ಸ್ತ್ರೀವಾದದಿಂದ ಉತ್ತಮ ಸಾಮಾಜಿಕ ಚಿತ್ರಣ ನಿರ್ಮಾಣ: ಡಾ.ವಸುಂಧರಾ ಭೂಪತಿ

Update: 2019-07-14 13:17 GMT

ಬೆಂಗಳೂರು, ಜು.14: ಸ್ತ್ರೀವಾದದ ಮೂಲಕ ಜಗತ್ತಿನಲ್ಲಿ ಉತ್ತಮವಾದ ಸಾಮಾಜಿಕ ಚಿತ್ರಣ ನಿರ್ಮಾಣವಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಚಾಮರಾಜಪೇಟೆಯ ಕಸಾಪದಲ್ಲಿ ಹಿತೈಷಿಣಿ ಅಂತರ್ ಜಾಲ ಮಹಿಳಾ ಪತ್ರಿಕೆ ಆಯೋಜಿಸಿದ್ದ ತಾರಾಬಾಯಿ ಶಿಂಧೆ ಅವರ ‘ಸ್ತ್ರೀ-ಪುರುಷ ತುಲನೆ’ ಕನ್ನಡ ಅನುವಾದ (ಡಾ.ಎನ್.ಗಾಯತ್ರಿ) ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ತ್ರೀವಾದ ಬಲಿಷ್ಠ ಆಗುವವರೆಗೂ ಹೆಣ್ಣನ್ನು ತಿರಸ್ಕಾರ ಮಾಡುವ ಮನೋಭಾವ ನಿಲ್ಲುವುದಿಲ್ಲ. ಅಲ್ಲದೆ ಇತ್ತೀಚೆಗೆ ಸ್ತ್ರೀವಾದ ಎಲ್ಲ ಕ್ಷೇತ್ರಗಳಲ್ಲೂ ಹಬ್ಬಿರುವುದು ಶ್ಲಾಘನೀಯವಾದುದು ಎಂದು ಹರ್ಷ ವ್ಯಕ್ತಪಡಿಸಿದರು.

ತಾರಾಬಾಯಿ ಶಿಂಧೆ ಮಹಿಳೆಯರ ಸಾಮಾಜಿಕ ಸುಧಾರಣೆಗಾಗಿ ಶ್ರಮವಹಿಸಿದ್ದರು. ಮಹಿಳೆಯರ ಸಾಮಾಜಿಕ ಚಿತ್ರಣ ಬದಲಾದರೆ ಇಡೀ ದೇಶದ ಚಿತ್ರಣವೇ ಬದಲಾಗುತ್ತದೆ ಹಾಗೂ ಮಹಿಳೆಯರೇ ಮಹಿಳಾ ದೃಷ್ಠಿಕೋನದಲ್ಲಿ ಮಹಿಳೆಯನ್ನು ನೋಡುವುದರ ಬಗ್ಗೆ ಶಿಂಧೆ ತಿಳಿಸಿದ್ದಾರೆ ಎಂದರು.

ಇತ್ತೀಚೆಗೆ ಅನ್ಯ ಜಾತಿಯವರು ಪರಸ್ಪರ ಪ್ರೀತಿ ಮಾಡಿ ಮದುವೆಯಾದರೆ ಮರ್ಯಾದೆ ಹತ್ಯೆಗಳು ಮಾಡಲಾಗುತ್ತಿದೆ. ಪಿರಿಯಾಪಟ್ಟಣ ಪಂಚಾಯತ್ ಹಿಂದು ಮುಸ್ಲಿಂ ಪ್ರೀತಿಸಿದರೆ 50 ಸಾವಿರ ದಂಡ ಕಟ್ಟಬೇಕೆಂದು ಆದೇಶಿಸಿದೆ. ಇದು ಸಮಾಜದ ದುರಂತ. ಅಲ್ಲದೆ, ಈಗಿನ ಶಿಕ್ಷಣ ಕೇವಲ ಅಂಕ ಹಾಗೂ ಉದ್ಯೋಗ ಪಡೆಯುವುದಕ್ಕಾಗಿ ಇದೆ. ಶಿಕ್ಷಣವು ಮಾನವೀಯ ಗುಣ, ಸಾಮಾಜಿಕ ಬದ್ಧತೆ, ಚಿಂತನೆ ಹಾಗೂ ಆತ್ಮ ಗೌರವದ ಪ್ರತೀಕವಾಗಿಲ್ಲ ಎಂದು ವಿಷಾದಿಸಿದರು.

