ಹಿರಿಯ ಪತ್ರಕರ್ತ ರಾಮಚಂದ್ರ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ

Update: 2019-07-12 17:49 GMT

ಬೆಂಗಳೂರು, ಜು. 12: ದಿ ಹಿಂದೂ ಪತ್ರಿಕೆಯ ಸಂಪಾದಕೀಯ ಪ್ರತಿನಿಧಿ ಆಗಿದ್ದ ಹಿರಿಯ ಪತ್ರಕರ್ತ ಸಿ.ಎಂ.ರಾಮಚಂದ್ರ ಅವರ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ವ್ಯಕ್ತಪಡಿಸಿದ್ದಾರೆ.

96ವರ್ಷಗಳ ತುಂಬು ಜೀವನ ನಡೆಸಿದ ಅವರು ಕೊನೆಯವರೆಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜಕೀಯ ವಿದ್ಯಮಾನಗಳ ವಸ್ತುನಿಷ್ಠ ವಿಶ್ಲೇಷಣೆ, ಆಡಳಿತ, ನೀತಿ ನಿರೂಪಣೆ ಕುರಿತು ಅಧಿಕಾರಯುತವಾಗಿ ಬರೆಯಬಲ್ಲವರಾಗಿದ್ದರು.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ತಮ್ಮ ಪತ್ರಿಕಾ ವೃತ್ತಿ ಪ್ರಾರಂಭಿಸಿದ ಅವರು ದಿ ಹಿಂದೂ ಪತ್ರಿಕೆಯಲ್ಲಿ ನಾಲ್ಕು ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ್ದು, ನಾಡಿನ ಅತ್ಯಂತ ಹಿರಿಯ ಹಾಗೂ ಮೇರು ವ್ಯಕ್ತಿತ್ವದ ಪತ್ರಕರ್ತರು ಅವರಾಗಿದ್ದರು ಎಂದು ಕುಮಾರಸ್ವಾಮಿ ಸ್ಮರಿಸಿದ್ದಾರೆ.

ವಿವಿಧ ವಿಷಯಗಳ ಕುರಿತು 15 ಪುಸ್ತಕಗಳನ್ನು ಬರೆದಿರುವ ಅವರ ಪುಸ್ತಕವೊಂದು ಒಂದೂವರೆ ತಿಂಗಳ ಹಿಂದೆಯಷ್ಟೇ ಸ್ಪೀಕರ್ ರಮೇಶ್‌ಕುಮಾರ್ ಅವರು ಬಿಡುಗಡೆ ಮಾಡಿದ್ದು, ಇನ್ನೂ ಹಸಿರಾಗಿರುವಾಗಲೇ ಅವರ ನಿಧನದ ವಾರ್ತೆ ದುಃಖ ತಂದಿದೆ ಎಂದು ತಿಳಿಸಿದ್ದಾರೆ.

ಅವರ ನಿಧನದಿಂದ ಮೌಲ್ಯಾಧಾರಿತ ಪತ್ರಿಕೋದ್ಯಮದ ಕೊಂಡಿಯೊಂದು ಕಳಚಿದಂತಾಗಿದೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News