ಅಸಂಘಟಿತ ರಂಗದ ಶೋಚನೀಯ ಸ್ಥಿತಿ

Update: 2019-07-22 18:27 GMT

1947ರಲ್ಲಿ ಸ್ವಾತಂತ್ರ್ಯ ದೊರಕಿದ ಬಳಿಕ ಭಾರತ ಹಲವು ರಂಗಗಳಲ್ಲಿ ಪ್ರಗತಿ ಕಂಡಿದೆ. ಆದರೆ ಅಸಂಘಟಿತ ವಲಯದ ನೌಕರರ ವಿಷಯದಲ್ಲಿ ಮಾನವ ಹಕ್ಕುಗಳ ಸಮಾನತೆ ಇನ್ನೂ ಸಾಧ್ಯವಾಗಿಲ್ಲ. ಅಸಂಘಟಿತ ವಲಯದ ಸದ್ಯದ ಸ್ಥಿತಿಯನ್ನು ಸ್ವಲ್ಪ ಗಮನಿಸೋಣ. ಭಾರತದಲ್ಲಿ ಅಸಂಘಟಿತ ವಲಯದಲ್ಲಿ 2015ರಲ್ಲಿ ದೇಶದ ಒಟ್ಟು ಐನೂರು ಮಿಲಿಯಕ್ಕೂ ಹೆಚ್ಚು ಕೆಲಸಗಾರರಲ್ಲಿ ಶೇ. 94ಕ್ಕಿಂತಲೂ ಹೆಚ್ಚು ಕೆಲಸಗಾರರು ದುಡಿಯುತ್ತಿದ್ದರು ಮತ್ತು 2006ರಲ್ಲಿ ದೇಶದ ರಾಷ್ಟ್ರೀಯ ಉತ್ಪನ್ನದ ಶೇ. 57ರಷ್ಟನ್ನು ಅಸಂಘಟಿತ ವಲಯ ಉತ್ಪಾದಿಸಿತ್ತು.

ಅಸಂಘಟಿತ ವಲಯದ ನೌಕರರ ಸಮುದಾಯವನ್ನು ಸರಕಾರ ನಾಲ್ಕು ಮುಖ್ಯ ಘಟಕಗಳಾಗಿ ವಿಂಗಡಿಸಿದೆ.

1 ಉದ್ಯೋಗಾಧರಿತ ವಿಭಾಗ: ಚಿಕ್ಕಪುಟ್ಟ ರೈತರು, ಭೂರಹಿತ ಕೃಷಿ ಕಾರ್ಮಿಕರು, ಬೀಡಿ ಕಟ್ಟುವವರು, ಕಟ್ಟಡ ನಿರ್ಮಾಣ ಕಾರ್ಮಿಕರು ಇತ್ಯಾದಿ.
2. ಉದ್ಯೋಗದ ಸ್ವರೂಪವನ್ನಾಧರಿಸಿ ವಿಭಜನೆ: ವಲಸೆ ಕಾರ್ಮಿಕರು ಜೀತದಾಳುಗಳು ಕಾಂಟ್ರಾಕ್ಟ್ ಕಾರ್ಮಿಕರು ಇತ್ಯಾದಿ.

3. ವಿಶೇಷವಾಗಿ ಸಂತ್ರಸ್ತರಾದ ಉದ್ಯೋಗಿಗಳು: ಕಲ್ಲು ತೆಗೆಯುವವರು ಜಾಡಮಾಲಿಗಳು, ತಲೆಯ ಮೇಲೆ ಹೊರೆ ಹೊರುವವರು, ವಾಹನಗಳಿಗೆ ಲೋಡು, ಅನ್ಲೋಡ್ ಮಾಡುವವರು ಇತ್ಯಾದಿ.

4. ಸೇವಾ ವಿಭಜನೆ: ಸೂಲಗಿತ್ತಿಯರು, ಮನೆಕೆಲಸ ಮಾಡುವವರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರುವವರು ಇತ್ಯಾದಿ.

