ಮಹಿಳೆಯನ್ನು ಬೆದರಿಸಿ, ಚಿನ್ನಾಭರಣ ಸುಲಿಗೆ
Update: 2019-08-11 16:14 GMT
ಬೆಂಗಳೂರು, ಆ.11: ಮಾರಕಾಸ್ತ್ರಗಳಿಂದ ಮಹಿಳೆಯೊಬ್ಬಕೆಯನ್ನು ಬೆದರಿಸಿ, ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ನಿವಾಸಿ ವಸಂತಾ (45) ಎನ್ನುವವರ ಮನೆ ಮುಂದೆ ತೆರಳಿದ ಮೂವರು ದುಷ್ಕರ್ಮಿಗಳು, ಕುಡಿಯಲು ನೀರು ಕೊಡುವಂತೆ ಕೇಳಿದ್ದಾರೆ. ನೀರು ಕೊಡಲೆಂದು ವಸಂತಾ ಅವರು ಮನೆಯ ಒಳಗೆ ತೆರಳಿದ ನಂತರ ಹಿಂದೆಯೇ ಮನೆಯೊಳಗೆ ನುಗ್ಗಿದ ಮೂವರು, ಮನೆಯ ಮುಖ್ಯದ್ವಾರವನ್ನು ಮುಚ್ಚಿ, ಚಾಕುವಿನಿಂದ ಬೆದರಿಸಿ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ದುಷ್ಕರ್ಮಿಗಳು ದೋಚಿರುವ ಒಟ್ಟು ಚಿನ್ನಾಭರಣಗಳ ಮೌಲ್ಯ 4 ಲಕ್ಷ ರೂ.ಗಳೆಂದು ಪೊಲೀಸರು ಅಂದಾಜಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.