ಎಡಪಂಥ-ಎಡಪಕ್ಷಗಳ ನಡುವೆ ಕಂದಕ ನಿವಾರಣೆಯಾಗಲಿ: ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಆ.2: ಎಡಪಕ್ಷ ಹಾಗೂ ಎಡಪಂಥೀಯರ ನಡುವೆ ಬಹುದೊಡ್ಡ ಕಂದಕವಿದ್ದು, ಇದನ್ನು ಸರಿಪಡಿಸಿಕೊಳ್ಳಲು ಗಂಭೀರ ಚಿಂತನೆಯ ಅಗತ್ಯವಿದೆ ಎಂದು ಹಿರಿಯ ಸಾಹಿತಿ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಶುಕ್ರವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನವ ಕರ್ನಾಟಕ ಹಾಗೂ ಕ್ರಿಯಾ ಪ್ರಕಾಶನದಿಂದ ಕಾರ್ಲ್ಮಾರ್ಕ್ಸ್ 200 ನೆ ವರ್ಷಾಚರಣೆಯ ಅಂಗವಾಗಿ ಪ್ರಕಟಿಸುತ್ತಿರುವ ಮಾರ್ಕ್ಸ್ರ ‘ಬಂಡವಾಳ’ ಸಂಪುಟ-1 ಕನ್ನಡ ಅನುವಾದ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದಲ್ಲಿ ಎಡಪಂಥೀಯ ಸಿದ್ಧಾಂತಕ್ಕೆ ಸೋಲು ಹಾಗೂ ಸಾವು ಎರಡೂ ಇಲ್ಲ. ಆದರೆ, ಎಡಪಕ್ಷಗಳಿಗೆ ಖಂಡಿತ ಸೋಲಿದೆ. ಕೇಂದ್ರದಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ 60ರಷ್ಟು ಸಂಸದರಿದ್ದರು. ಆದರೆ, ಈಗ ಕೇವಲ ಮೂರು-ನಾಲ್ಕು ಸ್ಥಾನಗಳಿಗೆ ಇಳಿದಿದ್ದಾರೆ. ಈ ಪರಿಸ್ಥಿತಿಗೆ ಕಾರಣವೇನು ಎಂಬುದನ್ನು ಎಡಪಕ್ಷಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.
ಎಡಪಂಥೀಯ ಚಿಂತನೆಯುಳ್ಳವರು ಎಷ್ಟು ಜನರು ಎಡಪಕ್ಷಗಳ ಕಡೆ ಒಲವು ತೋರುತ್ತಿದ್ದಾರೆ, ಎಷ್ಟರ ಮಟ್ಟಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಳಗೊಳ್ಳುತ್ತಿದ್ದಾರೆ ಎಂಬುದನ್ನು ಯೋಚಿಸಬೇಕು. ಸೈದ್ಧಾಂತಿಕವಾಗಿ ಕಾರ್ಯಕರ್ತರನ್ನು ಬೆಳೆಸುವುದರಲ್ಲಿ ತಪ್ಪು ಮಾಡಿದ್ದೇವಾ ಎಂಬುದನ್ನು ನೋಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಕಾರ್ಯತಂತ್ರ ಬಹುಮುಖ್ಯವಾದುದಾಗಿದ್ದು, ಅದರಲ್ಲಿ ಸೋತಿದ್ದೇವಾ ಎಂದು ನೋಡಬೇಕಿದೆ. ಇಲ್ಲದಿದ್ದರೆ ಮತ್ತೊಂದು ಚಾರಿತ್ರಿಕ ಪ್ರಮಾದವನ್ನು ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಮಾರ್ಕ್ಸ್ವಾದ ಭಾರತಕ್ಕೆ ಮದ್ದಾಗಬಲ್ಲದು ಎಂಬುದನ್ನು ಅಂಬೇಡ್ಕರ್ ಹೇಳಿದ್ದರು. ಇದೇ ಸಂದರ್ಭದಲ್ಲಿ ಅವರು ಮಾರ್ಕ್ಸ್ವಾದ ಉಲ್ಲಂಘಿಸಲಾಗದ ವೇದವಾಗಬಾರದು ಎಂದೂ ಹೇಳಿದ್ದರು. ಅಲ್ಲದೆ, ಲೆನಿನ್ ಇದೇ ಮಾತನ್ನೂ ಹೇಳಿದ್ದಾರೆ. ಹೀಗಾಗಿ, ನಮ್ಮ ಸಿದ್ಧಾಂತಗಳನ್ನು ಪರಸ್ಪರ ಓರೆಗಲ್ಲಿಗೆ ಹಚ್ಚಿಕೊಳ್ಳಬೇಕಾಗಿದೆ. ಮೆದುಳಿನ ರಾಜಕಾರಣದಿಂದ ಮನಸ್ಸಿನ ರಾಜಕಾರಣಕ್ಕೆ ಬರಬೇಕು. ವಿವಿಧ ವಾದಗಳು, ಸಿದ್ದಾಂತಗಳ ಒರೆಗಲ್ಲಿನಲ್ಲಿ ಮಾರ್ಕ್ಸ್ ಸಿದ್ದಾಂತ ಮತ್ತಷ್ಟು ಬೆಳೆಯಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.
