ಮಾಯಾವತಿ ಸೋದರನ 400 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಜಪ್ತಿ

Update: 2019-07-19 05:20 GMT
ಮಾಯಾವತಿ

ಹೊಸದಿಲ್ಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿಯವರ ಸಹೋದರ ಹಾಗೂ ಆತನ ಪತ್ನಿಗೆ ಸೇರಿದ 400 ಕೋಟಿ ರೂ. ಮೌಲ್ಯದ ವಾಣಿಜ್ಯ ನಿವೇಶನವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಬಿಜೆಪಿ ನಮ್ಮ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸಲು ಹತಾಶ ಪ್ರಯತ್ನ ನಡೆಸುತ್ತಿದೆ ಎಂದು ಬಿಎಸ್ಪಿ ನಾಯಕಿ ಗುರುವಾರವಷ್ಟೇ ಆಪಾದಿಸಿದ್ದರು.

ನೋಯ್ಡದಲ್ಲಿರುವ ಏಳು ಎಕರೆಯ ನಿವೇಶನವನ್ನು ಬಿಎಸ್ಪಿ ರಾಷ್ಟ್ರೀಯ ಉಪಾಧ್ಯಕ್ಷ ಆನಂದ್ ಕುಮಾರ್ ಹಾಗೂ ಅವರ ಪತ್ನಿ ವಿಚಿತೆರ್ ಲತಾ ಹೊಂದಿದ್ದು, ಇದನ್ನು ವಶಪಡಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆಯ ಬೇನಾಮಿ ನಿಷೇಧ ಘಟಕ ಜುಲೈ 16ರಂದು ತಾತ್ಕಾಲಿಕ ಆದೇಶ ಹೊರಡಿಸಿತ್ತು.

ಈ ನಿವೇಶನದಲ್ಲಿ ಪಂಚತಾರಾ ಹೋಟೆಲ್ ಮತ್ತು ಇತರ ಐಷಾರಾಮಿ ಸೌಲಭ್ಯಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, 2ಎ, ಸೆಕ್ಟರ್ 94, ನೋಯ್ಡ ವಿಳಾಸ ಹೊಂದಿ ನೋಂದಣಿಯಾಗಿದೆ. 28328.07 ಚದರ ಮೀಟರ್ ವಿಸ್ತೀರ್ಣದ ಈ ನಿವೇಶನದ ಮೌಲ್ಯ 400 ಕೋಟಿ ರೂ. ಎಂದು ಆದೇಶದಲ್ಲಿ ವಿವರಿಸಲಾಗಿದೆ.

ನಕಲಿ ಕಂಪನಿಗಳೂ ಒಳಗೊಂಡಂತೆ ಆರು ಕಂಪನಿಗಳ ಸಂಕೀರ್ಣ ಷೇರು ಜಾಲವನ್ನು ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದು, ಇವರು ಬೇನಾಮಿ ಆಸ್ತಿಯ ಫಲಾನುಭವಿಗಳಾಗಿದ್ದು, ಅವರ ಹೆಸರಿನಲ್ಲಿ ನಿವೇಶನ ಇದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

ವಿಷನ್ ಟೌನ್ ಪ್ಲಾನರ್ಸ್‌ ಪ್ರೈವೇಟ್ ಲಿಮಿಟೆಡ್, ಬಿಪಿಟಿಪಿ ಇಂಟರ್‌ನ್ಯಾಷನಲ್ ಟ್ರೇಡ್ ಸೆಂಟರ್ ಪ್ರೈವೇಟ್ ಲಿಮಿಟೆಡ್, ಯೂರೂ ಏಷ್ಯಾ ಮರ್ಕೆಂಟೈಲ್ ಪ್ರೈವೇಟ್ ಲಿಮಿಟೆಡ್, ಸನ್ನಿಕಾಸ್ಟ್ ಆ್ಯಂಡ್ ಫೋರ್ಜ್ ಪ್ರೈವೇಟ್ ಲಿಮಿಟೆಡ್, ಕರಿಷ್ಮಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆ್ಯಡ್ ಫಿನ್ ಕ್ಯಾಪಿಟಲ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಕಂಪನಿಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News