 ಈ ಅಸಂಘಟಿತ ಉದ್ಯೋಗಿಗಳು ಸಂಘಟಿತರಾಗಿ ವ್ಯಾಪಕವಾದ ಯಾವುದೇ ಸಾಮಾಜಿಕ ಚಳವಳಿ ನಡೆಸುವ ಅವಕಾಶ ಪಡೆಯಲಿಲ್ಲ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ವಲಸೆ ಕಾರ್ಮಿಕರು ಒಂದೇ ಸ್ಥಳದಲ್ಲಿದ್ದುಕೊಂಡು ಕೆಲಸ ಮಾಡುವವರಿಗಿಂತ ತುಂಬಾ ಹೆಚ್ಚು ಪಾಡು ಪಡುತ್ತಾರೆ. ಇವರಿಗೆ ದೇಶದ ಸೀಮಿತ ಕಾರ್ಮಿಕ ಕಾನೂನುಗಳಿಂದ ಕೂಡ ಯಾವುದೇ ಸವಲತ್ತು ಸಿಗುವುದಿಲ್ಲ. ಇದಕ್ಕೆ ಇವರ ಹೆಸರು ನೋಂದಣಿಯಾಗದಿರುವುದು ಕಾರಣ.

ಕಾನೂನಿನ ಪ್ರಕಾರ ನೋಂದಣಿಯಾಗದೆ ಈ ಉದ್ಯೋಗಿಗಳು ಕನಿಷ್ಠ ವೇತನಕ್ಕೆ/ಕೂಲಿಗೆ ದುಡಿಯುತ್ತಾರೆ. ಇವರೇನಾದರೂ ಮಾಲಕರ ವಿರುದ್ಧ ಪ್ರತಿಭಟಿಸಿದಲ್ಲಿ ಅಮಾನತ್ತಾಗಿ ನೌಕರಿ ಕಳೆದುಕೊಳ್ಳುತ್ತಾರೆ. ದಿನವೊಂದರ 18 ಗಂಟೆಗಳಿಗೂ ಹೆಚ್ಚು ಅವಧಿಗೆ ಕೆಲಸ ಮಾಡುವ ಅವರ ಆರೋಗ್ಯ ಅವಶ್ಯಕತೆಗಳನ್ನು ಪೂರೈಸುವವರು ಯಾರೂ ಇಲ್ಲ. ಹೊರಲಾರದ ಸಾಲ ಮತ್ತು ಅಧಿಕ ಬಡ್ಡಿಯಿಂದಾಗಿ ಹಲವರು ತಮ್ಮ ಹಳ್ಳಿಗಳನ್ನು, ಊರನ್ನು ತೊರೆದು ಹೋಗಬೇಕಾಗುತ್ತದೆ. ನಗರಗಳಿಗೆ ಹೋಗಿ ದುಡಿದು ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪಉಳಿತಾಯ ಮಾಡಿ ತಮ್ಮ ಸಾಲ ತೀರಿಸುವ ಇವರ ಆಸೆ ಕೈಗೂಡುವುದಿಲ್ಲ. ನಗರಗಳಲ್ಲಿ ಇವರು ಅಮಾನವೀಯ ಪರಿಸ್ಥಿತಿಗಳನ್ನೆದುರಸಿ ಅತ್ಯಲ್ಪಮೊತ್ತಕ್ಕೆ ದುಡಿಯಬೇಕಾಗುತ್ತದೆ. ಪರಿಣಾಮವಾಗಿ ಸಾಲ ತೀರಿಸುವ ಇವರ ಭರವಸೆ ಕೇವಲ ಭರವಸೆಯಾಗಿಯೇ ಉಳಿಯುತ್ತದೆ. ಚಿಂತಾಜನಕ ಸ್ಥಿತಿಯಲ್ಲಿ ಬದುಕಬೇಕಾಗಿ ಬಂದಾಗ ಇವರ ಕೋಪ ಉಕ್ಕೇರಿ ಪರಿಣಾಮವಾಗಿ ಸಮಾಜದಲ್ಲಿ ಹಲವಾರು ಅಹಿತಕರ ಘಟನೆಗಳು ನಡೆಯುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಇಂತಹ ಹಲವಾರು ಹಿಂಸಾತ್ಮಕ ಘಟನೆಗಳು ನಡೆದಿವೆ. ಹಿರಿಯ ಆಡಳಿತ ಮಟ್ಟದ ಅಧಿಕಾರಿಗಳನ್ನು ಕೊಲ್ಲುವುದು (ಮಾರುತಿ ಸುಝುಕಿ) ಅಥವಾ ಇತ್ತೀಚೆಗೆ ನಡೆದ ಮುಷ್ಕರಗಳ ಪರಿಣಾಮವಾಗಿ ಪೊಲೀಸರು ನಿಷ್ಕ್ರಿಯವಾಗುವುದು (ನೊಯ್ಡಿ ಪೊಲೀಸ್ ಕಾಂಟ್ರಾಕ್ಟ್ ವ್ಯಾನ್ ಚಾಲಕರು ತಮಗೆ ಪಾವತಿಯಾಗದ ವೇತನ ಪಾವತಿಸುವಂತೆ ನೊಯ್ಡಾದಲ್ಲಿ ಮಾಡಿದ ಮುಷ್ಕರ), ಕೋಪೋದ್ರಿಕ್ತ ಪ್ಲಾಂಟೇಶನ್ ಕಾರ್ಮಿಕರಿಂದ ಅಸ್ಸಾಂನಲ್ಲಿ ಚಹಾ ತೋಟದ ದಂಪತಿಯನ್ನು ಕೊಂದು ಬೆಂಕಿ ಹಚ್ಚಿದ ಘಟನೆ ನಮ್ಮ ಮುಂದೆ ಇದೆ.

