ಹಣಬಲವುಳ್ಳ ಗೋಪಾಲಯ್ಯರನ್ನು ಸೋಲಿಸಬೇಕು: ಎಚ್.ಡಿ.ದೇವೇಗೌಡ

Update: 2019-08-18 16:09 GMT

ಬೆಂಗಳೂರು, ಆ.18: ಅನರ್ಹಗೊಂಡಿರುವ ಶಾಸಕ ಗೋಪಾಲಯ್ಯರ ಹಿಂದೆ ಬೇರೊಂದು ಶಕ್ತಿಯಿದ್ದು, ನಾನದನ್ನು ಹೇಳುವುದಿಲ್ಲ. ಹಣಬಲವುಳ್ಳ ಅವರನ್ನು ಸೋಲಿಸುವುದು ನಮ್ಮ ಗುರಿಯಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋಪಾಲಯ್ಯನ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಅವರಿಗೆ ಪಕ್ಷ ಎಲ್ಲವನ್ನೂ ನೀಡಿತ್ತು. ಆದರೂ, ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅಂತಹವರು ಸೋಲಿಸಬೇಕು. ಅದಕ್ಕಾಗಿ ನಾನೇ ಪ್ರತಿಯೊಂದು ವಾರ್ಡ್‌ಗೂ ಬರುತ್ತೇನೆ ಎಂದು ತಿಳಿಸಿದರು.

ಗೋಪಾಲಯ್ಯ ಚೆನ್ನಾಗಿ ಬೆಳೆದಿದ್ದಾರೆ. ಹಣದ ಶಕ್ತಿ ಅವರಿಗಿದೆ, ನಮಗಿಲ್ಲ. ಅವರ ಮುಂದೆ ನೀವು ಪ್ರಾಮಾಣಿಕವಾಗಿ ಹೋರಾಡಬೇಕು. ಯಾವುದೇ ಆಮಿಷಕ್ಕೆ ಒಳಗಾಗಬೇಡಿ. ಪ್ರತಿವಾರ ನಿಮ್ಮ ಬಳಿ ಬರುತ್ತೇನೆ, ವಾರ್ಡ್‌ಗೆ ಬಂದು ಪಕ್ಷ ಕಟ್ಟುತ್ತೇನೆ ಎಂದು ಅವರು ಭರವಸೆ ನೀಡಿದರು.

ವ್ಯಕ್ತಿ ನಿಂದನೆ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ಗೋಪಾಲಯ್ಯ ಅವರ ಪತ್ನಿಯನ್ನು ಹಣಕಾಸು ಸಮಿತಿ ಅಧ್ಯಕ್ಷೆಯನ್ನಾಗಿ ಮಾಡಿದ್ದೆವು. ಆದರೆ, ಅವರು ಬಿಜೆಪಿಗೆ ಹೋಗಿ ಮೇಯರ್ ಆಗುವ ಯೋಚನೆ ಮಾಡುತ್ತಿದ್ದಾರೆ ಎಂದು ದೇವೇಗೌಡ ಕಿಡಿಕಾರಿದರು.

ಗೋಪಾಲಯ್ಯಗೆ ಜೆಡಿಎಸ್ ಎಲ್ಲ ರೀತಿಯ ಸಹಕಾರ ನೀಡಿದೆ. ಈ ಹಿಂದೆ ಅವರ ಮನೆ ಮುಂದೆ ಪೋಲಿಸರು ಬಂದು ನಿಂತಾಗ ಏನಾಯಿತು? ಅವರ ಪತ್ನಿಯನ್ನು ಉಪಮೇಯರ್ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಅದಕ್ಕೆ ಮರು ಮಾತಿಲ್ಲದೆ ಒಪ್ಪಿಕೊಂಡೆವು ಎಂದು ತಿಳಿಸಿದರು.

ಪ್ರತಿವರ್ಷ ಒಂದಲ್ಲ ಒಂದು ಸಮಿತಿ ಸದಸ್ಯರನ್ನಾಗಿ ಗೋಪಾಲಯ್ಯ ಅವರ ಪತ್ನಿಯನ್ನು ನೇಮಿಸಿದ್ದೆವು. ಎಲ್ಲ ರೀತಿಯ ಅಧಿಕಾರ ನೀಡಿದರೂ ಅವರು ನಮ್ಮನ್ನು ಬಿಟ್ಟು ಹೊದರು. ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ಈ ಕ್ಷೇತ್ರದ ಜನತೆ ಮೇಲೆ ನನಗೆ ನಂಬಿಕೆ ಇದೆ. ಈ ಪಕ್ಷವನ್ನು ಉಳಿಸಿಕೊಳ್ಳುವ ಶಕ್ತಿ ನಮಗಿದೆ ಎಂದು ಹೇಳಿದರು. ಉಪ ಚುನಾವಣೆ ಇರಬಹುದು, ನೇರ ಚುನಾವಣೆಯೇ ಬರಬಹುದು, ನೀವೆಲ್ಲಾ ಸಿದ್ಧರಾಗಿರಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಕಾಂಗ್ರೆಸ್ ಬಳಿ ನಾನು ಹೋಗಿರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಖರ್ಗೆ ಅವರ ಹೆಸರನ್ನೇ ನಾನು ಸೂಚಿಸಿದ್ದೆ. ಈ ಹಿಂದೆ ಅನುಭವಿಸಿದ ನೋವು, ಮತ್ತೆ ಬರುವುದು ಬೇಡ ಎಂದು ಹಾಗೆ ಹೇಳಿದ್ದೆ. ಆದರೆ, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್‌ನವರು ಹೇಳಿದರು. ಗುಲಾಂ ನಬಿ ಅಜಾದ್, ಗೆಹ್ಲೊಟ್ ಹಠ ಹಿಡಿದರು. ಹಾಗಾಗಿಯೇ ನಾನು ಒಪ್ಪಿಕೊಂಡೆ ಎಂದು ದೇವೇಗೌಡರು ತಿಳಿಸಿದರು.

ದೇಶದಲ್ಲಿ ಏಕಚಕ್ರಾಧಿಪತ್ಯ ವ್ಯವಸ್ಥೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಬರಲಿದೆ. ಇದನ್ನು ನೀವು ಎದುರಿಸಲು ಸಿದ್ಧರಾಗಬೇಕು. ಕೈ ಮುಗಿದು ಪ್ರಾರ್ಥಿಸುವೆ, ಈ ಕ್ಷೇತ್ರವನ್ನು ನಾವು ಮತ್ತೆ ಗೆಲ್ಲಬೇಕಿದ್ದು, ಪ್ರಾದೇಶಿಕ ಪಕ್ಷಗಳ ಶಕ್ತಿ ತೋರಿಸಬೇಕಿದೆ.

-ದೇವೇಗೌಡ ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News