ಇನ್ನು, ಹಿತೈಷಿಣಿ ಅಂತರ್ ಜಾಲ ಪತ್ರಿಕೆ ಒಂದು ವರ್ಷದಲ್ಲಿ ಓದುಗರ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿದ್ದು, ದೇಶದಲ್ಲೇ ಅಂತರ್ಜಾಲ ಮಹಿಳಾ ಚಿಂತನೆಯುಳ್ಳ ಪತ್ರಿಕೆ ಎಂಬ ಗುರುತನ್ನು ಹೊಂದಿದೆ. ಮಹಿಳೆಯರ ಹಿತ ಕಾಪಾಡುವಲ್ಲಿ ಹಿತೈಷಿಣಿ ಪ್ರಮುಖ ಪಾತ್ರವಹಿಸಿದೆ. ಒಂದೇ ಕ್ಷಣದಲ್ಲಿ ಇಡೀ ಪ್ರಪಂಚದ ಜನರೆಲ್ಲ ಹಿತೈಷಿಣಿಯನ್ನು ಓದುತ್ತಾರೆ ಎಂದು ಹೇಳಿದರು.

ಡಾ.ನೇಮಿಚಂದ್ರ ಮಾತನಾಡಿ, 139 ವರ್ಷಗಳ ಹಿಂದೆಯೇ ಒಬ್ಬ ಮಹಿಳೆ ಏಕಾಂಗಿಯಾಗಿ ಸ್ತ್ರೀವಾದದ ಬಗ್ಗೆ ಪುಸ್ತಕವನ್ನು ಬರೆದಿದ್ದು, ಈಗಲೂ ಅದು ಪ್ರಸ್ತುತವಾಗಿದೆ. ಪುಸ್ತಕ ಬರೆದ ನಂತರ ಶಿಂಧೆ ಈ ಸಮಾಜವನ್ನು ಹೇಗೆ ಎದುರಿಸಿದರು ಎಂಬುದನ್ನು ನಾವು ಅರಿಯಬೇಕು. ಅಲ್ಲದೆ, ದೇಶದ ಎಲ್ಲ ಮಹಿಳೆಯರ ಗೌರವವನ್ನು ಕಾಪಾಡುವ ಉದ್ದೇಶದಿಂದ, ಸ್ತ್ರೀಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯುವುದಕ್ಕಾಗಿ ಹಾಗೂ ಮಹಿಳೆಯರ ಆತ್ಮ ಗೌರವ ಕಾಪಾಡುವ ಉದ್ದೇಶದಿಂದ ಈ ಪುಸ್ತಕ ಬರೆದೆ ಎಂದು ಶಿಂಧೆ ಹೇಳಿಕೊಂಡಿದ್ದಾರೆ ಎಂದು ನೆನಪಿಸಿದರು.

ಬ್ರೀಟಿಷರ ಗುಲಾಮಗಿರಿಗಿಂತ ಹೆಣ್ಣಿನ ಮೇಲೆ ಗಂಡಿನ ಗುಲಾಮಗಿರಿಯೇ ಅಧಿಕವಾಗಿದೆ. ಹೀಗಾಗಿಯೇ ಬ್ರೀಟಿಷ್ ಸರಕಾರವೇ ಇರಬೇಕಿತ್ತು. ಸ್ತ್ರೀ ವಿರೋಧಿಗಳಿಗಾಗಿ ಸರಕಾರ ಜೈಲು ಕಟ್ಟಿಸಿ ಅವರನ್ನು ಅಲ್ಲಿ ಇರಿಸಿದ್ದರೆ, ಉಳಿದ ಸಮಾಜ ಚೆನ್ನಾಗೇ ಇರುತ್ತದೆ ಎಂದು ಶಿಂಧೆ ಹೇಳಿದ ಮಾತನ್ನು ಮೆಲಕು ಹಾಕಿದರು.

ದೇಶದ ಸ್ತ್ರೀವಾದದ ಮೊದಲ ಪಠ್ಯ ತಾರಾಬಾಯಿ ಶಿಂಧೆಯವರ ‘ಸ್ತ್ರೀ- ಪುರುಷ ತುಲನೆ’ಯಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಪಿತೃಪ್ರಧಾನ ವ್ಯವಸ್ಥೆಯನ್ನು ತಾರಾಬಾಯಿ ಶಿಂಧೆ ವಿರೋಶಿಸಿದ್ದರು.

- ಡಾ.ಎನ್.ಗಾಯತ್ರಿ, ಪುಸ್ತಕದ ಅನುವಾದಕಿ

ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಸಂವಿಧಾನ ರಚನೆ ಮಾಡಿದಕ್ಕೆ ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಅದನ್ನೇ ಅಂಬೇಡ್ಕರ್ ಬರೆದ ಸಂವಿಧಾನವೆಂದು ಕರೆಯುವುದು ತಪ್ಪು. ಇದು ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಬರೆದದ್ದು ಎನ್ನುವ ಅಪಾಯವಿದೆ. ಭಾರತದ ಸಂವಿಧಾನವನ್ನು ದೇಶದ ಎಲ್ಲ ಜನಪ್ರತಿನಿಧಿಗಳು ಚರ್ಚಿಸಿ ರಚಿಸಲಾಗಿದೆ.

- ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News