ಸರಕಾರ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಯೋಜನೆ ಗಳನ್ನು ಅನುಷ್ಠಾನ ಗೊಳಿಸದಿದ್ದಲ್ಲಿ ಅದು ದೇಶದಲ್ಲಿ ಬರ ಪ್ರಮಾಣದ ಹಿಂಸೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಪ್ರಾಣಹಾನಿ ಹಾಗೂ ದೇಶದ ಜನಸಂಖ್ಯೆಯ ಶೇ. 40ರಷ್ಟು ಇರುವ ದುರ್ಬಲರ ಶೋಷಣೆಗೆ ಸರಕಾರವೇ ಕಾರಣವಾಗುತ್ತದೆ. ಇಷ್ಟೇ ಅಲ್ಲದೆ 2030ರ ವೇಳೆಗೆ ದೇಶದಲ್ಲಿ ವೃದ್ಧರ ಸಂಖ್ಯೆ ಏರುತ್ತಾ ಹೋಗಿ ಇದು ಬೃಹತ್ ಪ್ರಮಾಣದ ಜನಸಂಖ್ಯಾ ಅಸಮತೋಲನ ಹಾಗೂ ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಸಾಮಾಜಿಕ ಗೊಂದಲ ಮತ್ತು ಅರಾಜಕತೆ ಉಂಟಾಗುತ್ತದೆ.

ಸರಕಾರವು ಅಸಂಘಟಿತ ರಂಗದ ಕಾರ್ಮಿಕರಿಗಾಗಿ, ಉದ್ಯೋಗಿಗಳಿ ಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿದೆಯಾದರೂ ಅವುಗಳೆಲ್ಲ ಸಮಸ್ಯೆಗಳ ಮರುಭೂಮಿಗೆ ನೀರು ಚಿಮುಕಿಸಿದಂತಾಗಿದೆ. ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಆರಂಭಿಸಿ ಜನನಿ ಸುರಕ್ಷಾ ಯೋಜನೆ, ಆಮ್ ಆದ್ಮಿ ಬಿಮಾ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯವರೆಗೆ ಹಲವಾರು ಯೋಜನೆಗಳು ಮತ್ತು 2019ರಲ್ಲಿ ಘೋಷಿಸಿದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ (ಪಿಎಂಎಸ್‌ವೈಎಂ) ಪರಿಣಾಮಕಾರಿಯಾಗಿ ಅನುಷ್ಠಾನ ಬಂದಿಲ್ಲ.
ಅಂತಿಮವಾಗಿ ದೇಶವನ್ನು ವರ್ಗ ಹಿಂಸೆಯಿಂದ ಪಾರು ಮಾಡಿ ದೇಶದ ನಾಗರಿಕರಿಗೆ ಬದುಕುವ ಸಮಾನ ಹಕ್ಕುಗಳು, ಅವಕಾಶಗಳು ದೊರಕಬೇಕಾದರೆ ಸರಕಾರವು ಇದುವರೆಗೆ ಘೋಷಿಸಲ್ಪಟ್ಟ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಹಿಂದು ಮುಂದು ನೋಡಕೂಡದು. ಇಲ್ಲವಾದಲ್ಲಿ ನಮ್ಮ ದೇಶ ಕೂಡಾ ಬ್ರೆಝಿಲ್, ಸಿರಿಯಾ ಇತ್ಯಾದಿ ದೇಶಗಳ ಹಾಗೆ ಸಾಮಾಜಿಕ ಭದ್ರತೆಯ ಕೊರತೆಯಿಂದಾಗಿ ಅಶಾಂತಿಯ ಕುಲುಮೆಯಾಗಬಹುದು.

ಕೃಪೆ: countercurrents.org  

Writer - ಎ. ಕರಣ್

contributor

Editor - ಎ. ಕರಣ್

contributor

Similar News