ರಸ್ತೆ ಅಪಘಾತ; ಕೂಲಿ ಕಾರ್ಮಿಕ ಮೃತ್ಯು

Update: 2019-07-12 17:50 GMT

ಬೆಂಗಳೂರು, ಜು.12: ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಬಿಹಾರ ಮೂಲದ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಬಾಣಸವಾಡಿಯ ಹೆಣ್ಣೂರು ಬಂಡೆ ಬಳಿ ಶುಕ್ರವಾರ ಈ ಘಟನೆ ನಡೆದಿದ್ದು, ಹೊರಮಾವು ನಿವಾಸಿ ವಿಕಾಸ್ ಕುಮಾರ್ ಸಾಹು(30) ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ.

ಬಿಹಾರದಿಂದ ಕೂಲಿ ಅರಸಿ ಬಂದಿದ್ದ ವಿಕಾಸ್ ಕುಮಾರ್, ಅಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಮನೆಯಿಂದ ಹೆಣ್ಣೂರು ಬಂಡೆ ಮಾರ್ಗವಾಗಿ ಸ್ಕೂಟರ್‌ನಲ್ಲಿ ಕೆಲಸಕ್ಕೆ ಶುಕ್ರವಾರ ಬೆಳಗ್ಗೆ 7:30ರ ವೇಳೆ ಹೋಗುತ್ತಿದ್ದ ವಿಕಾಸ್ ಕುಮಾರ್‌ಗೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ವಿಕಾಸ್ ಕುಮಾರ್‌ಗೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಟಿಪ್ಪರ್ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಬಾಣಸವಾಡಿ ಸಂಚಾರ ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News