ಐಸಿಸಿ ‘ಬೌಂಡರಿ ನಿಯಮ’ ಟೀಕಿಸಿದ ಮಾಜಿ ಆಟಗಾರರು
ಮುಂಬೈ, ಜು.16: ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಬೌಂಡರಿ ನಿಯಮ ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡ ಮೊತ್ತ ಮೊದಲ ಬಾರಿ ವಿಶ್ವಕಪ್ ಎತ್ತಿ ಹಿಡಿಯಲು ನೆರವಾಗಿದೆ. ಐಸಿಸಿಯ ಬೌಂಡರಿ ನಿಯಮಕ್ಕೆ ಎಲ್ಲೆಡೆ ತೀವ್ರ ಟೀಕೆ ವ್ಯಕ್ತವಾಗಿದೆ. ರೋಹಿತ್ ಶರ್ಮಾ, ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ಬ್ರೆಟ್ ಲೀ ಹಾಗೂ ಯುವರಾಜ್ ಸಿಂಗ್ ಐಸಿಸಿಯ ಬೌಂಡರಿ ನಿಯಮವನ್ನು ಟೀಕಿಸಿದ್ದಾರೆ.
ಫೈನಲ್ ಪಂದ್ಯ ಹಾಗೂ ಸೂಪರ್ ಓವರ್ ಎರಡೂ ಟೈಗೊಂಡ ಸಂದರ್ಭದಲ್ಲಿ ಗರಿಷ್ಠ ಬೌಂಡರಿ ಗಳಿಸಿದ್ದ ತಂಡ ವಿಶ್ವಕಪ್ ವಿಜಯಿ ಎಂದು ಐಸಿಸಿ ಘೋಷಿಸಿತ್ತು. ಒಟ್ಟು 26 ಬೌಂಡರಿ ಗಳಿಸಿದ್ದ ಇಂಗ್ಲೆಂಡ್ಗೆ ಚೊಚ್ಚಲ ಪ್ರಶಸ್ತಿ ಒಲಿದುಬಂದಿತ್ತು.
ಐಸಿಸಿ ನಿಯಮವನ್ನು ಟ್ವಿಟರ್ನಲ್ಲಿ ಮೂದಲಿಸಿದ ಬಾಲಿವುಡ್ ಹಿರಿಯ ನಟ ಬಚ್ಚನ್, ‘‘ನಿಮ್ಮ ಬಳಿಯೂ 2,000 ರೂ., ನನ್ನ ಬಳಿಯೂ 2,000 ರೂ. ಇದೆ. ನಿಮ್ಮ ಬಳಿ 2,000 ರೂ. ನೋಟು ಇದೆ. ನನ್ನ ಬಳಿ 500 ರೂ.ನ 4 ನೋಟುಗಳಿವೆೆ. ಆಗ ಯಾರು ಶ್ರೀಮಂತರು? ಐಸಿಸಿ ಪ್ರಕಾರ 500 ರೂ.ನ 4 ನೋಟುಗಳನ್ನು ಹೊಂದಿರುವ ವ್ಯಕ್ತಿಯೇ ಶ್ರೀಮಂತ ಎಂದು ಟ್ವೀಟ್ ಮಾಡಿದ್ದಾರೆ.
ನಟ, ರಾಜಕಾರಣಿ ಪರೇಶ್ ರಾವಲ್ ಕೂಡ ಐಸಿಸಿಯನ್ನು ಟೀಕಿಸಿದ್ದು,‘‘ಎಂಎಸ್ ಧೋನಿಯ ಗ್ಲೋಸ್ ಬದಲಿಸುವ ಬದಲಿಗೆ, ಮೂರ್ಖ ಐಸಿಸಿ ತನ್ನ ಸೂಪರ್ ಓವರ್ ನಿಯಮಗಳನ್ನು ಬದಲಿಸಲಿ’’ ಎಂದು ಟ್ವೀಟ್ ಮಾಡಿದ್ದಾರೆ.