ಜೆಡಿಎಸ್ ನ ಎಲ್ಲಾ ಶಾಸಕರಿಗೆ ವಿಪ್ ಜಾರಿ

Update: 2019-07-17 17:54 GMT

ಬೆಂಗಳೂರು, ಜು.17: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.18 ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿರುವ ಹಿನ್ನೆಲೆಯಲ್ಲಿ ಸರಕಾರದ ಪರ ಮತ ಚಲಾಯಿಸುವಂತೆ ಸೂಚಿಸಿ ಜೆಡಿಎಸ್ ನ ಎಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಲಾಗಿದೆ.

ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರಾದ ಎಚ್.ವಿಶ್ವನಾಥ್, ಕೆ.ಗೋಪಾಲಯ್ಯ ಹಾಗೂ ಕೆ.ಸಿ ನಾರಾಯಣಗೌಡರಿಗೆ ಪ್ರತ್ಯೇಕವಾಗಿ ವಿಪ್ ಜಾರಿಗೊಳಿಸಿ, ವಿಶ್ವಾಸಮತದ ಪರವಾಗಿ ಮತ ಚಲಾಯಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

'ವಿಶ್ವಾಸ ಮತದ ಚರ್ಚೆ ಪ್ರಾರಂಬವಾದ ದಿನದಿಂದ ಪ್ರಕ್ರಿಯೆ ಮುಗಿಯುವವರೆಗೆ ಸದನದಲ್ಲಿ ಹಾಜರಿರಬೇಕು ಹಾಗೂ ವಿಶ್ವಾಸಮತದ ಪರವಾಗಿ ಮತ ಚಲಾಯಿಸಬೇಕು. ಗೈರು ಹಾಜರಿ ಅಥವಾ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದಲ್ಲಿ ಪಕ್ಷಾಂತರ ನಿಷೇಧ ಕಾನೂನಿನಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ಸಂವಿಧಾನ ಅನುಚ್ಚೇದ-10 ರ ಪ್ರಕಾರ ಕ್ರಮಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದ್ದಾರೆ.

ಅತೃಪ್ತ ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ, ಮುಂಬೈನಲ್ಲಿ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದಾರೆ. ಆದರೆ, ಈವರೆಗೆ ಅವರ ರಾಜೀನಾಮೆಗಳನ್ನು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅಂಗೀಕರಿಸದೆ ಇರುವುದರಿಂದ, ಅವರಿಗೆ ವಿಪ್ ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News