೋಜನೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ನವ ಬೆಂಗಳೂರು ಯೋಜನೆಯಡಿ ಈಗಾಗಲೇ ಅನುಮೋದನೆಗೊಂಡಿರುವ ಕ್ರಿಯಾ ಯೋಜನೆಯಂತೆ ರಸ್ತೆಗಳಿಗೆ ವೈಟ್ ಟ್ಯಾಪಿಂಗ್‌ಗೆ 146 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಪ್ರೋತ್ಸಾಹ ಧನ: ಸಿರಿಧಾನ್ಯ ಬೆಳೆಗಾರರ ಉತ್ತೇಜನಕ್ಕೆ ‘ರೈತ ಸಿರಿ’ ಯೋಜನೆ ರೂಪಿಸಿದ್ದು, ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಪ್ರೋತ್ಸಾಹ ಧನ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಆಲೂಗಡ್ಡೆ ಬೆಳೆಗಾರರನ್ನು ಪ್ರೋತ್ಸಾಹಿಸಲು ಹೊಸ ಘಟಕವನ್ನು ರೂಪಿಸಿದ್ದು, ಆಲೂಗಡ್ಡೆ ಬೆಳೆಯುವ ರೈತರಿಗೆ ಬಿತ್ತನೆಬೀಜ ಖರೀದಿಸಲು ಪ್ರತಿ ಹೆಕ್ಟೇರ್‌ಗೆ 7,500 ರೂ. ಹಾಗೂ ಸಸ್ಯ ಸಂರಕ್ಷಣೆ, ಔಷಧಿ ಖರೀದಿಗೆ ಪ್ರತಿ ಹೆಕ್ಟೇರ್‌ಗೆ 7,200 ರೂ. ಸೇರಿ 14,700 ರೂ.ನೀಡಲು ಸಂಪುಟ ಸಮ್ಮತಿಸಿದೆ ಎಂದರು.

ಬಾಗೇಪಲ್ಲಿ ಕೆರೆ ತುಂಬಿಸಲು ಸಮ್ಮತಿ: ಬೆಂಗಳೂರು ನಗರ ಹೆಬ್ಬಾಳ-ನಾಗವಾರ ಕಣಿವೆಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು 2ನೆ ಹಂತದಲ್ಲಿ ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 70 ಕೋಟಿ ರೂ.ಕಾಮಗಾರಿ ಕೈಗೊಳ್ಳಲು ಸಂಪುಟ ಅನುಮೋದನೆ ನೀಡಿದೆ.

ಹೆಸರುಘಟ್ಟಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಹಾಗೂ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡುವ ಸಲುವಾಗಿ 37.28 ಕೋಟಿ ರೂ.ಒದಗಿಸಲು ಹಾಗೂ ಆಂಧ್ರದ ತಿರುಪತಿ ತಿರುಮಲದಲ್ಲಿನ ಕರ್ನಾಟಕ ಛತ್ರದ ಆವರಣದಲ್ಲಿ ನೂತನವಾಗಿ ಅತಿಥಿಗೃಹ ನಿರ್ಮಾಣಕ್ಕೆ 26 ಕೋಟಿ ರೂ.ಅನುದಾನ ಒದಗಿಸಲು ಅನುಮೋದನೆ ನೀಡಿದೆ.

ಬೆಳಗಾವಿಯ ಬೈಲಹೊಂಗಲ ಪಟ್ಟಣಕ್ಕೆ ದಿನದ 24 ಗಂಟೆ ನೀರು ಪೂರೈಕೆ ಯೋಜನೆಗೆ 95 ಕೋಟಿ ರೂ.ಅನುದಾನವನ್ನು ಒದಗಿಸಲು ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರು ಉತ್ತರ ತಾಲೂಕಿನ ಗಾಣಿಗರಹಳ್ಳಿ ಕೆರೆ ಸೌಂದರೀಕರಣ ಕಾಮಗಾರಿಗೆ 13 ಕೋಟಿ ರೂ. ಒದಗಿಸಲು ಅನುಮೋದನೆ ನೀಡಿದೆ.

ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ಮತ್ತು ವಿಜಯಪುರ ಜಿಲ್ಲೆ ಆಲಮೇಲದಲ್ಲಿ ತೋಟಗಾರಿಕೆ ಮಹಾ ವಿದ್ಯಾಲಯ ಸ್ಥಾಪನೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಲೋಕಪಾವನಿ ನದಿಯಿಂದ ಸುಂಕಾತೊಣ್ಣೂರು ಕೆರೆಗಳಿಗೆ ನೀರು ತುಂಬಿಸಲು 30ಕೋಟಿ ರೂ.ಗಳ ಅಂದಾಜಿಗೆ ಅನುಮೋದನೆ ನೀಡಲಾಗಿದೆ.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ತುರವಿಹಳ್ಳ ಹತ್ತಿರ ತುಂಗಭದ್ರ ಎಡದಂಡೆ ಕಾಲುವೆಯಿಂದ ನೀರು ಸರಬರಾಜು ವ್ಯವಸ್ಥೆ ಒದಗಿಸುವ ಯೋಜನೆಗೆ 88 ಕೋಟಿ ರೂ.ಅನುದಾನ ಒದಗಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

‘ಪರಿಶಿಷ್ಟ ವರ್ಗ(ಎಸ್ಟಿ)ದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲಿಸಿ ತೀರ್ಮಾನಕೈಗೊಳ್ಳಲು ಆಯೋಗ ರಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅಧಿಕಾರ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ’

-ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News