ಸಚಿವ ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು

Update: 2019-07-11 17:59 GMT

ಬೆಂಗಳೂರು, ಜು.11: ಎಂಜಿನಿಯರ್‌ಗಳಿಗೆ ಭಡ್ತಿ ನೀಡಿ, ಕೆಲವರನ್ನು ವರ್ಗಾವಣೆ ಮಾಡಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ 500 ಕೋಟಿ ಹಣ ಗಳಿಸಿದ್ದಾರೆಂದು ಆರೋಪಿಸಿ ರೈತ ಮೋರ್ಚಾ ಸಂಘಟನೆಯ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ಸೋಮವಾರ ಲೋಕೋಪಯೋಗಿ ಇಲಾಖೆಯಲ್ಲಿ ಸಚಿವ ರೇವಣ್ಣ ಸುಮಾರು 800 ಜನರಿಗೆ ಭಡ್ತಿ ನೀಡಿದ್ದು, ಕೆಲವರನ್ನು ವರ್ಗಾವಣೆಗೆ ಅನುಮೋದಿಸಿದ್ದಾರೆ. ಅದಕ್ಕೆ ಅವರು 500 ಕೋಟಿ ಹಣ ಪಡೆದಿದ್ದಾರೆ ಎಂದು ಲಿಂಗಮೂರ್ತಿ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ವರ್ಗಾವಣೆಗಾಗಿ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ಸಮುದಾಯದ ಎಂಜಿನಿಯರ್‌ಗಳು ಕಳೆದೊಂದು ವರ್ಷದಿಂದ ಕಾಯುತ್ತಿದ್ದರು. ಇದೀಗ ಹಣ ಪಡೆದು ಮನಬಂದಂತೆ ವರ್ಗಾವಣೆ ಮಾಡಿದ್ದಾರೆ ಹಾಗೂ ಭಡ್ತಿ ನೀಡಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ಮಾಡಬೇಕು. ಸರಕಾರ ಮಾಡಿರುವ ವರ್ಗಾವಣೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News