ಒಂದು ಮತದ ಮೌಲ್ಯಕ್ಕಾಗಿ...

Update: 2019-07-18 18:28 GMT

ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ಮತದ ಮೌಲ್ಯ ಎಷ್ಟು? ಬಹುಶಃ ಈ ಪ್ರಶ್ನೆ ಸಂವಿಧಾನ ತಜ್ಞರನ್ನೂ ಕಂಗೆಡಿಸುತ್ತದೆ. ಕಾಲದಿಂದ ಕಾಲಕ್ಕೆ ನಿಗದಿತ ಸಂದರ್ಭದಲ್ಲಿ ಈ ದೇಶದ ಜನಸಾಮಾನ್ಯರು ತಮ್ಮ ಭವಿಷ್ಯದ ಮಾರ್ಗವನ್ನು ಅರಸುತ್ತಾ ಚಲಾಯಿಸುತ್ತಿರುವ ಮತ ಮೌಲ್ಯೀಕರಣಕ್ಕೊಳಗಾಗುವುದೇ ಆದರೆ ಈ ಮೌಲ್ಯದ ಮಾನದಂಡಗಳೇನು? ಮತದ ವಾಸ್ತವಿಕ ಮೌಲ್ಯಕ್ಕೂ, ಚುನಾವಣಾ ರಾಜಕಾರಣದಲ್ಲಿ ನಿರ್ಧರಿಸಲ್ಪಡುವ ರಾಜಕೀಯ ಮೌಲ್ಯಕ್ಕೂ, ನಮ್ಮ ದೇಶದ ಆಳುವ ವರ್ಗಗಳು ಮತ್ತು ಆಡಳಿತ ವ್ಯವಸ್ಥೆ ನಿಗದಿಪಡಿಸುವ ಮಾರುಕಟ್ಟೆ ಮೌಲ್ಯಕ್ಕೂ ಇರುವ ವ್ಯತ್ಯಾಸ ಮತ್ತು ಅಂತರವೇನು? ಬಹುಶಃ ಸಂವಿಧಾನ ತಜ್ಞರು ಈ ಪ್ರಶ್ನೆಗೆ ಉತ್ತರ ನೀಡಬಹುದು. ಮತದಾನ ನಮ್ಮ ಹಕ್ಕು ಎಂದು ಪ್ರತಿಪಾದಿಸುವ ನಾವು ಈ ಮತದಾನದ ಹಿಂದಿನ ವಾಸ್ತವಿಕ ಮೌಲ್ಯವನ್ನು ಗ್ರಹಿಸಲು ಪ್ರಯತ್ನಿಸಿದ್ದೇವೆಯೇ ಎಂದು ಪ್ರಶ್ನಿಸಿಕೊಂಡಾಗ ನಿರುತ್ತರರಾಗುತ್ತೇವೆ. ಏಕೆಂದರೆ ನಮ್ಮ ಮತಗಳು ಬಿಕರಿಯಾಗಿಬಿಟ್ಟಿವೆ. ಪಕ್ಷ ನಿಷ್ಠೆಗೆ, ವ್ಯಕ್ತಿ ನಿಷ್ಠೆಗೆ, ಅಸ್ಮಿತೆಗಳಿಗೆ, ಸಾಮುದಾಯಿಕ ನಿಷ್ಠೆಗೆ ಹರಿದು ಹಂಚಿಹೋಗಿರುವ ನಮ್ಮ ಮತಗಳು ಪ್ರಜಾತಂತ್ರ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಲೆಕ್ಕಿಸುತ್ತಲೇ ಇಲ್ಲ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