ಸೈದ್ದಾಂತಿಕ ರಾಜಕಾರಣಕ್ಕೆ ಬೇಕಾದ ಎಲ್ಲ ಪ್ರೇರಣೆ ಶಕ್ತಿಯನ್ನು ಬಂಡವಾಳ ಕೃತಿ ನೀಡುತ್ತದೆ. ಇಂದಿನ ಸಂದರ್ಭದಲಿ ಸೈದ್ದಾಂತಿಕ ರಾಜಕಾರಣದ ಜಾಗವನ್ನು ಸಮಯ ಸಾಧಕ ರಾಜಕಾರಣ ಆಕ್ರಮಿಸಿಕೊಳ್ಳುತ್ತಿದೆ. ತಾತ್ವಿಕ ಪ್ರಜಾಪ್ರಭುತ್ವವನ್ನು ತಾಂತ್ರಿಕ ಪ್ರಜಾಪ್ರಭುತ್ವ ಆವರಿಸಿಕೊಳ್ಳುತ್ತಿದೆ. ಹೀಗಾಗಿ, ಮಾರ್ಕ್ಸ್ವಾದ ಇಂದಿಗೆ ಪ್ರಸ್ತುತವಾಗುತ್ತದೆ ಎಂದ ಅವರು, ಮಾರ್ಕ್ಸ್ವಾದ ತಾತ್ವಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದೆ ಎಂದು ನುಡಿದರು.
ವಿಚಾರಗಳ ಸಮ್ಮಿಲನ ಅಗತ್ಯ: ಮಾರ್ಕ್ಸ್ವಾದವನ್ನು ದೇಶದ ಬೇರೆ ಬೇರೆ ವಾದಗಳೊಂದಿಗೆ ಸಮ್ಮಿಲನವಾಗಿಸಬೇಕಿದೆ. ಮಾರ್ಕ್ಸ್ಸ್ರ ‘ಬಂಡವಾಳ’ ಕೃತಿಯ ಆಶಯಗಳನ್ನು ಎಲ್ಲ ವಾದಗಳೊಂದಿಗೆ ವಿಚಾರ ವಿನಿಮಯವಾಗಬೇಕಾದ ಅಗತ್ಯವಿದೆ. ಅಂತರ್ರಾಷ್ಟ್ರೀಯ ಮಟ್ಟದ ಕೃತಿಯೊಂದು ಎಲ್ಲದರೊಂದಿಗೆ ಚರ್ಚೆಯಾದಾಗಲೇ ಬಂಡವಾಳ ಕೃತಿಯ ಅನುವಾದ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ, ಈ ಕೃತಿಯು ಜಡಗಟ್ಟಿದ ಕೃತಿಯಂತಾಗುತ್ತದೆ ಎಂದು ಹೇಳಿದರು.
ಎಡಪಂಥೀಯರು ಒಟ್ಟುಗೂಡಬೇಕು: ದೇಶದಲ್ಲಿರುವ ಎಲ್ಲ ಕಮ್ಯುನಿಸ್ಟರು, ಎಡಪಂಥೀಯರು ಒಟ್ಟಾಗಬೇಕಾದ ಅಗತ್ಯವಿದೆ. ತಮ್ಮ ಮೂಲ ಸಿದ್ಧಾಂತಗಳನ್ನು ಜತೆಯಲ್ಲಿಯೇ ಇಟ್ಟುಕೊಂಡು ಸಂಯುಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭೀಕರ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಬರಗೂರು ಆತಂಕ ವ್ಯಕ್ತಪಡಿಸಿದರು.
ಬಂಡವಾಳ ಕೃತಿಯು ಮಾರ್ಕ್ಸ್ವಾದಕ್ಕೆ ಮೂಲ ಭೂಮಿಕೆ ಒದಗಿಸಿಕೊಟ್ಟ ವಿಶ್ಲೇಷಣಾತ್ಮಕ ಕೃತಿಯಾಗಿದೆ. ಅಲ್ಲದೆ, ಇದು ಸ್ವಯಂ ಸಿದ್ಧಾಂತವಾಗಿ ರೂಪಗೊಂಡಿದೆ. ಲೋಹಿಯಾವಾದ, ಅಂಬೇಡ್ಕರ್ ವಾದ ಸೇರಿದಂತೆ ಎಲ್ಲ ಪ್ರಗತಿಪರ ಸಿದ್ಧಾಂತಗಳು ನಾವು ಕ್ರೋಡೀಕರಿಸಿದ್ದಾಗಿದೆ. ಮಾರ್ಕ್ಸ್ವಾದ ಸೈದ್ಧಾಂತಿಕತೆಗೆ ಬೇಕಾದ ಮೂಲವನ್ನು ಕೊಟ್ಟಿದೆ.
-ಬರಗೂರು ರಾಮಚಂದ್ರಪ್ಪ
ಸೈದ್ದಾಂತಿಕ ಶ್ರೇಷ್ಠತೆಯ ಸೊಕ್ಕು ನಮ್ಮ ಸೋಲಿಗೆ ಕಾರಣವಾಗುತ್ತದೆ. ಹೀಗಾಗಿ, ಅದರಿಂದ ಎಡಪಕ್ಷಗಳು ಹೊರಗೆ ಬರಬೇಕು. ನನ್ನ ಸಿದ್ಧಾಂತ ಶ್ರೇಷ್ಠ ಎಂದು ಹೇಳಲು ಮನುಸ್ಮತಿ ಮಾತ್ರ ಸಾಧ್ಯ, ಪ್ರಗತಿಪರ ಸಿದ್ಧಾಂತದಿಂದ ಆಗುವುದಿಲ್ಲ
-ಬರಗೂರು ರಾಮಚಂದ್ರಪ್ಪ