‘ನಾನು ಅಪಹರಣಕ್ಕೆ ಒಳಗಾಗಿಲ್ಲ’: ಶಾಸಕ ಶ್ರೀಮಂತ ಪಾಟೀಲ್ ಪತ್ರ
ಬೆಂಗಳೂರು, ಜು. 19: ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಅವರು ‘ನಾನು ಅಪಹರಣಕ್ಕೆ ಒಳಗಾಗಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಕುಮಾರಸ್ವಾಮಿ ವಿಶ್ವಾಸಮತ ಪ್ರಸ್ತಾವ ನಿರ್ಣಯ ಮಂಡನೆ ವೇಳೆಯಲ್ಲಿ ಶ್ರೀಮಂತ ಪಾಟೀಲ್ ಅವರ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ವಾಚನ ಮಾಡಿದರು. ಬೆಂಗಳೂರಿನ ರೆಸಾರ್ಟ್ನಿಂದ ತುರ್ತು ಕಾರ್ಯದ ನಿಮಿತ್ತ ಜು.17ಕ್ಕೆ ಚೆನ್ನೈಗೆ ತೆರಳಿದ್ದು ಆಗ ಎದೆನೋವು ಕಾಣಿಸಿಕೊಂಡಿತ್ತು.
ನಮ್ಮ ಕುಟುಂಬದ ವೈದ್ಯರ ಸಲಹೆ ಮೇರೆಗೆ ಮುಂಬೈ ಆಸ್ಪತ್ರೆಗೆ ದಾಖಲಾಗಿರುವೆ. ಇದು ಪೂರ್ವ ನಿಯೋಜಿತವಾಗಿದ್ದರೆ ನನ್ನ ಲೆಟರ್ಹೆಡ್ನಲ್ಲಿ ಪತ್ರ ಬರೆಯುತ್ತಿದ್ದೆ. ಹಠಾತ್ ಘಟನೆಯಾದರಿಂದ ವಿನಂತಿಸುತ್ತಿದ್ದೇನೆ. ಈ ಅಧಿವೇಶನದ ಇನ್ನುಳಿದ ಕಾರ್ಯ ಕಲಾಪಗಳಿಗೆ ಗೈರು ಹಾಜರಾಗಲು ಅನುಮತಿ ಕೋರಿದ್ದಾರೆಂದು ಸ್ಪೀಕರ್ ಪ್ರಕಟಿಸಿದರು.