ನಿನ್ನೆ ಮತ್ತು ನಾಳೆಯ ಯೋಚನೆಗಳಿಗೆ ಗೀಚನು ಹಾಕು

Update: 2019-07-13 15:45 GMT

ಪ್ರತಿಯೊಬ್ಬರೂ ನಮ್ಮ ಭವಿಷ್ಯದ ಜೀವನ ಉತ್ತಮವಾಗಿರಲೆಂದು ಬಯಸುವುದು ತಪ್ಪೇನಿಲ್ಲ. ಆದರೆ ಮುಂದಿನ ಭವಿಷ್ಯಕ್ಕಾಗಿ ಇಂದಿರುವ ರಸ ನಿಮಿಷಗಳನ್ನು ಅನುಭವಿಸದೆ ಸದಾ ಮುಂದೇನಾಗುತ್ತೆ, ಮುಂದೇನಾಗುತ್ತೆ ಎಂದು ಚಿಂತಿಸುವವರೆ ಹೆಚ್ಚಾಗಿದ್ದಾರೆ. ಅದಕ್ಕಾಗಿ ಪಡಬಾರದ ಕಷ್ಟ ಪಡುತ್ತ ಜೀವನದಲ್ಲಿ ಯಶಸ್ಸು ಪಡೆದವರು ಇದ್ದಾರೆ. ಜೀವನದ ಉತ್ತುಂಗದಲ್ಲಿದ್ದಾಗ ಯಾವುದೇ ಸುಖವನ್ನು ಅನುಭವಿಸದೆ ಇಹ ಲೋಕ ತ್ಯಜಿಸಿದವರು ಇದ್ದಾರೆ. ಅದನ್ನೇ ವಿಧಿಬರಹ ಎನ್ನುವುದು. ವಾರದದಲ್ಲಿ ಏಳು ದಿನಗಳಿದ್ದರೂ ಇರುವುದು ಮಾತ್ರ ಎರಡೇ ದಿನಗಳು. ಅದು ಹೇಗೆಂದುಕೊಳ್ಳುವಿರಾ? ಒಮ್ಮೆ ಯೋಚಿಸಿ. ನಾವು ನೀವೆಲ್ಲ ಎರಡೇ ದಿನಗಳ ಬಗ್ಗೆ ಯೋಚಿಸುತ್ತಾ ಆಕಾಶವೇ ತಲೆ ಮೇಲೆ ಬಿದ್ದಂತೆ ಕೂಡುತ್ತೇವೆ. ಆ ಎರಡು ದಿನಗಳೆಂದರೆ ಒಂದು ನಾಳೆ ಇನ್ನೊಂದು ನಿನ್ನೆ. ಈ ನಾಳೆ ಮತ್ತು ನಿನ್ನೆಗಳ ಬಗ್ಗೆಯೇ ಚಿಂತಿಸುತ್ತ ಕೂಡುತ್ತೇವೆ. ಹಾಗಾದರೆ ಯಾವ ದಿನಕ್ಕೆ ಚಿಂತೆ ಮಾಡಬೇಕು ? ಹೇಗೆ ಮಾಡಬೇಕು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಂಡು ನಡೆಯಬೇಕು.

ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ

ಭವಿಷಿಯವ ಚಿಂತಿಸದೆ ಬದುಕ ನೂಕುತಿರು

ವಿವರಗಳ ಜೋಡಿಸುವ ಯಜಮಾನ ಬೇರಿಹನು

ಸವೆಸು ನೀಂ ಜನುಮವನು -ಮಂಕುತಿಮ್ಮ ॥

ಎಂದು ಡಿವಿಜಿಯವರು ಹೇಳುವಂತೆ ನಾವೆಲ್ಲ ನಮ್ಮ ಮುಂದಿನ ಭವಿಷ್ಯ, ನಮ್ಮ ಮಕ್ಕಳ ಭವಿಷ್ಯ, ನಮ್ಮ ಕುಟುಂಬದ ಸದಸ್ಯರ ಭವಿಷ್ಯ ಹೇಗಿರುತ್ತದೆಂದು ಪ್ರತಿದಿನ, ಪ್ರತಿಕ್ಷಣ ಚಿಂತಿಸುತ್ತಲೇ ಇರುತ್ತೇವೆ. ಇಂದಿನ ಬಗ್ಗೆ ಯೋಚಿಸದೆ ನಾಳೆ ಹೇಗೆಂದು ಯೋಚಿಸುತ್ತ ಜೀವನ ಕಳೆಯುತ್ತೇವೆ. ಅದಕ್ಕಾಗಿ ಜ್ಯೋತಿಷ್ಯ ವಾಸ್ತುಶಾಸತ್ತ, ಸಂಖ್ಯಾಶಾಸ್ತ್ರ, ಜಾತಕ, ಕುಂಡಲಿಯ ಮೊರೆ ಹೋಗುತ್ತಾ ಭವಿಷ್ಯದಲ್ಲಿ ಏನಾಗಬಹುದೆಂಬುದರ ಬಗ್ಗೆ ಮುನ್ನೋಟವನ್ನು ನೋಡುತ್ತೇವೆ. ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಾ ವರ್ತಮಾನದ ಜೀವನವನ್ನು ಆನಂದಮಯವಾಗಿ ಕಳೆಯದೆ ಹಲುಬುತ್ತಾ ಮತ್ತೊಬ್ಬರಂತಾಗಲು ಪ್ರಯತ್ನಿಸಿ, ಇಂದಿನ ರಸಮಯ ಜೀವನದ ಸುಖವನ್ನು ಮರೆಯುತ್ತೇವೆ. ಅಸ್ಥಿರವಾದ ಸಂಪತ್ತನ್ನು ವೃದ್ಧಿಸಲು ನಾಳೆಯ ಸುಂದರ ಭವಿಷ್ಯಕ್ಕಾಗಿ ಹಾತೊರೆದು ಹಗಲಿರುಳು ದುಡಿಯುತ್ತೇವೆ. ನಾಳೆ ಎಂಬುದು ನಮ್ಮ ಪಾಲಿಗೆ ಇದೆಯೋ ಇಲ್ಲವೋ ತಿಳಿದಿಲ್ಲ. ಆ ಭವಿಷ್ಯದ ವಿವರಗಳನ್ನು ಸೃಷ್ಟಿಕರ್ತ ಭಗವಂತ ನಾವು ಜನಿಸಿದಾಗಲೆ, ನಮ್ಮ ಹಣೆಬರಹದ ರೂಪದಲ್ಲಿ ದಾಖಲಿಸಿದ್ದಾನೆ. ಅವನ ಅಣತಿಯಂತೆ ಜೀವನವನ್ನು ಸುಖಿಸುತ್ತಾ ಸವೆಸಿ ಸಾರ್ಥಕತೆ ಪಡೆಯಬೇಕು. ಚಿತಾ ದಹತಿ ನಿರ್ಜೀವಂ, ಚಿಂತಾ ದಹತಿ ಸಜೀವಂ ಎಂಬಂತೆ ಚಿಂತೆ ಮತ್ತು ಚಿತೆಗಿರುವ ಸೊನ್ನೆಯ ವ್ಯತ್ಯಾಸವು ಹೇಗೆ ಪರಿಣಾಮ ಬೀರುತ್ತದೆಂಬುದನ್ನು ಗಮನಿಸಿದಾಗ, ಚಿತೆಯು ಜೀವವಿಲ್ಲದ ಈ ನಶ್ವರ ಶರೀರವನ್ನು ಸುಟ್ಟರೆ, ಚಿತೆಯ ಪದದ ಮಧ್ಯದಲ್ಲಿ ಸೊನ್ನೆಯನ್ನು ಸೇರಿಸಿದಾಗ ಉಂಟಾಗುವ ಚಿಂತೆಯು ಜೀವವಿರುವ ಈ ಶರೀರವನ್ನೇ ಸುಟ್ಟು ಹಾಕಿ ಆನಂದದ ಬದುಕನ್ನು ಮುದುಡಿಸಿ ಬಿಡುತ್ತದೆ. ನಿನ್ನೆ ಘಟಿಸಿಹೋದ ಎಲ್ಲ ಕ್ಷಣಗಳು ಕಾಲಗರ್ಭದಲ್ಲಿ ಲೀನವಾಗಿ ಬಿಡುತ್ತವೆ. ಅವು ಎಂದಿಗೂ ಮತ್ತೆ ನಮ್ಮ ಕೈ ಸೇರುವುದಿಲ್ಲ. ಅವುಗಳಲ್ಲಿ ಒಳ್ಳೆಯ ಅಥವಾ ಕೆಟ್ಟ ಅಂಶಗಳಿರಬಹುದು. ಅವುಗಳಿಂದ ನಮ್ಮ ಬದುಕಿಗೆ ಪೂರಕವಾಗಿರಲೂಬಹುದು ಅಥವಾ ಮಾರಕವಾಗಿರಲೂಬಹುದು. ಪೂರಕ ಅಂಶಗಳಿಂದ ಸಂಪೂರ್ಣ ಮೈಮರೆತು ಬಿಡುವುದಾಗಲಿ, ಮಾರಕ ಅಂಶಗಳಿಂದ ಚಿಂತಿಸಿ ಕೂಡುವುದಾಗಲಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಅವೆಲ್ಲವುಗಳು ‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎನ್ನುವ ಮಾತಿನಂತೆ ನಮ್ಮ ಬಾಯಿಂದ ಜಾರಿ ಹೋದ ಮಾತು, ಕೈಯಿಂದ ಜಾರಿ ಹೋಗಿ ಒಡೆದ ಮುತ್ತು ನಾವು ಎಷ್ಟೆ ಪ್ರಯತ್ನಿಸಿದರೂ ಅವುಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಇನ್ನು ನಮ್ಮ ಕಣ್ಮುಂದೆಯಿರುವ ಇಂದಿನ ಬಗ್ಗೆ ಯೋಚಿಸದೆ ನಾಳೆಗಳ ಬಗ್ಗೆಯೇ ಯೋಚಿಸುತ್ತಾ ಕೂಡುತ್ತೇವೆ. ಹತ್ತು ಹಲವಾರು ಯೋಚನಾ ಸುರುಳಿಗಳು ಭಯ, ಆತಂಕದಿಂದ ಬೆಚ್ಚಿ ಬೀಳಿಸುತ್ತಾ ನಮ್ಮನ್ನೇ ಸುತ್ತುವರೆದು ಮುಂದಿನ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡುತ್ತವೆ. ಜೀವನವೆಂಬುದು ನೀರ ಮೇಲಿನ ಗುಳ್ಳೆಯಂತೆ ಯಾವಾಗ ಬೇಕಾದರೂ ಒಡೆಯಬಹುದಲ್ಲವೆ?.

