ಮೆಟ್ರೋ ಬೋಗಿಗೆ ಕಲ್ಲೆಸೆದ ಕಿಡಿಗೇಡಿಗಳು

Update: 2019-08-04 18:14 GMT

ಬೆಂಗಳೂರು, ಆ.4: ನಮ್ಮ ಮೆಟ್ರೋ ರೈಲಿನ ಬೋಗಿಗಳಿಗೆ ಕಿಡಿಗೇಡಿಗಳು ಕಲ್ಲು ಎಸೆದು ಜಖಂಗೊಳಿಸಿದ್ದಾರೆ.

ನಗರದ ಮಂತ್ರಿ ಮಾಲ್ ಮತ್ತು ಶ್ರೀರಾಂಪುರ ನಿಲ್ದಾಣದ ಮಾರ್ಗ ಮಧ್ಯೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಸುರಂಗ ಮಾರ್ಗದಿಂದ ರೈಲು ಹೊರ ಬರುತ್ತಿದ್ದಂತೆ ಕಲ್ಲು ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಗಾಜಿನ ಪರದೆ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

ಮಂತ್ರಿ ಮಾಲ್‌ನ ಸುರಂಗದಿಂದ ಹೊರ ಬರುತ್ತಿದ್ದ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದಾಗಿ ಗಾಜಿನ ಪರದೆ ಜಖಂಗೊಂಡಿದೆ. ಅಷ್ಟೇ ಅಲ್ಲದೆ, ಮೆಟ್ರೋ ರೈಲು ಮಾರ್ಗದ ಮಧ್ಯೆ ಕಸದ ಬ್ಯಾಗ್ ಎಸೆದಿದ್ದು ರವಿವಾರ ಮುಂಜಾನೆ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ರೈಲು ನಿಲ್ಲಿಸಿ ಬ್ಯಾಗ್‌ಗಳನ್ನು ತೆರವು ಮಾಡಿದ ನಂತರ ಓಡಾಟ ಆರಂಭಿಸಲಾಯಿತು ಎಂದು ಹೇಳಲಾಗುತ್ತಿದೆ.

ಕಿಡಿಗೇಡಿಗಳ ಕೃತ್ಯದಿಂದ ಕಂಗೆಟ್ಟಿರುವ ಮೆಟ್ರೋ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯದಿಂದ ಬೇಸತ್ತ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News