'ಭಾರತಕ್ಕೆ ಮರಳುತ್ತೇನೆ' ಎಂದು ಮಾತು ತಪ್ಪಿದ ಮನ್ಸೂರ್ ಖಾನ್

Update: 2019-07-17 16:42 GMT

ಬೆಂಗಳೂರು, ಜು.17: ತಾನು 24 ಗಂಟೆಯೊಳಗೆ ಭಾರತಕ್ಕೆ ವಾಪಸ್ಸು ಬರುವುದಾಗಿ ಸ್ವತಃ ಹೇಳಿಕೆ ನೀಡಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್, ಮತ್ತೊಮ್ಮೆ ಮಾತು ತಪ್ಪಿದ್ದಾನೆ.

ಮೂರು ದಿನಗಳ ಹಿಂದೆಯಷ್ಟೇ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಂದನ್ನು ಹರಿಬಿಟ್ಟಿದ್ದ ಮನ್ಸೂರ್ ಖಾನ್, ದಿನದ 24 ಗಂಟೆಯೊಳಗೆ ಭಾರತಕ್ಕೆ ಆಗಮಿಸುತ್ತಿದ್ದೇನೆ. ಜೊತೆಗೆ, ಕಾನೂನು ಮೇಲೆ ನನಗೆ ಗೌರವ ಇದೆ ಎಂದೆಲ್ಲಾ ಹೇಳಿದ್ದರು. ಆದರೆ, ಎರಡು ದಿನಗಳ ಕಾಲ ಕಳೆದರೂ, ಆತ ಪ್ರತ್ಯಕ್ಷವಾಗದೆ, ಮತ್ತೆ ತಲೆ ಮರೆಸಿಕೊಂಡಿದ್ದಾನೆ.

ಐಎಂಎ ಕಂಪೆನಿಯ ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಹೊತ್ತಿರುವ ಮನ್ಸೂರ್, ವಿದೇಶಕ್ಕೆ ಹಾರುವ ಮುನ್ನ ಆಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಆಗಾಗ್ಗೆ ವಿಡಿಯೊ ಮೂಲಕ ಮಾತನಾಡುತ್ತಿದ್ದ ಆತ, ಜು.15ರಂದು ಮತ್ತೊಂದು ವಿಡಿಯೊನಲ್ಲಿ ಮಾತನಾಡಿ, ಆರೋಗ್ಯ ಸರಿಯಿಲ್ಲ. ಕುಟುಂಬಸ್ಥರನ್ನು ಭೇಟಿ ಮಾಡಬೇಕು. ಹೂಡಿಕೆದಾರರ ಹಣ ವಾಪಸ್ಸು ಕೊಡಿಸಬೇಕು ಎಂದೆಲ್ಲಾ ಹೇಳಿದ್ದು ಮಾತ್ರವಲ್ಲದೆ, ಭಾರತಕ್ಕೆ ಮರಳುತ್ತಿದ್ದೇನೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News