ಹಾಗಾಗಿ ನಾಳೆಯ ಭಯ ಆತಂಕವನ್ನು ದೂರ ಮಾಡಿ ಸರಿದು ಹೋಗುತ್ತಿರುವ ಸಮಯವನ್ನು ಗೌರವಿಸಿ, ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸಬೇಕು. ಈ ಕ್ಷಣದ ಸಮಯಕ್ಕೆ ಗೌರವ ನೀಡಿದರೆ ನಮ್ಮನ್ನು ಗೌರವಿಸುವ ಸಮಯ ಬಂದೆ ಬರುತ್ತದೆ. ನಮ್ಮ ನಮ್ಮ ಕಾಯಕದಲ್ಲಿ ಸ್ವಾಮಿ ನಿಷ್ಠೆ, ಸೇವಾ ಮನೋಧರ್ಮ, ನಿಸ್ವಾರ್ಥತೆ, ಪ್ರೀತಿ ಸಂತೃಪ್ತಿ ಹಾಗೂ ಸಮಯ ಪ್ರಜ್ಞೆಯೊಂದಿಗೆ ನಮ್ಮ ಪ್ರಯತ್ನವೂ ಜೊತೆಯಾದರೆ ನಾಳೆಯ ಭವಿಷ್ಯ ಖಂಡಿತವಾಗಿಯೂ ಉತ್ತಮವಾಗಿರುತ್ತದೆ. ಅಲ್ಲದೆ ನಿನ್ನೆಯ ತಪ್ಪುಗಳಿಂದ ಪಾಠ ಕಲಿತು ಇಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತ ಗೆಲುವಿನ ನಗೆ ಬೀರಬಹುದು. ಭಗವಂತ ಕರುಣಿಸಿದ ಈ ಜೀವನವನ್ನು ನಿನ್ನೆಯ ಕಹಿನೆನಪುಗಳು ಮತ್ತು ನಾಳೆ ಹೇಗೆಂಬ ಯೋಚನೆಗಳ ಸಾಗರದಲ್ಲಿ ಮುಳುಗಿಸದೆ, ಇಂದಿನ ಆನಂದದ ತೆರೆಗಳ ಮೇಲೆ ತೇಲಿಸಿ ಸಂಭ್ರಮಿಸೋಣ. ನಾಳೆ ಮಾಡುವ ಕಾರ್ಯವನ್ನು ಇಂದೆ ಮಾಡು. ಇಂದು ಮಾಡುವುದನ್ನು ಈಗಲೇ ಮಾಡು, ಕರ್ಮನ್ಯೆ ವಾಧಿಕಾ ರಸ್ತೇನ ಮಾ ಪಲೇಶು ಕದಾಚನ ಎಂಬಂತೆ ನಾವು ಮಾಡುವ ಸಕರ್ಮವು ನಮ್ಮ ಭವಿಷ್ಯವನ್ನು ತನ್ನಿಂದ ತಾನೆ ರೂಪಿಸುತ್ತದೆ. ಹಾಗಾಗಿ ನಿನ್ನೆ ಮತ್ತು ನಾಳೆಗಳ ಯೋಚನೆಗಳಿಗೆ ಗೀಚನು ಹಾಕಿ ಇಂದಿನ ದಿನವನ್ನು ಆನಂದದಿಂದ ಕಳೆದು ಜೀವನ ಸಾರ್ಥಕತೆ ಪಡೆಯೋಣ.

Writer - ರವಿ ರಾ ಕಂಗಳ, ಕೊಂಕಣ ಕೊಪ್ಪ

contributor

Editor - ರವಿ ರಾ ಕಂಗಳ, ಕೊಂಕಣ ಕೊಪ್ಪ

contributor

Similar News