'ಕೈ' ಜೊತೆ ಕೆಪಿಜೆಪಿ ವಿಲೀನ ವಿಚಾರ: ಶಾಸಕ ಆರ್.ಶಂಕರ್ ವಿರುದ್ಧ ಸ್ಪೀಕರ್ ಗೆ ದೂರು

Update: 2019-07-16 14:50 GMT
ಶಾಸಕ ಆರ್.ಶಂಕರ್

ಬೆಂಗಳೂರು, ಜು.16: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಕೆಪಿಜೆಪಿ ಪಕ್ಷದ ಶಾಸಕ ಆರ್.ಶಂಕರ್ ವಿರುದ್ಧ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಕಚೇರಿಯಲ್ಲಿ ಮಂಗಳವಾರ ದೂರು ಸಲ್ಲಿಕೆಯಾಗಿದೆ.

ಪಕ್ಷದ ನಿಯಮ ಉಲ್ಲಂಘಿಸಿರುವವರ ವಿರುದ್ಧ ಕೆಪಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸ್ಥಾಪಕ ಮಹೇಶ್ ಗೌಡ, ಇಂದು ವಿಧಾನಸೌಧದಲ್ಲಿರುವ ಸ್ಪೀಕರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಮಹೇಶ್ ಗೌಡ, ಪಕ್ಷದ ಗಮನಕ್ಕೆ ತರದೆ ಆರ್.ಶಂಕರ್, ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದಾರೆ. ವಿಲೀನ ಕುರಿತಂತೆ ಸ್ಪೀಕರ್‌ಗೆ ಪತ್ರ ಬರೆದಿರುವುದು ಸರಿಯಲ್ಲ. ಇದನ್ನು ಮಾನ್ಯ ಮಾಡಬಾರದೆಂದು ಸ್ಪೀಕರ್ ಕಚೇರಿಗೆ ದೂರು ನೀಡಲಾಗಿದೆ ಎಂದರು.

ಜಿಲ್ಲಾ, ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಆನಂತರ ಪಕ್ಷವನ್ನು ವಿಲೀನ ಮಾಡಬೇಕೆಂಬ ನಿಯಮವಿದೆ. ಆದರೆ, ಆರ್.ಶಂಕರ್ ಯಾವುದೇ ರೀತಿ ಚರ್ಚೆ ನಡೆಸದೇ ವಿಲೀನ ಮಾಡಲು ಮುಂದಾಗಿರುವುದು ಸರಿಯಲ್ಲ. ಹಾಗಾಗಿ, ವಿಲೀನದ ಬಗ್ಗೆ ಶಂಕರ್ ಕೊಟ್ಟಿರುವ ಪತ್ರವನ್ನು ಮಾನ್ಯ ಮಾಡಬಾರದು ಎಂದು ಸ್ಪೀಕರ್‌ಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.

ಶಂಕರ್ ಬಾಹ್ಯ ಬೆಂಬಲ ನೀಡಿದ್ದರೂ ಅದು ಅವರ ವೈಯಕ್ತಿಕ ವಿಚಾರ. ವಿಲೀನ ಕುರಿತಂತೆ ಪಕ್ಷ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎನ್ನುವ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ನಾಳೆ ಸಂಜೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹೇಶ್ ಗೌಡ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News