 ಮತದಾರರ ಈ ತಪ್ಪನ್ನು ಭಾರತದ ರಾಜಕೀಯ ಪಕ್ಷಗಳು, ನಾಯಕರು ಪದೇಪದೇ ಎತ್ತಿ ತೋರುತ್ತಲೇ ಇದ್ದಾರೆ. ''ನೀವು ನೀಡುವ ಮತದ ಮೌಲ್ಯವನ್ನು ನಾವು ಶಾಸನ ಸಭೆಯ ಆವರಣದಲ್ಲಿ ನಿರ್ಧರಿಸುತ್ತೇವೆ'' ಎಂದು ಘಂಟಾಘೋಷವಾಗಿ ಕೂಗುತ್ತಿರುವ ಶಾಸಕಾಂಗದ ಜನಪ್ರತಿನಿಧಿಗಳು ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗೆ ಇಂತಿಷ್ಟು ಮಾರುಕಟ್ಟೆ ದರ ವಿಧಿಸುವ ಮೂಲಕ ಮತ ಮತ್ತು ಮತದಾನದ ಮೌಲ್ಯಮಾಪನ ಮಾಡಲು ವಿಧಿವತ್ತಾದ ಮಾರ್ಗಗಳನ್ನೂ ರೂಪಿಸಿದ್ದಾರೆ. ನಾವೂ ಸಹ ಈ ಮೌಲ್ಯಮಾಪನವನ್ನು ಸಹಿಸಿಕೊಂಡುಬಿಟ್ಟಿದ್ದೇವೆ ಅಥವಾ ಅನ್ಯ ಮಾರ್ಗವಿಲ್ಲದೆ ಒಪ್ಪಿಕೊಂಡಿದ್ದೇವೆ ಎನ್ನೋಣವೇ? ನಮ್ಮ ಪ್ರಜ್ಞಾಪೂರ್ವಕ(?) ಆಯ್ಕೆಯ ಪರಿಣಾಮವಾಗಿಯೇ ಶಾಸನಸಭೆಯನ್ನು ಪ್ರವೇಶಿಸಿ ನಂತರ ರಾಜಕೀಯ ಲಾಭಕ್ಕಾಗಿಯೋ, ವ್ಯಕ್ತಿಗತ ಅನುಕೂಲಕ್ಕಾಗಿಯೋ ರಾಜಕೀಯ ಸಂತೆಯಲ್ಲಿ ಬಿಕರಿಗೊಳಗಾಗುವ ಜನಪ್ರತಿನಿಧಿಗಳು ತಮಗೆ ತಾವೇ ಒಂದು ಬೆಲೆ ನಿಗದಿಪಡಿಸಿಕೊಳ್ಳುತ್ತಿದ್ದಾರೆ. ಈ ಮೌಲ್ಯಮಾಪನವನ್ನು ನಾವು ಎಲ್ಲಿಯೂ ಪ್ರಶ್ನಿಸುತ್ತಿಲ್ಲ. ಏಕೆಂದರೆ ಇದು ಸಾಕ್ಷಿ ಪುರಾವೆಗಳಿಲ್ಲದೆ, ಗುಪ್ತಗಾಮಿನಿಯಂತೆ ಹರಿಯುವ ಅಕ್ರಮ ಸಂಪತ್ತಿನ ಮೂಲಕ ನಡೆಯುವ ಒಂದು ಪ್ರಕ್ರಿಯೆ. ಬಿಕರಿಯಾಗುವ ಜನಪ್ರತಿನಿಧಿಗಳು, ಶಾಸನಸಭೆಯ ಮಾರುಕಟ್ಟೆಯ ಸೂತ್ರಧಾರಿಗಳು ಮತ್ತು ಕೊಳ್ಳುವ ಪ್ರಕ್ರಿಯೆಗೆ ಬಂಡವಾಳ ಒದಗಿಸುವ ಔದ್ಯಮಿಕ ಹಿತಾಸಕ್ತಿಗಳು ಈ ಮೂರೂ ವರ್ಗಗಳು ತೆರೆಮರೆಯಲ್ಲಿ ನಡೆಸುವ ಪ್ರಹಸನಗಳು ಕಾನೂನು ಅಥವಾ ಸಾಂವಿಧಾನಿಕ ನಿಯಮಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ಕೇಂದ್ರ ಸರಕಾರ ಅಕ್ರಮ ವಲಸಿಗರನ್ನು ಹೊರಹಾಕಲು ಶತಪ್ರಯತ್ನ ಮಾಡುತ್ತಿದೆ. ಇರಲಿ. ಆದರೆ ನಾವೂ ಒಮ್ಮೆ ಯೋಚಿಸೋಣ. ಸ್ವಾತಂತ್ರ್ಯಪೂರ್ವದ ಕೆಲವು ದಾರ್ಶನಿಕರ ಅವಿರತ ಶ್ರಮ, ಪ್ರಾಮಾಣಿಕತೆ ಮತ್ತು ಪಯತ್ನಗಳ ಮೂಲಕ ಈ ದೇಶದ ಸಾರ್ವಭೌಮ ಪ್ರಜೆಗಳಾದ ನಾವು ನಮ್ಮದೇ ಆದ ಮೌಲ್ಯಯುತ ಪ್ರಜಾಸತ್ತಾತ್ಮಕ ಸಮಾಜವನ್ನು ಕಟ್ಟಿಕೊಂಡಿದ್ದೇವೆ ಅಲ್ಲವೇ? ಈ ಸಮಾಜದ ನಿರ್ಮಾಣಕ್ಕೆ ಇತ್ತೀಚಿನವರೆಗೂ ಹಲವಾರು ಜೀವಗಳು ಬಲಿಯಾಗಿವೆ ಇನ್ನೂ ಬಲಿಯಾಗುತ್ತಲೇ ಇವೆ. ರಂಗಕರ್ಮಿ ಎಸ್. ರಘುನಂದನ್ ಕೇಂದ್ರ ನಾಟಕ ಅಕಾಡಮಿ ಪ್ರಶಸ್ತಿ ನಿರಾಕರಿಸುತ್ತಾ ಇದನ್ನು ಮತ್ತೊಮ್ಮೆ ನಮಗೆ ನೆನಪಿಸಿದ್ದಾರೆ. ನಾವು, ಅಂದರೆ ಸಂವಿಧಾನಕ್ಕೆ ಬದ್ಧರಾದ ಪ್ರಜೆಗಳು, ಕಟ್ಟಿಕೊಂಡಿರುವ ಪ್ರಜಾತಂತ್ರ ಮೌಲ್ಯಗಳ ಸಾಮ್ರಾಜ್ಯದಲ್ಲಿ ಇಂದು ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ ಎನಿಸುವುದಿಲ್ಲವೇ? ಮತದಾರರಿಗೆ ಹಣ ಹಂಚುವ ಮೂಲಕ ಮತವನ್ನು ಖರೀದಿಸುತ್ತಿರುವ ಈ ಅಕ್ರಮ ವಲಸಿಗರು ತಾವು ಹೂಡಿದ ಬಂಡವಾಳವನ್ನು ಮರಳಿ ಪಡೆಯಲು ತಮ್ಮನ್ನೇ ಮಾರಿಕೊಳ್ಳುತ್ತಿರುವುದನ್ನು ಕಂಡೂ ಕಾಣದಂತೆ ಏಕೆ ಸುಮ್ಮನಿದ್ದೇವೆ? ನಾವೇಕೆ ಈ ಅಕ್ರಮ ವಲಸಿಗರನ್ನು ಹೊರಹಾಕುವ ಯೋಚನೆ ಮಾಡಬಾರದು?

ತಮ್ಮ ಬದುಕು ಕಟ್ಟಿಕೊಳ್ಳಲು ವಲಸೆ ಹೋಗುವ ಶ್ರಮಜೀವಿಗಳು ಬೆವರು ಸುರಿಸಿ ದುಡಿದರೂ ಅವರ ಶ್ರಮದ ಫಲ ಅವರಿಗೆ ದಕ್ಕುವುದಿಲ್ಲ. ದೇಶದ ಸಂಪತ್ತು ಮತ್ತು ಶ್ರೀಮಂತಿಕೆ ವೃದ್ಧಿಸಲು ತಮ್ಮ ಮೂಲ ನೆಲೆಯನ್ನೂ ತೊರೆದು ವಲಸೆ ಹೋಗುವ ಶ್ರಮಜೀವಿಗಳಿಗೆ ''ಅಕ್ರಮ'' ಎಂದು ಹಣೆಪಟ್ಟಿ ಕಟ್ಟುವ ಮುನ್ನ, ನಮ್ಮ ಮೌಲ್ಯಯುತ ಸಮಾಜವನ್ನು ಹರಾಜು ಹಾಕುತ್ತಿರುವ ಅಕ್ರಮ ವಲಸಿಗರನ್ನು ಗುರುತಿಸುವುದು ನಮ್ಮ ಆದ್ಯತೆಯಾದರೆ ಒಳಿತಲ್ಲವೇ ? ಇವರು ಮಾಡುತ್ತಿರುವುದಾದರೂ ಏನು? ''ನಿಮ್ಮ ಅಮೂಲ್ಯ ಮತವನ್ನು ನಮಗೆ ಮಾರಿಬಿಡಿ ನಾವು ನಮ್ಮನ್ನೇ ಮಾರಿಕೊಳ್ಳುತ್ತೇವೆ'' ಎಂದು ಸಾರ್ವಜನಿಕವಾಗಿಯೇ ಹೇಳುತ್ತಿರುವ ಜನಪ್ರತಿನಿಧಿಗಳು ಆಡಳಿತ ವ್ಯವಸ್ಥೆಯ ಅಧಿಕಾರ ಕೇಂದ್ರಗಳನ್ನು ಔದ್ಯಮಿಕ ಮಾರುಕಟ್ಟೆಯ ನಿಯಂತ್ರಣಕ್ಕೆ ಒಪ್ಪಿಸುತ್ತಿರುವುದನ್ನು ನಾವು ಮೌನವಾಗಿಯೇ ಸಹಿಸಿಕೊಳ್ಳುತ್ತಿದ್ದೇವೆ ಅಥವಾ ಸ್ವೀಕರಿಸಿಬಿಟ್ಟಿದ್ದೇವೆಯೇ? ಗೃಹಿಣಿಯರು ಸಾಸಿವೆ ಡಬ್ಬಿಗಳಲ್ಲಿಟ್ಟ ಚಿಕ್ಕಾಸನ್ನೂ ಬಿಡದೆ ಹೊರಗೆಳೆದ ಆಡಳಿತ ವ್ಯವಸ್ಥೆಗೆ ಈ ಗುಪ್ತಗಾಮಿನಿಯ ಪರಿವೆ ಇಲ್ಲವೇ? ಇದೆ. ಆದರೆ ನಿಷ್ಕ್ರಿಯವಾಗಿರುವ ಸಾರ್ವಜನಿಕ ಪ್ರಜ್ಞೆ ಅವರಲ್ಲಿ ಭೀತಿ ಹುಟ್ಟಿಸುತ್ತಿಲ್ಲ ಅಲ್ಲವೇ?

ಭಾರತದ ಸಾರ್ವಭೌಮ ಪ್ರಜೆಗಳಾದ ನಾವು ಮತದ ಮೌಲ್ಯವನ್ನೇ ಅರಿತಿಲ್ಲ. ಮತಗಳನ್ನು ಖರೀದಿಸುವ ಹಲವು ಮಾರ್ಗಗಳನ್ನು ಭಾರತದ ಆಳುವ ವರ್ಗಗಳು ಕರಗತಮಾಡಿಕೊಂಡಿವೆ. ಬಹುಶಃ ಮುಂಬರುವ ದಿನಗಳಲ್ಲಿ ಇಲ್ಲಿಯೂ ಸಹ ಡಿಜಿಟಲೀಕರಣ ಜಾರಿಯಾಗಬಹುದು. ಮತ ಖರೀದಿಸುವವರನ್ನು ಖಂಡಿಸುತ್ತೇವೆ, ಮಾರಿಕೊಂಡವರನ್ನು ಖಂಡಿಸುತ್ತೇವೆ ಆದರೆ ತಮ್ಮನ್ನೇ ಮಾರಿಕೊಳ್ಳುವ, ಮತದಾರರಿಂದ ಆಯ್ಕೆಯಾದ ಜನಪ್ರತಿನಿಧಿಯನ್ನು ಮತ್ತೆ ಮತ್ತೆ ಆಯ್ಕೆ ಮಾಡುತ್ತಲೇ ಇದ್ದೇವೆ. ಇದಕ್ಕೆ ಕಾರಣ ಹಲವಾರು.

