BIG Breaking News: ವಿಶ್ವಾಸಮತದಲ್ಲಿ ಸೋಲು: ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನ

Update: 2019-07-23 17:16 GMT

ಬೆಂಗಳೂರು, ಜು.23: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆ ಯಲ್ಲಿ ಮಂಡಿಸಿದ ವಿಶ್ವಾಸಮತ ಯಾಚನೆ ನಿರ್ಣಯದ ಮತದಾನದಲ್ಲಿ ಸೋಲುವ ಮೂಲಕ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ 14 ತಿಂಗಳ ಆಡಳಿತ ಅಂತ್ಯಗೊಂಡಿದೆ. ವಿಶ್ವಾಸಮತ ಯಾಚನೆ ನಿರ್ಣಯದ ಪರವಾಗಿ 99 ಹಾಗೂ ವಿರುದ್ಧವಾಗಿ 105 ಮತಗಳು ಚಲಾವಣೆಗೊಂಡವು.

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿರ್ಣಯ ಬಿದ್ದು ಹೋದ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿದ ಕುಮಾರಸ್ವಾಮಿ, ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಈ ವೇಳೆ ಅವರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್ ಸೇರಿದಂತೆ ಇನ್ನಿತರರು ಸಾಥ್ ನೀಡಿದರು.

ಜು.12ರಂದು ಆರಂಭವಾದ ವಿಧಾನಮಂಡಲದ ಅಧಿವೇಶನದಲ್ಲಿ ಸ್ವಯಂ ಪ್ರೇರಿತವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವುದಾಗಿ ತಿಳಿಸಿ, ಕಾಲಾವಕಾಶ ನಿಗದಿ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ, ಜು.15ರಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಜು.18ರಂದು ವಿಶ್ವಾಸಮತ ನಿರ್ಣಯ ಮಂಡನೆಗೆ ಕಾಲಾವಕಾಶ ನಿಗದಿಗೊಳಿಸಲಾಯಿತು. ಆದರೆ, ಬಹುಮತ ಕಳೆದುಕೊಂಡಿರುವ ಸರಕಾರ ವಿಶ್ವಾಸಮತ ಸಾಬೀತುಪಡಿಸುವವರೆಗೆ ಸದನದ ಕಲಾಪ ನಡೆಸುವುದು ಸೂಕ್ತವಲ್ಲ, ಯಾವುದೇ ವಿಧೇಯಕಗಳ ಅನುಮೋದನೆ ಅಥವಾ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವುದು ಸರಿಯಲ್ಲ ಎಂದು ವಿರೋಧ ಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸದನವನ್ನು ಜು.18ರವರೆಗೆ ಮುಂದೂಡಲಾಗಿತ್ತು.

ಜು.18ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ನಿರೀಕ್ಷೆಯಂತೆ ವಿಶ್ವಾಸಮತ ಯಾಚನೆ ನಿರ್ಣಯ ಮಂಡನೆ ಮಾಡಿದರು. ಸದನದಲ್ಲಿ ಈ ಬಗ್ಗೆ ಜು.18, 19, 22 ಹಾಗೂ 23ರಂದು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

ಚರ್ಚೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕರಾದ ಶಿವಲಿಂಗೇಗೌಡ, ಲಕ್ಷ್ಮಿ ಹೆಬ್ಬಾಳ್ಕರ್, ಜೆ.ಎನ್.ಗಣೇಶ್, ಎಚ್.ಕೆ.ಪಾಟೀಲ್ ಸೇರಿದಂತೆ ಹಲವಾರು ಮಂದಿ ಮಾತನಾಡಿದರು. ಆದರೆ, ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ವಿರೋಧ ಪಕ್ಷದ ಯಾವೊಬ್ಬ ಸದಸ್ಯರು ಮಾತನಾಡದಿರುವುದು ಅಚ್ಚರಿ ತಂದಿತು.

‘ಹದಿನಾಲ್ಕು ತಿಂಗಳ ಸಿಎಂ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿದ್ದು, ಇದು ಪ್ರಜಾಪ್ರಭುತ್ವದ ಗೆಲುವು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಬರ ಪರಿಹಾರ ಮತ್ತು ರೈತರಿಗೆ ಆದ್ಯತೆ ನೀಡಲಾಗುವುದು’

-ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ

ಬಿಜೆಪಿ ನಡೆಸಿದ ಪಕ್ಷಾಂತರ ನಾಟಕದ ಪರಿಣಾಮ ಹಾಗೂ ಕಾಂಗ್ರೆಸ್-ಜೆಡಿಎಸ್‌ನ ಕೆಲವು ಶಾಸಕರು ವಿರೋಧಿ ನೀತಿಗಳ ಕಾರಣದಿಂದಾಗಿ ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ವಿಶ್ವಾಸಮತಯಾಚನೆಯಲ್ಲಿ ವಿಫಲವಾಗಿದೆ.

-ಎಚ್.ಕೆ.ಪಾಟೀಲ್, ಮಾಜಿ ಸಚಿವ

ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ರಾಕ್ಷಸ ಸರಕಾರ ಪತನವಾಗಿದೆ. ಮೈತ್ರಿ ಸರಕಾರ ಪತನದಿಂದ ನಮಗೇನು ಬೇಸರವಾಗಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನಮಗೇನು ಪಾಪ ಪ್ರಜ್ಞೆ ಕಾಡುತ್ತಿಲ್ಲ. ಸದನದಲ್ಲಿ ನನ್ನನ್ನು ವಿರೋಧಿಸಿದವರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗಿರುವವರೇ ಎಂಬುದನ್ನು ನೆನಪು ಮಾಡಿಕೊಳ್ಳಲಿ.

-ವಿಶ್ವನಾಥ್, ಜೆಡಿಎಸ್ ಅತೃಪ್ತ ಶಾಸಕ

ವಿಶ್ವಾಸಮತ ಯಾಚನೆಯಲ್ಲಿ ಬಿಜೆಪಿಗೆ ಜಯವಾಗಿದೆ. ಇನ್ನು ಕೆಲವೆ ದಿನಗಳಲ್ಲಿ ಸರಕಾರ ರಚಿಸುವ ವಿಶ್ವಾಸವಿದೆ. ಬಿಜೆಪಿ ಶಾಸಕರ ಶಿಸ್ತು, ಜನತೆಯ ಬೆಂಬಲದಿಂದ ನಾವು ಗೆದ್ದಿದ್ದೇವೆ. ರಾಜ್ಯದಲ್ಲಿ ತಲೆದೋರಿರುವ ಬರಗಾಲಕ್ಕೆ ಸ್ಪಂದಿಸುವುದಕ್ಕೆ ಮೊದಲ ಆದ್ಯತೆ. ನೀರಾವರಿ ಯೋಜನೆಗೆ ಒತ್ತು ಕೊಡಲು ನಮ್ಮ ನಾಯಕರಿಗೆ ಮನವಿ ಮಾಡಿಕೊಳ್ಳುತ್ತೇವೆ.

-ಮಾಧುಸ್ವಾಮಿ, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News