ವಿದ್ಯಾರ್ಥಿಗಳು ದೇಶಪ್ರೇಮದ ಜತೆಗೆ ಶಿಕ್ಷಣದ ಮೌಲ್ಯಗಳನ್ನು ಅಳವಡಿಸಿಕೊಳ್ಳಲಿ: ನ್ಯಾ.ಎನ್.ಕುಮಾರ್

Update: 2019-07-14 16:57 GMT

ಬೆಂಗಳೂರು, ಜು.14: ವಿದ್ಯಾರ್ಥಿಗಳು ದೇಶಪ್ರೇಮ, ಸಂಸ್ಕೃತಿ ಜತೆಗೆ ಶಿಕ್ಷಣದ ಮೌಲ್ಯಗಳನ್ನು ಅಳವಡಿಸಿಕೊಂಡರೆ, ಈ ದೇಶ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಹೇಳಿದ್ದಾರೆ.

ರವಿವಾರ ಉಲ್ಲಾಳ ಉಪನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ 10ನೆ ತರಗತಿ, 12ನೆ ತರಗತಿ ಸಿಬಿಎಸ್‌ಇ ಮತ್ತು ಪದವಿ ಪೂರ್ವ ವಿಭಾಗದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಅಂತಿಮವಾಗಿ ಜ್ಞಾನ, ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇವನ್ನು ಸಮ್ಮಿಲನಗೊಳಿಸಿ ತಮಗಾಗಿ ಸರ್ವವನ್ನೂ ನೀಡಿದ ಪೋಷಕರ ತ್ಯಾಗವನ್ನು ಮರೆಯದೆ ಅವರಿಗೆ ಇಳಿ ವಯಸ್ಸಿನಲ್ಲಿ ಬೇಕಾದ ಪ್ರೀತಿ, ವಾತ್ಸಲವ್ಯವನ್ನು ನೀಡುವಂತೆ ಅವರು ಪ್ರೇರಣೆ ನೀಡಿದರು.

ಭಾರತೀಯ ಸಂಸ್ಕೃತಿ ಹಾಗೂ ಇತಿಹಾಸದ ಮೇಲೆ ಬೆಳಕು ಚೆಲ್ಲುವುದರ ಮೂಲಕ, ಪೂರಾತನ ಭಾರತದ ಪ್ರಸಿದ್ಧ ನಳಂದ ಮತ್ತು ತಕ್ಷಶಿಲಾ ವಿವಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರಪಂಚದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ವಿದ್ಯೆಯನ್ನು ಅರಸುತ್ತಾ ಬರುತ್ತಿದ್ದರು ಎಂದು ತಿಳಿಸಿದರು. ಶಿಕ್ಷಣದ ಜೊತೆಗೆ ಮೌಲ್ಯಗಳನ್ನೂ ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಸಂತೋಷವನ್ನು ಹೊಂದುವ ಮೂಲಕ ಉನ್ನತ ಸಮಾಜ ನಿರ್ಮಾಣ ಮಾಡಬಹುದು. ನಮ್ಮ ಹೆಮ್ಮೆಯ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಬಗ್ಗೆ ಅರಿವು ಮೂಡಿಸಿದ ಅವರು, ಈ ಲಾಂಛನಗಳು ನಮ್ಮದೇ ಪ್ರತಿಬಿಂಬ ಎಂಬ ಅಂಶವನ್ನು ತಿಳಿಸಿದರು. ಇವುಗಳು ನಮ್ಮ ಗೌರವದ ಪ್ರತೀಕವಾಗಿದ್ದು, ನಾವು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಇದನ್ನು ಗೌರವಿಸಬೇಕೆಂದು ತಿಳಿಸಿದರು.

ಶಾಲೆಯ ಅಧ್ಯಕ್ಷ ರಾಜಗೋಪಾಲ್, ಪ್ರಾಂಶುಪಾಲ ವಿಜಯಕೃಷ್ಣ ಸೇರಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ 10ನೆ ತರಗತಿ ಸಿಬಿಎಸ್‌ಇ ವಿಭಾಗದಲ್ಲಿ ಬೆಂಗಳೂರು ವಲಯದಲ್ಲಿ ಪ್ರಥಮ ರ್ಯಾಂಕ್ ಹಾಗೂ ರಾಷ್ಟ್ರಮಟ್ಟದಲ್ಲಿ ಮೂರನೆ ರ್ಯಾಂಕ್ ಪಡೆದಿದ್ದ ವಿದ್ಯಾರ್ಥಿನಿ ಪೃಥ್ವಿ ಪಿ ಶೈಣೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News