ಶಾಸಕ ನಾಗೇಂದ್ರ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಬೆಂಗಳೂರು, ಜು.16: ಲಘು ಹೃದಯಾಘಾತವಾದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರರನ್ನು ಭೇಟಿ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು.
ರವಿವಾರ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ನಾಗೇಂದ್ರ ಅವರ ಹೃದಯಕ್ಕೆ ಸ್ಟಂಟ್ಗಳನ್ನು ಅಳವಡಿಸಲಾಗಿದ್ದು, ವೈದ್ಯರ ಸೂಚನೆ ಮೇರೆಗೆ ಆಸ್ಪತ್ರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ಆಸ್ಪತ್ರೆಗೆ ಹೋಗಿದ್ದರು.
ಪುಟ್ಟ ಅಭಿಮಾನಿಯ ಸಂತಸ: ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಸುದ್ದಿ ಕೇಳಿ, ಅಲ್ಲೆ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನೊಬ್ಬ ನಾಗೇಂದ್ರ ಇರುವ ಕೊಠಡಿಗೆ ಓಡೋಡಿ ಬಂದ ಘಟನೆ ಜರುಗಿತು.
ತ್ರಿಷಾರ್ ಎಂಬ 9 ವರ್ಷದ ಬಾಲಕ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು, ಇದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಶಾಸಕ ನಾಗೇಂದ್ರ ಆರೋಗ್ಯ ವಿಚಾರಿಸಲು ಸಿದ್ದರಾಮಯ್ಯ ಬರುತ್ತಿರುವ ಸುದ್ದಿ ಕೇಳಿ, ಆತ ನಾಗೇಂದ್ರ ಇರುವ ಕೊಠಡಿಗೆ ಹೋಗಿದ್ದಾನೆ. ಅಲ್ಲದೆ, ಸಿದ್ದರಾಮಯ್ಯರನ್ನು ಕಂಡು ಹರ್ಷ ವ್ಯಕ್ತಪಡಿಸಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟನು.
ಇದೇ ವೇಳೆ ಬಾಲಕನ ಆರೋಗ್ಯದ ಬಗ್ಗೆಯೂ ವಿಚಾರಿಸಿದ ಸಿದ್ದರಾಮಯ್ಯ, ಕೆಲಕಾಲ ಆತನೊಂದಿಗೆ ಮಾತುಕತೆ ನಡೆಸಿ ಕಳುಹಿಸಿಕೊಟ್ಟರು.