ಪಕ್ಷ, ಸಿದ್ಧಾಂತ, ತತ್ವ, ಜಾತಿ, ಸಮುದಾಯ ಇತ್ಯಾದಿ ಇತ್ಯಾದಿ. ಆದರೆ ಇಲ್ಲಿ ಅಪಮೌಲ್ಯಕ್ಕೊಳಗಾಗುವುದು ಏನು? ಮತದಾರರ ನಿಷ್ಠೆಯೋ, ಸಾಂವಿಧಾನಿಕ ಕರ್ತವ್ಯವೋ, ಜನಸಾಮಾನ್ಯರ ಪ್ರಾಮಾಣಿಕತೆಯೋ? ಅಥವಾ ಈ ದೇಶದ ಬಡಪಾಯಿ ಪ್ರಜೆಗಳ ಅಸಹಾಯಕತೆ ಮತ್ತು ಅನಿವಾರ್ಯತೆಗಳು ವಂದಿಮಾಗಧರ, ಪಟ್ಟಭದ್ರರ, ಸ್ವಾರ್ಥ ರಾಜಕಾರಣಿಗಳ ಬಂಡವಾಳವಾಗಿಬಿಟ್ಟಿವೆಯೇ? ಎಷ್ಟೊಂದು ಪ್ರಶ್ನೆಗಳು ಮೂಡುತ್ತವೆ ಅಲ್ಲವೇ? ಆದರೆ ಈ ಪ್ರಶ್ನೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತಿಲ್ಲ. ಅಂತರ್ಜಾಲ ಯುಗದಲ್ಲಿ ಪ್ರಶ್ನಾರ್ಥಕ ಚಿಹ್ನೆಗಳು ಎಮೋಜಿಗಳಂತೆ ಕಾಣಲಾರಂಭಿಸಿವೆ. ಹಾಗಾಗಿ ನಮ್ಮೆದುರಿನ ಗಂಭೀರ ಜ್ವಲಂತ ಸಮಸ್ಯೆಗಳೂ ನಮಗೆ ಮನರಂಜನೆಯಂತೆ ಕಾಣುತ್ತಿವೆ.

ಹಾಗಾಗಿಯೇ ತಮ್ಮ ಅಸಮಾಧಾನವನ್ನು ಹೊರಗೆಡಹಲು ಮತದಾರರ ಬಳಿ ಹೋಗದೆ ರೆಸಾರ್ಟ್‌ಗಳಲ್ಲಿ ತಂಗುವ ಶಾಸಕರ ಆಟಾಟೋಪಗಳು ಕನ್ನಡದ ವಿದ್ಯುನ್ಮಾನ ಮಾಧ್ಯಮಗಳಿಗೆ ಮನರಂಜನೆಯ ವಸ್ತುವಾಗುತ್ತದೆ. ನಿಮ್ಮ ಸಮಸ್ಯೆ ಏನು ಎಂದು ಈ ಜನ(ಧನ)ಪ್ರತಿನಿಧಿಗಳನ್ನು ಯಾರನ್ನಾದರೂ ಪ್ರಶ್ನಿಸಲಾಗಿದೆಯೇ? ಹೌದು ನಾವು ಪ್ರಶ್ನಿಸಲು ಸಿದ್ಧರಾಗಿದ್ದೇವೆ. ಆದರೆ ಕೈಗೆಟುಕದಂತೆ ಗಗನಚುಂಬಿ ರೆಸಾರ್ಟ್ ಕೋಣೆಗಳಲ್ಲಿ ಹುದುಗಿರುತ್ತಾರೆ. ಇಲ್ಲವಾದರೆ ಈಜುಕೊಳಗಳಲ್ಲಿ ಮುಳುಗಿರುತ್ತಾರೆ. ಇವರನ್ನು ಹೊರಗೆಳೆಯುವುದಾದರೂ ಹೇಗೆ ? ಮತ್ತದೇ ವಿಧಾನಸಭೆ, ಪೊಲೀಸರ ಸರ್ಪಗಾವಲು, ಗೂಟದ ಕಾರುಗಳು, ಬ್ಯಾರಿಕೇಡುಗಳು ಇತ್ಯಾದಿ. ನಮ್ಮ ಬಳಿಯೂ ಬ್ಯಾರಿಕೇಡುಗಳಿವೆ ಎಂದು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಂವಿಧಾನವೇ ನಮಗೆ ಈ ಅಡ್ಡಗೋಡೆಗಳನ್ನು ನೀಡಿದೆ. ಮತದಾನ ಕರ್ತವ್ಯ ಹೌದು, ಹಕ್ಕು ಹೌದು ಆದರೆ ಕಡ್ಡಾಯವಾದ ಮಾರುಕಟ್ಟೆಯ ಸರಕು ಅಲ್ಲ. ಅಲ್ಲವೇ? ಹಾಗಾದರೆ ನಮ್ಮ ಮತದ ಮೌಲ್ಯ ಏನು? ಮತ್ತದೇ ಪ್ರಶ್ನೆ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News